ಕೋಮು ಗಲಭೆಗೆ ಮೈತ್ರಿ ಸರಕಾರ ಆಸ್ಪದ: ಶಾಸಕ ಭರತ್ ಶೆಟ್ಟಿ
ಮಂಗಳೂರು, ಎ.9: ದ.ಕ. ಜಿಲ್ಲೆಯಲ್ಲಿ ಕೋಮು ಗಲಭೆ ಮತ್ತು ಮಹಿಳೆಯ ಮಾನಭಂಗ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ವಿರುದ್ಧದ ಪ್ರಕರಣ ಗಳನ್ನು ವಾಪಸ್ ಪಡೆಯುವ ಮೂಲಕ ರಾಜ್ಯದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಜಿಲ್ಲೆಯಲ್ಲಿ ಮತ್ತೆ ಕೋಮು ಗಲಭೆಗೆ ಆಸ್ಪದ ನೀಡುತ್ತಿದೆ ಎಂದು ಶಾಸಕ ಡಾ.ವೈ.ಭರತ್ ಶೆಟ್ಟಿ ಆರೋಪಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳೆಯರನ್ನು ಥಳಿಸಿ ಮಾನಭಂಗಕ್ಕೆ ಯತ್ನಿಸಿದ ಪ್ರಕರಣ ಸಹಿತ ಒಂದು ಮತಕ್ಕೆ ಸೇರಿದ ಆರೋಪಿಗಳ ಮೇಲಿನ 142 ಕೇಸ್ಗಳನ್ನು ವಾಪಸ್ ಪಡೆದ ಉದ್ದೇಶ ಏನು ಎಂಬುದನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಸಾರ್ವಜನಿಕರಿಗೆ ತಿಳಿಸಬೇಕು ಎಂದು ಶಾಸಕ ಡಾ. ವೈ. ಭರತ್ ಶೆಟ್ಟಿ ಒತ್ತಾಯಿಸಿದರು.
ಜಿಲ್ಲೆಯಲ್ಲಿ ಈ ಹಿಂದಿನ ಕಾಂಗ್ರೆಸ್ ಸರಕಾರವಿದ್ದಾಗ, ಏಳು ಮಂದಿ ಕಾಂಗ್ರೆಸ್ ಶಾಸಕರಿದ್ದರು. ಆಗ ಪದೇಪದೇ ಕೋಮು ಗಲಭೆ ನಡೆಯುತ್ತಿತ್ತು. ಬಿಜೆಪಿಯ ಏಳು ಶಾಸಕರು ಆಯ್ಕೆಯಾದ ಬಳಿಕ ಕೋಮು ಗಲಭೆಗೆ ಆಸ್ಪದ ನೀಡುತ್ತಿಲ್ಲ ಎಂದರು.
ತಿಳಿವಳಿಕೆ ಇಲ್ಲದವರ ಮತ ಬೇಕೇ?: ಕರಾವಳಿಯ ಜನತೆ ತಿಳಿವಳಿಕೆ ಇಲ್ಲದವರು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದರು. ಈ ಹೇಳಿಕೆ ಬಗ್ಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಈಗ ಕರಾವಳಿ ಜಿಲ್ಲೆಗೆ ಆಗಮಿಸಿ ಮತ ನೀಡುವಂತೆ ಸಿಎಂ ವಿನಂತಿಸುತ್ತಿದ್ದಾರೆ. ಇಲ್ಲಿನ ದೇವಸ್ಥಾನ ಇವರಿಗೆ ಬೇಕು. ತಿಳಿವಳಿಕೆ ಇಲ್ಲದವರು ಮತ ನೀಡಲು ಬೇಕೇ ಎಂಬುದನ್ನು ಕಾಂಗ್ರೆಸ್-ಜೆಡಿಎಸ್ ನಾಯಕರು ಉತ್ತರಿಸಲಿ ಎಂದು ಸವಾಲೆಸೆದರು.
ಸಂಸದ ನಳಿನ್ ಕುಮಾರ್ ಕಟೀಲು ಅವರು ಕೇಂದ್ರ ಸರಕಾರದಿಂದ ಕಳೆದ ಐದು ವರ್ಷದಲ್ಲಿ ಜಿಲ್ಲೆಗೆ 16,520 ಕೋಟಿ ರೂ. ಅನುದಾನ ತಂದಿದ್ದಾರೆ. ರಾಜ್ಯದ ಸಿದ್ದರಾಮಯ್ಯ ಸರಕಾರ ಮತ್ತು ಈಗಿನ ಮೈತ್ರಿ ಸರಕಾರ ಜಿಲ್ಲೆಗೆ ಎಷ್ಟು ಅನುದಾನ ನೀಡಿದೆ ಎಂಬುದನ್ನು ತಿಳಿಸಲಿ ಎಂದರು.
ಎನ್ಎಂಪಿಟಿ ಉದ್ಘಾಟನೆ ಸಂದರ್ಭ ಮಂಗಳೂರಿನಲ್ಲಿ ಸರ್ವಋತು ಮೀನುಗಾರಿಕಾ ಜೆಟ್ಟಿ ನಿರ್ಮಿಸುವುದಾಗಿ 70ರ ದಶಕದಲ್ಲಿ ಇಂದಿರಾಗಾಂಧಿ ಭರವಸೆ ನೀಡಿದ್ದರು. ಆದರೆ, ನಳಿನ್ಕುಮಾರ್ ಸಂಸದನಾಗಿ ಜೆಟ್ಟಿ ನಿರ್ಮಾಣಕ್ಕೆ ಶಿಲಾನ್ಯಾಸ ನಡೆಸಿ, ಕಾಮಗಾರಿ ಪ್ರಕ್ರಿಯೆಯಲ್ಲಿದೆ ಎಂದು ಭರತ್ ಶೆಟ್ಟಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ ಗಣೇಶ ಹೊಸಬೆಟ್ಟು, ಪ್ರಮುಖರಾದ ಕಿರಣ್ ಕುಮಾರ್ ಕೋಡಿಕಲ್, ಸುಧಾಕರ ಅಡ್ಯಾರ್, ಲೋಹಿತ್ ಕುಮಾರ್ ಉಪಸ್ಥಿತರಿದ್ದರು.