ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ಮತದಾನ ಜಾಗೃತಿ: ಓಟು ಮಾಡಿದವರಿಗೆ ಮದುವೆ ದಿನ ಹೀಗೊಂದು ಉಡುಗೊರೆ !
ಉಡುಪಿ, ಎ.8: ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ಏನೇನಿರಬಹುದು... ನಾಮ ಸಂವತ್ಸರ, ವಧೂ ವರರ ಹೆಸರು, ಮದುವೆ ನಡೆಯುವ ಸ್ಥಳ, ಇನ್ನೂ ಹೆಚ್ಚೆಂದರೆ ‘ಆಶೀರ್ವಾದವೇ ಉಡುಗೊರೆ’ ಎಂಬ ಸಂದೇಶ.....
ಆದರೆ ಇಲ್ಲೊಂದು ವಿವಾಹ ಆಮಂತ್ರಣ ಪತ್ರಿಕೆ ಇದೆ. ಇದರಲ್ಲಿ 2019ರ ಲೋಕಸಭಾ ಚುನಾವಣೆಯ ಮಹತ್ವವನ್ನು ಸಾರಲಾಗಿದೆ. ಆಮಂತ್ರಣ ಪತ್ರಿಕೆಯ ಮೂಲಕ -ಮತದಾನ ಮಾಡಿ, ಪ್ರಜಾಪ್ರಭುತ್ವ ಗೆಲ್ಲಿಸಿ..., ನಾವು ಮಾರಾಟಕ್ಕಿಲ್ಲ, ನಮ್ಮ ಮತ ಮಾರಾಟಕ್ಕಿಲ್ಲ...’ ಎಂಬ ಸಂದೇಶಗಳನ್ನು ಎಲ್ಲ ಬಂಧುಬಳಗ, ಮಿತ್ರರಿಗೆ ತಲುಪಿಸಲಾಗುತ್ತಿದೆ.
ಮೇ 1ರಂದು ಕುಂದಾಪುರ ತಾಲೂಕಿನ ತಲ್ಲೂರು ಪಾರ್ತಿಕಟ್ಟೆ ಶ್ರೀ ಶೇಷಕೃಷ್ಣ ಕನ್ವೆನ್ಷನ್ ಸಭಾಭವನದಲ್ಲಿ ನಡೆಯುವ ಗೌರಿ ಶ್ರೀನಿವಾಸ್ ಇವರ ಪುತ್ರ ಗಣೇಶ್ ಕುಮಾರ್ ಪಡುಕೋಣೆ ಮತ್ತು ಲೀಲಾವತಿ ವಿ. ನಾರಾಯಣ ಇವರ ಪುತ್ರಿ ಪೂರ್ಣಿಮಾರ ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ಮತದಾನ ಜಾಗೃತಿಯ ಈ ಸಂದೇಶಗಳನ್ನು ಮುದ್ರಿಸಲಾಗಿದೆ.
ಅಷ್ಟೇ ಅಲ್ಲ, ವಿವಾಹ ಪತ್ರಿಕೆಯಲ್ಲಿ ‘ಆಶೀರ್ವಾದವೇ ಉಡುಗೊರೆ’ ಎಂಬ ಸಂದೇಶವಿದೆ. ಮದುವೆಗೆ ಬಂದವರು ವಧೂವರರಿಗೆ ಯಾವುದೇ ಉಡುಗೊರೆ ನೀಡುವಂತಿಲ್ಲ, ಆದರೆ ಮದುವೆಗೆ ಬಂದವರಿಗೆ ವಿಶೇಷ ಕೊಡುಗೆ ನೀಡಲಾಗುತ್ತದೆ. ಅದು ಎಲ್ಲರಿಗೂ ಅಲ್ಲ, ಎ. 18ರಂದು ಮತದಾನ ಮಾಡಿದವರಿಗೆ ಮಾತ್ರ.
‘ಒಂಚೂರು ಇಲ್ಕಾಣಿ’ ಎಂದು ಕುಂದಾಪುರ ಕನ್ನಡದ ಒಕ್ಕಣೆಯಲ್ಲಿ, ಈ ಬಾರಿಯ ಚುನಾವಣೆಯಲ್ಲಿ ಮತದಾನ ಮಾಡಿದವರಿಗೆ ವಿಶೇಷ ಕೊಡುಗೆ ನೀಡಲಾಗುತ್ತದೆ. ಅದೂ ಮತದಾನ ಮಾಡಿದ ಬಗ್ಗೆ ಬೆರಳಿನ ಶಾಯಿ ಗುರುತು ತೋರಿಸಿದವರಿಗೆ ಮಾತ್ರ. ಅಂತಹವರಿಗೆ 250 ರೂ. ಮೌಲ್ಯದ ಪುಸ್ತಕಗಳನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಲಾಗಿದೆ.
ಇದಲ್ಲದೇ ವಿವಾಹ ಸಮಾರಂಭದಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ, ವ್ಯಂಗ್ಯಚಿತ್ರ ಪ್ರದರ್ಶನ, ಪುರಾತನ ಜಾನಪದ ವಸ್ತುಗಳ ಪ್ರದರ್ಶನ ಸಹ ಇರಲಿದೆ...
ವಿವಾಹ ಕಾರ್ಯಕ್ರಮವನ್ನು ಅದ್ದೂರಿಯಾಗಿ ಮಾಡಿ, ಆಮಂತ್ರಣ ಪತ್ರಿಕೆಗೆ ದುಬಾರಿ ವೆಚ್ಚ ಮಾಡುವ ಕಾಲದಲ್ಲಿ, ಸಮಾಜಕ್ಕೆ ಮತದಾನ ಜಾಗೃತಿಯ ಸಂದೇಶದ ಜೊತೆಗೆ ಪುಸ್ತಕ ಓದುವುದನ್ನು ಪ್ರೋತ್ಸಾಹಿಸುವ ಮೂಲಕ ಅತ್ಯಂತ ಅರ್ಥಪೂರ್ಣವಾಗಿ ವಿವಾಹವಾಗುತ್ತಿರುವ ಈ ಜೋಡಿ ಎಲ್ಲರಿಗೂ ಮಾದರಿ ಎನಿಸಿಕೊಂಡಿದೆ.
ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ಕೈಗೊಳ್ಳುತ್ತಿರುವ ಮತದಾನ ಜಾಗೃತಿ ಕಾರ್ಯಕ್ರಮದೊಂದಿಗೆ ಕೈಜೋಡಿಸಿ, ಸಾರ್ವಜನಿಕರಲ್ಲಿ ಮತದಾನ ಬಗ್ಗೆ ಅರಿವು ಮೂಡಿಸುವ ಇದೊಂದು ಅಪರೂಪದ ಮಾದರಿ ಕಾರ್ಯಕ್ರಮವಾಗಿದೆ.