ಶಾಂತಿ, ಸೌಹಾರ್ದತೆ, ಅಭಿವೃದ್ಧಿಗಾಗಿ ಎಸ್ಡಿಪಿಐ ಸ್ಪರ್ಧೆ- ಇಲ್ಯಾಸ್ ಅಹ್ಮದ್ ತುಂಬೆ
ಪುತ್ತೂರು: ಬಿಜೆಪಿಯ ಕೋಮುವಾದ ಮತ್ತು ಕಾಂಗ್ರೆಸ್ನ ನಕಲಿ ಜಾತ್ಯಾತೀತತೆಯಿಂದಾಗಿ ಜಿಲ್ಲೆಯಲ್ಲಿ ಕೋಮು ದ್ರುವೀಕರಣವಾಗುತ್ತಿದೆ. ಇದನ್ನು ತಡೆದು ಜಿಲ್ಲೆಯಲ್ಲಿ ಶಾಂತಿ, ಸೌಹಾರ್ದತೆ, ಭಾತೃತ್ವಕ್ಕಾಗಿ ಎಸ್ಡಿಪಿಐ ಜಿಲ್ಲೆಯಲ್ಲಿ ಸ್ಪರ್ಧಿಸುತ್ತಿದೆ ಎಂದು ಎಸ್ಡಿಪಿಐ ಅಭ್ಯರ್ಥಿ ಇಲ್ಯಾಸ್ ಅಹ್ಮದ್ ತುಂಬೆ ತಿಳಿಸಿದರು.
ಅವರು ಸೋಮವಾರ ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಎಸ್ಡಿಪಿಐ ಪಕ್ಷವು ಬಿಜೆಪಿಯನ್ನು ಸೈದ್ದಾಂತಿಕ ನೆಲೆಯಲ್ಲಿ ಹಾಗೂ ಕಾಂಗ್ರೆಸ್ ಪಕ್ಷವನ್ನು ನಕಲಿ ಜಾತ್ಯಾತೀತತೆಯ ಹಿನ್ನಲೆಯಲ್ಲಿ ವಿರೋಧಿಸುತ್ತಿದೆ. ಈ ಬಾರಿ ಜಿಲ್ಲೆಯಲ್ಲಿ ತ್ರಿಕೋನ ಸ್ಪರ್ಧೆ ನಡೆಯಲಿದ್ದು, ಎಸ್ಡಿಪಿಐ ಗೆಲುವು ಪಡೆಯಲಿದೆ. ಆಂಗ್ಲ ಭಾಷೆ ತಿಳಿಯದ ಬಿಜೆಪಿ ಅಭ್ಯರ್ಥಿ ಹಾಗೂ ಕ್ರಿಮಿನಲ್ ಹಿನ್ನಲೆಯುಳ್ಳ ಕಾಂಗ್ರೆಸ್ ಅಭ್ಯರ್ಥಿಯನ್ನು ಮತದಾರರು ಬೆಂಬಲಿಸುವುದಿಲ್ಲ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಅವರ ಮೇಲೆ ಹಲವು ಕ್ರಿಮಿನಲ್ ಆರೋಪಗಳಿವೆ. ಅವರ ಪಕ್ಷದ ನಾಯಕರ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಮುಸ್ಲಿಂ ನಾಯಕರ ಮೇಲೆ ಹಲ್ಲೆ ನಡೆಸಿದ್ದಾರೆ. ಇಂತಹ ವ್ಯಕ್ತಿಗೆ ಜಿಲ್ಲೆಯ ಪ್ರಜ್ಞಾವಂತ ಮತದಾರರು ಕಣ್ಣು ಮುಚ್ಚಿ ಮತ ಹಾಕುವುದಿಲ್ಲ. ಕಾಂಗ್ರೆಸ್ ಈತನಕ ಮುಸ್ಲಿಂ ಮತ್ತು ಕ್ರಿಶ್ಚನ್ ಸಮುದಾಯದ ಅಭಿವೃದ್ಧಿ ಮಾಡಿಲ್ಲ. ಸಂಸದರಾಗಿ ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡದಿರುವ ಬಿಜೆಪಿ ಅಭ್ಯರ್ಥಿಗೆ ಮತ ನೀಡಿದರೆ ಜಿಲ್ಲೆಯ ಜನತೆಗೇ ನಷ್ಟವಾಗಲಿದೆ. ಕಾಂಗ್ರೆಸ್ ಮತ್ತು ಬಿಜೆಪಿಗೆ ಅಭಿವೃದ್ಧಿ ಕೆಲಸ ಗೊತ್ತಿಲ್ಲ. ಕೊಲೆ ರಾಜಕೀಯ ಮಾತ್ರ ಅವರಿಗೆ ಗೊತ್ತಿದೆ. ಭಾವನೆಗಳ ಮೂಲಕ ಮತ ಗಳಿಸುವ ತಂತ್ರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಈ ದೇಶದಲ್ಲಿ ಹಿಂದುತ್ವ ರಾಷ್ಟ್ರ ಕಲ್ಪನೆ ಸರಿಯಲ್ಲ. ಯಾವುದೇ ಪಕ್ಷವು ವ್ಯಕ್ತಿ ಕೇಂದ್ರಿತವಾಗಿರಬಾರದು. ಪ್ರಧಾನಿಗೆ ನರೇಂದ್ರ ಮೋದಿ, ರಾಹುಲ್ ಗಾಂಧಿ ಬ್ರಾಂಡ್ ಮಾಡುವುದು ಪ್ರಜಾಪ್ರಭುತ್ವಕ್ಕೆ ಪೂರಕವಲ್ಲ. ಈ ದೇಶದಲ್ಲಿ ಮುಸ್ಲಿಮರಿಗೂ ಅಧಿಕಾರದ ಹಕ್ಕುಗಳಿವೆ. ಇದನ್ನು ಪ್ರಶ್ನಿಸಿದರೆ ನಮಗೆ ಕೋಮುವಾದಿ ಗಳು ಎಂದು ಲೇಬಲ್ ಅಂಟಿಸಲಾಗುತ್ತಿದೆ. ಕಾಂಗ್ರೆಸ್ ನಮಗೆ ಕೋಮುವಾದಿ ಲೇಬಲ್ ಅಂಟಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಎಸ್ಡಿಪಿಐ ಗೆಲವು ಪಡೆದಲ್ಲಿ ಜಿಲ್ಲೆಯಲ್ಲಿ ಪರಿಸರ ಸ್ನೇಹಿ ಕೈಗಾರಿಕೆ, ಮರಳು ಮಾಫಿಯಾ ತಡೆ, ರಾಷ್ಟ್ರೀಯ ಹೆದ್ದಾರಿ ದುರಸ್ತಿ, ಶಿಕ್ಷಣದ ಖಾಸಗೀಕರಣ ತಡೆ, ಗ್ರಾಮೀಣ ಶಾಲೆಗಳಿಗೆ ಮೂಲಭೂತ ಸೌಕರ್ಯ, ಗೇರು, ಅಡಿಕೆ, ತೆಂಗು, ರಬ್ಬರ್ ಬೆಳೆಗಾರರಿಗೆ ಸಹಾಯ ಸೇರಿದಂತೆ ಜಿಲ್ಲೆಯ ಸರ್ವತೋಮುಖ ಬೆಳವಣಿಗೆ ಮಾಡಲಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಎಸ್ಡಿಪಿಐ ಮುಖಂಡರಾದ ಅಬೂಬಕ್ಕರ್ ಸಿದ್ದೀಕ್, ಇಕ್ಬಾಲ್ ಬೆಳ್ಳಾರೆ, ಅಬ್ದುಲ್ ಹಮೀದ್ ಸಾಲ್ಮರ, ಮಜೀದ್ ಖಾನ್ ಉಪಸ್ಥಿತರಿದ್ದರು.