ಎ.12-14: ರಾಜ್ಯಮಟ್ಟದ ಅಂಡರ್ 13 ಫಿಡೆರೇಟೆಡ್ ಚೆಸ್ ಪಂದ್ಯಾಟ
ಉಡುಪಿ, ಎ.9: ಕಾಪು ಕಲಾಭಿಮಾನಿ ಸಂಘದ ಆಶ್ರಯದಲ್ಲಿ ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಶನ್ ಸಹಯೋಗದೊಂದಿಗೆ ಯುಕೆಸಿಎ ಬೆಂಗಳೂರು ಹಾಗೂ ಫಿಡೇ, ಎಐಸಿಎಫ್ ಚೆನ್ನೈಯ ಅನುಮತಿಯೊಂದಿಗೆ ಕರ್ನಾಟಕ ರಾಜ್ಯ ಅಂಡರ್ 13 ಫಿಡೆರೇಟೆಡ್ ಮುಕ್ತ ಬಾಲಕ ಮತ್ತು ಬಾಲಕಿಯರ ಚೆಸ್ ಚ್ಯಾಂಪಿಯನ್ಶಿಪ್ ‘ಶ್ರೀನಾರಯಣ ಗುರು ಟ್ರೋಫಿ’ ಯನ್ನು ಎ.12ರಿಂದ 14ರವರೆಗೆ ಕಾಪು ಹಳೆ ಮಾರಿಯಮ್ಮ ದೇವಸ್ಥಾನ ಸಭಾಗೃಹದಲ್ಲಿ ಏರ್ಪಡಿಸಲಾಗಿದೆ.
ಈ ಸ್ಪರ್ಧೆಯಲ್ಲಿ ವಿಜೇತರಿಗೆ ಒಟ್ಟು 70,000ರೂ. ಮೊತ್ತದ ನಗದು ಬಹು ಮಾನ ಮತ್ತು 90 ಟ್ರೋಫಿಗಳನ್ನು ನೀಡಲಾಗುತ್ತದೆ. ಸ್ಪರ್ಧೆಯಲ್ಲಿ 200ಕ್ಕಿಂತ ಅಧಿಕ ಕ್ರೀಡಾಳುಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ಕಾರ್ಯಕ್ರಮ ಸಂಯೋಜಕ ಉಮಾನಾಥ ಕಾಪು ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ವಿದ್ಯಾರ್ಥಿಗಳಿಗಾಗಿ 7, 9, 11ರ ವಯೋಮಿತಿ ವಿಭಾಗ, ಬಾಲಕ ಬಾಲಕಿ ಯರಿಗೆ ಪ್ರತ್ಯೇಕ 10ರಂತೆ ಒಟ್ಟು 90 ಬಹುಮಾನವನ್ನು ನೀಡಲಾಗುವುದು. ಈ ಸ್ಪರ್ಧೆಯಲ್ಲಿ ವಿಜೇತರಾದ ಇಬ್ಬರು ಬಾಲಕರು ಹಾಗೂ ಇಬ್ಬರು ಬಾಲಕಿ ಯರು ಮೇ 4ರಿಂದ 12ರವರೆಗೆ ವಿಶಾಖಪಟ್ಟಣದಲ್ಲಿ ನಡೆಯಲಿರುವ 33ನೆ ಅಂಡರ್ 13 ರಾಷ್ಟ್ರೀಯ ಮಟ್ಟದ ಚೆಸ್ ಟೂರ್ನಮೆಂಟ್ಗೆ ಆಯ್ಕೆಯಾಗಲಿ ದ್ದಾರೆ ಎಂದರು.
ಪಂದ್ಯಾಟವನ್ನು ಎ.12ರಂದು ಬೆಳಗ್ಗೆ 9ಗಂಟೆಗೆ ಯುಪಿಸಿಎಲ್ ಅದಾನಿ ಗ್ರೂಪ್ನ ಅಧ್ಯಕ್ಷ ಕಿಶೋರ್ ಆಳ್ವ ಉದ್ಘಾಟಿಸಲಿರುವರು. ಎ.14ರಂದು ಸಂಜೆ 5.30ಕ್ಕೆ ಪಂದ್ಯಾಟದ ಸಮಾರೋಪ ಸಮಾರಂಭ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಕಲಾಭಿಮಾನಿ ಬಳಗದ ಅಧ್ಯಕ್ಷ ಕೆ.ಶ್ರೀನಿವಾಸ್ ಪೂಜಾರಿ, ರಾಜ್ಯದ ಪ್ರಥಮ ಗ್ರಾಂಡ್ ಮಾಸ್ಟರ್ ತೇಜ್ಕುಮಾರ್ ಎಂ.ಎಸ್., ಶ್ರವಣ್ ಎಸ್.ಪೂಜಾರಿ, ನಾಗೇಶ್ ಕಾರಂತ್, ಮಂಜುನಾಥ್ ಮಣಿಪಾಲ ಉಪಸ್ಥಿತರಿದ್ದರು.
ಕರ್ನಾಟಕ ರಾಜ್ಯ ಅಂಡರ್ 13 ಫಿಡೆರೇಟೆಡ್ ಮುಕ್ತ ಚೆಸ್ ಚ್ಯಾಂಪಿಯನ್ಶಿಪ್ ಇದರ ಟ್ರೋಪಿಗಳನ್ನು ರಾಜ್ಯದ ಪ್ರಥಮ ಚೆಸ್ ಗ್ರಾಂಡ್ ಮಾಸ್ಟರ್ ತೇಜ್ಕುಮಾರ್ ಮಂಗಳವಾರ ಉಡುಪಿ ಪ್ರೆಸ್ಕ್ಲಬ್ನಲ್ಲಿ ಅನಾವರಣಗೊಳಿಸಿದರು.