ಸೀ ವಿಜಿಲ್ ದೂರು ವಿಲೇವಾರಿ: ಉಡುಪಿ ಜಿಲ್ಲೆ ರಾಜ್ಯದಲ್ಲೇ ಪ್ರಥಮ
ಉಡುಪಿ, ಎ.9: ಉಡುಪಿ ಜಿಲ್ಲೆ ಮುಕ್ತ, ಪಾರದರ್ಶಕ, ನ್ಯಾಯ ಸಮ್ಮತ ಚುನಾವಣೆ ನಡೆಸುವಲ್ಲಿ ಇಡೀ ರಾಜ್ಯಕ್ಕೆ ಮಾದರಿಯಾಗಿದ್ದು, ಸೀ ವಿಜಿಲ್ನಲ್ಲಿ ದಾಖಲಾದ ದೂರುಗಳನ್ನು 100 ನಿಮಿಷಗಳ ಒಳಗೆ ವಿಲೇವಾರಿ ಮಾಡುವಲ್ಲಿ ಉಡುಪಿ ಜಿಲ್ಲೆ ಇಡೀ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದುಕೊಂಡಿದೆ.
ಚುನಾವಣಾ ಅಕ್ರಮ ತಡೆಗಾಗಿ ಚುನಾವಣಾ ಆಯೋಗ ರೂಪಿಸಿರುವ ಸೀವಿಜಿಲ್ ಆಪ್ನಲ್ಲಿ ಸಾರ್ವಜನಿಕರು ತಮಗೆ ಕಂಡ ಚುನಾವಣಾ ಅಕ್ರಮ ಗಳನ್ನು ನೇರವಾಗಿ ಆಪ್ ಮೂಲಕ ನೀಡಬಹುದಾಗಿದೆ. ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಸೀವಿಜಿಲ್ ಕುರಿತ ರಾಜ್ಯದ ಎಲ್ಲಾ ಜಿಲ್ಲೆಗಳ ಪ್ರಗತಿ ಮಾಹಿತಿುಲ್ಲಿ ಉಡುಪಿ ಜಿಲ್ಲೆ ಅಗ್ರಸ್ಥಾನದಲ್ಲಿದೆ.
ಉಡುಪಿ ಜಿಲ್ಲೆಯಲ್ಲಿ ಈವರೆಗೆ 91 ದೂರುಗಳನ್ನು ಸ್ವೀಕರಿಸಿದ್ದು, 14 ದೂರು ಗಳನ್ನು ಜಿಲ್ಲಾ ಪರಿಶೀಲನಾ ಸಮಿತಿಯಲ್ಲಿ ಕೈಬಿಡಲಾಗಿದೆ. ಸಮರ್ಪಕ ದಾಖಲೆ ಇಲ್ಲದ 21 ದೂರುಗಳನ್ನು ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾ ವಣಾಧಿಕರಿ ಹಂತದಲ್ಲಿ ವಜಾ ಮಾಡಲಾಗಿದೆ. ಉಳಿದ 56 ದೂರುಗಳನ್ನು ಪರಿಶೀಲಿಸಿ, 100 ನಿಮಿಷಗಳ ಒಳಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
ರಾಜ್ಯದ ಇತರೆ ಜಿಲ್ಲೆಗಳಲ್ಲಿ ಉಡುಪಿಗಿಂತ ಅಧಿಕ ದೂರು ಸ್ವೀಕರಿಸಿದ್ದರೂ ಸಹ ಅವುಗಳನ್ನು ಬಹಳಷ್ಟು ಪ್ರಕರಣಗಳನ್ನು ಸುಳ್ಳು ದೂರು ಮತ್ತು ಇತರೆ ಕಾರಣಗಳಿಂದ ವಜಾ ಮಾಡಲಾಗಿದೆ. ಸಮರ್ಪಕ ಪ್ರಕರಣಗಳ ತನಿಖೆ ನಡೆಸಿ ಕ್ರಮ ಕೈಗೊಂಡಿರುವ ಪ್ರಕರಣಗಳು ಕಡಿಮೆಯಾಗಿವೆ.
ಉಡುಪಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ನಿರ್ದೇಶನದಂತೆ ಸೀ ವಿಜಿಲ್ನಲ್ಲಿ ದಾಖಲಾಗುವ ಪ್ರತಿ ಯೊಂದು ದೂರುಗಳನ್ನು ಪರಿಶೀಲಿಸಿ, ಶೀಘ್ರದಲ್ಲಿ ಕ್ರಮ ಕೈಗೊಳ್ಳುತ್ತಿರುವ ಕಾರಣ ಪ್ರಕರಣಗಳ ವಿಲೇವಾರಿಯಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದ್ದೇವೆ ಎಂದು ಸಹಾಯಕ ಚುನಾವಣಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ತಿಳಿಸಿದ್ದಾರೆ.
ಆಂಡ್ರಾಯ್ಡಾ ಮೊಬೈಲ್ನಲ್ಲಿ ಗೂಗಲ್ ಪ್ಲೇ ಸ್ಟೋರ್ನಲ್ಲಿರುವ ಸಿ ವಿಜಿಲ್ ಆಪ್ನ್ನು ಡೌನ್ಲೋಡ್ ಮಾಡಿಕೊಂಡು, ಹಣ ಹಂಚುವಿಕೆ, ಮದ್ಯ ಹಂಚು ವಿಕೆ, ಉಡುಗೊರೆಗಳ ಆಮಿಷ, ಜನಾಂಗೀಯ ಭಾವನೆ ಕೆರಳಿಸುವ ಭಾಷಣ, ಪೇಯ್ಡೋ ನ್ಯೂಸ್ ಪ್ರಕಟ, ಸುಳ್ಳು ಸುದ್ದಿ ಪ್ರಕಟ, ಬೆದರಿಕೆ ಹಾಕುವುದು, ಆಸ್ತಿಪಾಸ್ತಿಗೆ ಹಾನಿ ಮಾಡುವುದು ಸೇರಿದಂತೆ ಯಾವುದೇ ರೀತಿಯ ಮಾದರಿ ನೀತಿ ಸಂಹಿತೆ ಉಲ್ಲಂಘಿಸುವ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳ ವಿರುದ್ದ ಸಾರ್ವಜನಿಕರು ದೂರು ನೀಡಬಹುದಾಗಿದೆ. ಸೀ ವಿಜಿಲ್ ದೂರು ಕುರಿತು ಪರಿಶೀಲಿಸಲು ದಿನ 24 ಗಂಟೆಗಳ ಕಾಲ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿರುತ್ತಾರೆ.
ಉಡುಪಿ: ಒಟ್ಟು ದೂರು- 91, ವಜಾ-35, ವಿಲೇವಾರಿ- 56
ಧಾರವಾಡ: ಒಟ್ಟು ದೂರು 121, ವಜಾ-73, ವಿಲೇವಾರಿ- 48
ಕೋಲಾರ: ಒಟ್ಟು ದೂರು- 59, ವಜಾ-28, ವಿಲೇವಾರಿ- 31
ಹಾವೇರಿ: ಒಟ್ಟು ದೂರು- 51, ವಜಾ-22, ವಿಲೇವಾರಿ- 29
ರಾಯಚೂರು: ಒಟ್ಟು ದೂರು- 97, ವಜಾ-69, ವಿಲೇವಾರಿ- 28