ಪ್ರಧಾನಿ ಮೋದಿ ಓರ್ವ ವ್ಯಕ್ತಿಯಲ್ಲ, ಭವಿಷ್ಯದ ನವಭಾರತ ನಿರ್ಮಾಣದ ಶಕ್ತಿ: ಶಾಸಕ ಸುನೀಲ್
ಬಂಟ್ವಾಳ, ಎ. 9: ಪ್ರಧಾನಿ ನರೇಂದ್ರ ಮೋದಿಯವರು ಓರ್ವ ವ್ಯಕ್ತಿಯಲ್ಲ, ಭವಿಷ್ಯದ ನವ ಭಾರತ ನಿರ್ಮಾಣದ ಶಕ್ತಿಯಾಗಿದ್ದಾರೆ ಎಂದು ದ.ಕ.ಜಿಲ್ಲಾ ಬಿಜೆಪಿ ಚುನಾವಣಾ ಉಸ್ತುವಾರಿ, ಶಾಸಕ ಸುನೀಲ್ ಕುಮಾರ್ ಹೇಳಿದ್ದಾರೆ.
ಮಂಗಳವಾರ ಸಂಜೆ ಬಿ.ಸಿ.ರೋಡಿನಲ್ಲಿರುವ ಬಿಜೆಪಿ ಕಚೇರಿಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿಯವರಿಗಿಂತ ವಯಸ್ಸಿನಲ್ಲಿ ಮೋದಿ ಹಿರಿಯರು, ಆದರೆ ನರೇಂದ್ರ ಮೋದಿಯವರು ಯುವಜನತೆಯ ಐಕಾನ್ ಆಗಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಈಗಾಗಲೇ ಬಿಡುಗಡೆಗೊಳಿಸಿರುವ ಪ್ರಣಾಳಿಕೆ ಪಾಕಿಸ್ತಾನದ ಜೊತೆ ಮಾತುಕತೆ ನಡೆಸಿ ರಚಿಸಿರುವ ಜಂಟಿ ಪ್ರಣಾಳಿಕೆಯಾಗಿದೆ ಎಂದ ಟೀಕಿಸಿದ ಅವರು ಬಿಜೆಪಿ ದೇಶದ ಮುಂದಿನ ಭವಿಷ್ಯ ಮತ್ತು ರೈತ ಪರವಾದ ಪ್ರಣಾಳಿಕೆಯನ್ನು ಬಿಡುಗಡೆಮಾಡಿದೆ ಎಂದರು.
ದ.ಕ.ಜಿಲ್ಲೆಯಲ್ಲಿ ಮೂರು ಹಂತದ ಮನೆ ಮನೆ ಭೇಟಿ ನೀಡಿ ಪ್ರಚಾರ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ. ಲೋಕಸಭಾ ಕ್ಷೇತ್ರದ 1861 ಬೂತ್ ಗಳಲ್ಲಿಯೂ ಮೊದಲ ಹಂತದ ಪ್ರಚಾರ ಕಾರ್ಯ ಮುಗಿದಿದ್ದು, ಎ.10 ರಿಂದ ಎರಡನೇ ಹಂತದ ಮನೆ, ಮನೆ ಪ್ರಚಾರ ಕಾರ್ಯ ಆರಂಭವಾಗಲಿದೆ ಎಂದು ಸುನೀಲ್ ಕುಮಾರ್ ತಿಳಿಸಿದರು.
ಎ.13 ರಂದು ಸಂಜೆ 3.30ಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಮಂಗಳೂರಿನ ಕೇಂದ್ರ ಮೈದಾನದಲ್ಲಿ ಭಾಗವಹಿಸುವ ವಿಜಯಸಂಕಲ್ಪ ರ್ಯಾಲಿಯಲ್ಲಿ ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸಲಿದ್ದಾರೆ. ಈ ರ್ಯಾಲಿ ಚುನಾವಣಾ ಪ್ರಚಾರದ ದಿಕ್ಕನ್ನೇ ಬದಲಿಸಲಿದ್ದು, ಬಂಟ್ವಾಳ ಕೇತ್ರದಿಂದಲೂ ಶಾಸಕ ಯು. ರಾಜೇಶ್ ನಾಯ್ಕ್ ಅವರ ನೇತೃತ್ವದಲ್ಲಿ ಸುಮಾರು 10 ಸಾವಿರ ಮಂದಿ ಕಾರ್ಯ ಕರ್ತರು ಭಾಗವಹಿಸಲಿದ್ದಾರೆ. ಈ ರ್ಯಾಲಿಯಲ್ಲಿ 5 ಸಾವಿರ ಮಂದಿ ಕಾರ್ಯಕರ್ತರಿಗೆ ಚೌಕಿದಾರಪೇಟೆ ಧರಸಲು ಅವಕಾಶ ಕಲ್ಪಿಸಲಾಗಿದೆ. ಭಾಗವಹಿಸುವವರು ಸಂಜೆ 3.30ರ ಒಳಗಾಗಿ ಮೈದಾನದ ಒಳಗೆ ಪ್ರವೇಶಿ ಸಬೇಕು ಎಂದು ಸುನೀಲ್ ಕುಮಾರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಯು.ರಾಜೇಶ್ ನಾಯ್ಕ್ ,ಸಹ ಪ್ರಭಾರಿ ಪ್ರತಾಪ್ ಸಿಂಹ ನಾಯಕ್,ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ದೇವದಾಸ ಶೆಟ್ಟಿ, ಸಂಚಾಲಕ ಗೋಪಾಲಕೃಷ್ಣ ಹೇರಳೆ, ಜಿಲ್ಲಾ ಉಪಾಧ್ಯಕ್ಷ ಜಿ. ಆನಂದ, ಬಂಟ್ವಾಳ ಕ್ಷೇತ್ರದ ಪ್ರಭಾರಿ ಅಪ್ಪಯ್ಯ ಮಣಿಯಾಣಿ, ಪ್ರ.ಕಾರ್ಯದರ್ಶಿಗಳಾದ ರಾಮದಾಸ್ ಬಂಟ್ವಾಳ, ಮೋನಪ್ಪ ದೇವಸ್ಯ, ಕಾರ್ಯದರ್ಶಿ ರಮಾನಾಥ ರಾಯಿ, ಮಾಜಿ ಪುರಸಭಾಧ್ಯಕ್ಷ ದಿನೇಶ್ ಭಂಡಾರಿ, ಪುರುಷೋತ್ತಮ ಶೆಟ್ಟಿ ವಾಮದಪದವು, ಗಣೇಶ್ ರೈ ಮಾಣಿ ಉಪಸ್ಥಿತರಿದ್ದರು.