ಕಾಂಗ್ರೆಸ್ ಮುಖಂಡರಿಂದ ಅಸಹಿಷ್ಣುತೆಯ ಪ್ರದರ್ಶನ ನಡೆಯುತ್ತಿದೆ: ಸುರೇಶ್ ಕುಮಾರ್
ಮಂಗಳೂರು, ಎ. 9: ದೇಶದ ಪ್ರಧಾನಿ ನರೇಂದ್ರ ಮೋದಿಯ ಹಮ್ಮಿಕೊಂಡಿರುವ ಯಾವೂದೇ ಯೋಜನೆಯನ್ನು ಸಹಿಸದಿರುವುದರ ಮೂಲಕ ಕಾಂಗ್ರೆಸ್ ಮುಖಂಡರು ಇನ್ಟಾಲರೆನ್ಸ್ ( ಅಸಹಿಷ್ಣುತೆ)ಯನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಸುರೇಶ್ ಕುಮಾರ್ ತಿಳಿಸಿದ್ದಾರೆ.
ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿಂದು ದಕ್ಷಿಣ ಕನ್ನಡ ಬಿಜೆಪಿ ಘಟಕದ ವತಿಯಿಂದ ಹಮ್ಮಿಕೊಂಡ ವಕೀಲರ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ದೇಶದಲ್ಲಿ ಸಾಕಷ್ಟು ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಂಡರೂ ಕಾಂಗ್ರೆಸ್ ಮುಖಂಡರು ಮೋದಿಯನ್ನು ಸಹಿಸಿಕೊಳ್ಳದೆ ಎಲ್ಲವನ್ನು ಟೀಕಿಸುತ್ತಿದ್ದಾರೆ. ಅಸಹಿಷ್ಣತೆಯ ಬಗ್ಗೆ ಮಾತನಾಡುತ್ತಿರುವ ಅವರಲ್ಲೇ ಅಸಹಿಷ್ಣತೆ ಇದೆ ಎಂದು ಸುರೇಶ್ ಕುಮಾರ್ ಟೀಕಿಸಿದರು.
ದೇಶದಲ್ಲಿ ಒಂದು ಕಾನೂನು, ಒಂದು ಪ್ರಧಾನಿ ಇರಬೇಕು ಎನ್ನುವುದು ಬಿಜೆಪಿಯ ನಿಲುವಾಗಿದೆ. ಈ ನಿಟ್ಟಿನಲ್ಲಿ ಕಾಶ್ಮೀರಕ್ಕೆ ಸಂಬಂಧಿಸಿದ ಸಂವಿಧಾನದ 35ಎ ಮತ್ತು 370ನೆ ವಿಧಿ ಬಗ್ಗೆ ಬಿಜೆಪಿ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ. ಅದಕ್ಕಾಗಿ ಮೋದಿ ಇನ್ನೊಮ್ಮೆ ಅಧಿಕಾರ ಪಡೆಯಬೇಕಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.
ಮೋದಿ ಬಗ್ಗೆ ಕರ್ನಾಟಕದ ಮುಖ್ಯ ಮಂತ್ರಿ ಕುಮಾರ ಸ್ವಾಮಿ ಹತಾಶೆಯಿಂದ ಹೇಳಿಕೆ ನೀಡುತ್ತಿದ್ದಾರೆ. ಚುನಾವಣೆ ಘೋಷಣೆಯಾದ ಬಳಿಕ ನರೇಂದ್ರ ಮೋದಿ ಕರ್ನಾಟಕದ ಮುಖ್ಯ ಮಂತ್ರಿಯಾಗಿ ವರ್ತಿಸುತ್ತಿಲ್ಲ. ಮಂಡ್ಯದ ಅಭ್ಯರ್ಥಿಯ ಪರ ಚುನಾವಣೆಯ ಪ್ರಚಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕರ್ನಾಟಕದ ಮುಖ್ಯ ಮಂತ್ರಿ ನಾಪತ್ತೆಯಾಗಿದ್ದಾರೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ. ಸಮಾರಂಭದಲ್ಲಿ ಮಾಜಿ ಉಪ ಸಭಾಪತಿ ಯೋಗೀಶ್ ಭಟ್, ಮಾಜಿ ಶಾಸಕ ಮೋನಪ್ಪ ಭಂಡಾರಿ ಉಪಸ್ಥಿತರಿದ್ದರು.