ಮತಗಟ್ಟೆ ಅಧಿಕಾರಿಗಳಿಗೆ 2ನೇ ಹಂತದ ತರಬೇತಿ ಯಶಸ್ವಿ: ಡಿಸಿ ಸಸಿಕಾಂತ್ ಸೆಂಥಿಲ್
ಮಂಗಳೂರು, ಎ.9: ದ.ಕ. ಜಿಲ್ಲೆಯಲ್ಲಿ ಎ.18ರಂದು ಲೋಕಸಭಾ ಚುನಾವಣೆ ನಡೆಯಲಿದ್ದು, ಮತಗಟ್ಟೆ ಅಧಿಕಾರಿಗಳಿಗೆ ಎರಡನೇ ಹಂತದ ತರಬೇತಿಯು ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಿಗೆ ಯಶಸ್ವಿಯಾಗಿ ನಡೆಯಿತು ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದರು.
ಮತದಾನ ಪ್ರಕ್ರಿಯೆ ಕುರಿತಂತೆ ಮಸ್ಟರಿಂಗ್ ಕೇಂದ್ರದಿಂದ ಮತಗಟ್ಟೆಗೆ ತೆಗೆದುಕೊಂಡು ಹೋಗುವ ಮತದಾನ ಪರಿಕರಗಳ ಕುರಿತು ಚುನಾವಣಾ ಆಯೋಗದ ನಿರ್ದೇಶನದಂತೆ ಚಾಚೂ ತಪ್ಪದೇ ಜಾಗೃತ ವಹಿಸಿ, ಪರೀಕ್ಷಿಸಿಕೊಂಡು ನಿಯಮಿತ ಸಿಬ್ಬಂದಿಯೊಂದಿಗೆ ಮತಗಟ್ಟೆಗೆ ಸೂಚಿತ ಮಾರ್ಗದಲ್ಲಿ ತಲುಪಬೇಕು. ವೇಳೆಗೆ ಸರಿಯಾಗಿ ಮತದಾನ ಮುಂದಿನ ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿ ಆಯೋಗದ ನಿರ್ದೇಶನದಂತೆ ಮತದಾನ ಪ್ರಕ್ರಿಯೆ ಜರುಗಿಸಬೇಕು. ಡಿಮಸ್ಟ್ರಿಂಗ್ ಕೇಂದ್ರಕ್ಕೆ ಬರುವವರೆಗಿನ ಮತಗಟ್ಟೆ ಅಧಿಕಾರಿಗಳ ಹೊಣೆಯ ಬಗ್ಗೆ ತರಬೇತುದಾರರಿಗೆ ಸವಿವರ ಮಾಹಿತಿಗಳನ್ನು ನೀಡಲಾಗಿದೆ ಎಂದರು.
ಒಟ್ಟು 8,916 ಮಂದಿಗೆ ಮಂಗಳವಾರ ತರಬೇತಿ ನೀಡಲಾಗಿದ್ದು, 80 ಸಖಿ ಮತಗಟ್ಟೆಯಲ್ಲಿ ಕರ್ತವ್ಯ ನಿರ್ವಹಿಸುವವರು ಮತ್ತು 14 ಪಿಡಬ್ಲ್ಯುಡಿ (ವಿಕಲಚೇತನ ಸ್ನೇಹಿ ಮತಗಟ್ಟೆ)ಗಳ ಮತಗಟ್ಟೆ ಅಧಿಕಾರಿಗಳು ತರಬೇತಿ ಪಡೆದರು. ತರಬೇತಿ ಪಡೆಯುವವರ ಅನುಕೂಲಕ್ಕಾಗಿ ಒಟ್ಟು 79 ವಾಹನಗಳನ್ನು ಒದಗಿಸಲಾಗಿತ್ತು. ಪ್ರಸಕ್ತ ಸಾಲಿನಲ್ಲಿ ಚುನಾವಣೆನಿರತ ಮತಗಟ್ಟೆ ಅಧಿಕಾರಿ ಮತ್ತು ಸಿಬ್ಬಂದಿಗಾಗಿ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ವಿಶೇಷ ಗಮನ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.