ಮಂಗಳೂರು: ಸಿಎಫ್ಐ ವತಿಯಿಂದ ‘ನೌಶಾದ್ ಕಾಸಿಂ ಜಿ’ ಕುರಿತ ಸಂವಾದ
ಮಂಗಳೂರು, ಎ.9: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ವತಿಯಿಂದ ‘ಅನ್ಯಾಯದ ದಶಕಗಳು’ ಘೋಷ ವಾಕ್ಯದಡಿ ‘ಶಹೀದ್ ನೌಶಾದ್ ಕಾಸಿಂ ಜಿ’ ಕುರಿತು ಮಂಗಳೂರಿನ ಸಹೋದಯ ಸಭಾಭವನದಲ್ಲಿ ಮಂಗಳವಾರ ಕಾನೂನು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಮುಖ್ಯಅತಿಥಿಯಾಗಿ ಆಗಮಿಸಿದ ಕಾಸಿಂ ಜಿ ಅವರ ಪತ್ನಿ ಅಡ್ವೊಕೇಟ್ ನುಸ್ರತ್ ಕಾಸಿಂ ಮಾತನಾಡಿ, ನೌಶಾದ್ ಕಾಸಿಂ ಪ್ರಕರಣದಲ್ಲಿ ಕಾನೂನು ಇಲಾಖೆಯ ವೈಫಲ್ಯ, ಜೀವನ ಶೈಲಿ ಹಾಗೂ ಹೋರಾಟ ಮನೋಭಾವ ಕುರಿತು ವಿವರಿಸಿದರು.
ತಮ್ಮ ಕಕ್ಷಿದಾರರಲ್ಲಿ ಯಾವುದೇ ತಾರತಮ್ಯ ನೀತಿಯಿಂದ ನೋಡದೆ ಪ್ರತಿಯೊಬ್ಬನಿಗೂ ನ್ಯಾಯ ಕೊಡಬೇಕೆಂಬ ಉದ್ದೇಶದಿಂದ ಯಾರಿಗೂ ಎದೆಗುಂದದೆ ಹೋರಾಡಿದ್ದಾರೆ. ಅವರ ವ್ಯಕ್ತಿತ್ವ ಎಲ್ಲರಿಗೂ ಮಾದರಿ ಎಂದು ಹೇಳಿದರು.
ಕ್ಯಾಂಪಸ್ ಫ್ರಂಟ್ ರಾಜ್ಯಾಧ್ಯಕ್ಷ ಫಯಾಝ್ ದೊಡ್ಡಮನೆ ಮಾತನಾಡಿ, ಕಾನೂನು ಸೇವೆಯ ಮಾರ್ಗದಲ್ಲಿ ಸಾಗುವವರು ಮುಖ್ಯವಾಗಿ ನ್ಯಾಯ, ಸತ್ಯ ಹಾಗೂ ನೈತಿಕತೆಗೆ ಬದ್ಧರಾಗಿ ಹೋರಾಡಬೇಕು. ನೌಶಾದ್ ಕಾಸಿಂ ಅವರಂತೆ ಹೋರಾಟ ನಡೆಸಬೇಕು ಎಂದು ಹೇಳಿದರು.
ಈ ಸಂದರ್ಭ ಕೇಂದ್ರದ ನರೇಂದ್ರ ಮೋದಿ ಆಡಳಿತ ಅವಧಿಯ ವೈಫಲ್ಯಗಳ ಕುರಿತು ಕ್ಯಾಂಪಸ್ ಫ್ರಂಟ್ ರಚಿಸಿದ ‘ಜುಮ್ಲಾ ರಿಪಬ್ಲಿಕ್’ ಡಾಕ್ಯುಮೆಂಟ್ ಪ್ರತಿಯನ್ನು ಅಡ್ವೊಕೇಟ್ ನುಸ್ರತ್ ಕಾಸಿಂ ಅವರಿಗೆ ಫಯಾಝ್ ದೊಡ್ಡಮೆನೆ ಹಸ್ತಾಂತರಿಸಿದರು. ತಾಜುದ್ದೀನ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.