ಭ್ರಷ್ಟಾಚಾರದ ರೂಪವನ್ನೇ ಬದಲಿಸಿದ ಬಿಜೆಪಿ: ಬಸವರಾಜ್ ಟೀಕೆ
ಕುಂದಾಪುರ, ಎ.9: ಕೇಂದ್ರದಲ್ಲಿ ಅಧಿಕಾರ ನಡೆಸಿದ ಬಿಜೆಪಿ ಮೈತ್ರಿಕೂಟವು ಭ್ರಷ್ಟಾಚಾರವನ್ನೇ ನಡೆಸಿಲ್ಲ ಎಂದು ಬಿಜೆಪಿ ಬೆಂಬಲಿಗರು ಹುಸಿ ಪ್ರಚಾರ ನಡೆಸುತ್ತಿದ್ದಾರೆ. ರಫೆಲ್ ಒಪ್ಪಂದದಲ್ಲಿ ಎಸಗಿರುವ ದೊಡ್ಡ ಭ್ರಷ್ಟಚಾರ ಸಂಬಂಧ ಸಂಸದೀಯ ತನಿಖಾ ಸಮಿತಿ ರಚಿಸಲು ಒತ್ತಾಯಿಸಿದರೂ ಕೇಂದ್ರ ಸರಕಾರ ಸಮಿತಿ ರಚಿಸಲು ಮುಂದಾಗಲಿಲ್ಲ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಯು.ಬಸವರಾಜ್ ಆರೋಪಿಸಿದ್ದಾರೆ.
ಕುಂದಾಪುರ ಹೆಂಚು ಕಾರ್ಮಿಕರ ಭವನದಲ್ಲಿ ಸೋಮವಾರ ಜರಗಿದ ಸಿಪಿಎಂ ರಾಜಕೀಯ ಸಮಾವೇಶದಲ್ಲಿ ಅವರು ಮಾತನಾಡುತಿದ್ದರು. ಹಿಂದಿನ 2ಜಿ ಹಗರಣ ಮುಚ್ಚಿ ಹಾಕಲು ಡಿಎಂಕೆ ಪಕ್ಷದ ಮುಖಂಡರನ್ನು ಮೋದಿ ಭೇಟಿಯಾಗಿ ಸನ್ಮಾನಿಸಿಕೊಂಡಿರುವುದು ಗುಟ್ಟಾಗಿ ಉಳಿದಿಲ್ಲ. ಕಲ್ಲಿದ್ದಲು ಹಗರಣ, ತೈಲ ಹಗರಣ ತನಿಖೆ ಎಲ್ಲಿ ಹೋಯಿತು. ವ್ಯಾಪಂ ಹಗರಣದ 50ಕ್ಕೂ ಹೆಚ್ಚು ಸಾಕ್ಷಿಗಳ ಅನುಮಾನಾಸ್ಪದ ಸಾವುಗಳು ಏನನ್ನು ತೋರಿಸುತ್ತದೆ ಎಂದು ಅವರು ಪ್ರಶ್ನಿಸಿದರು.
ಕಳೆದ 5 ವರ್ಷಗಳಿಂದ ಬಿಜೆಪಿ ಅಧಿಕಾರ ನಡೆಸಿದರೂ ಲೋಕಪಾಲರ ನೇಮಕ ಮಾಡದೇ ತನ್ನನ್ನೆ ರಕ್ಷಣೆ ಮಾಡಿಕೊಂಡಿದೆ. ವರ್ಷಕ್ಕೆ 2ಕೋಟಿ ಉದ್ಯೋಗ ಸೃಷ್ಠಿಸುವ ಬದಲು ಉದ್ಯೋಗವನ್ನೇ ನಾಶ ಮಾಡಿದೆ. ಜಿಎಸ್ಟಿ ಯಿಂದ ಸಣ್ಣ ಕೈಗಾರಿಕೆಗಳು ನಾಶವಾಗಿ ನಿರುದ್ಯೋಗ ಹೆಚ್ಚಳಗೊಂಡಿವೆ ಎಂದು ಅವರು ಆರೋಪಿಸಿದರು.
ಆಯುಷ್ಮಾನ್ ಭಾರತದ ಹೆಸರಿನಲ್ಲಿ ಜನರ ಆರೋಗ್ಯಕ್ಕೆ ಕಿಂಚಿತ್ತಾದರೂ ನೆರವಾಗುತ್ತಿದ್ದ ಆರ್ಬಿಎಸ್ವೈ, ಯಶಸ್ವಿನಿ ಯೋಜನೆಗಳನ್ನು ರದ್ಧು ಮಾಡಿರು ವುದು ಬಿಜೆಪಿ ಬಡವರ, ಕಾರ್ಮಿಕರ ವಿರೋಧಿ ಎಂದು ಸಾಬೀತುಗೊಳಿಸಿದೆ. ಈ ಸರಕಾವು ಎಫ್ ಡಿಐಯನ್ನು ಜಾರಿ ಮಾಡಿದ ಪರಿಣಾಮ ಸಾಂಪ್ರದಾಯಿಕ ಕುಟುಂಬಗಳು ನಾಶವಾಗುತ್ತಿವೆ ಎಂದರು.
ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಮಾತನಾಡಿದರು. ಅಧ್ಯಕ್ಷತೆ ಯನ್ನು ಸಿಪಿಎಂ ರಾಜ್ಯ ಮುಖಂಡ ಕೆ.ಶಂಕರ್ ವಹಿಸಿದ್ದರು. ಕುಂದಾಪುರ ವಲಯ ಕಾರ್ಯದರ್ಶಿ ಎಚ್.ನರಸಿಂಹ ಸ್ವಾಗತಿಸಿದರು. ಬೈಂದೂರು ವಲಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಉಪಸ್ಥತರಿದ್ದರು. ಜಿಲ್ಲಾ ಮುಖಂಡ ವೆಂಕಟೇಶ್ ಕೋಣಿ ವಂದಿಸಿದರು.