ಎ.12ರಂದು ವಿಶೇಷ ಮಕ್ಕಳ ಅಭಿನಯದ ಚಿತ್ರ ‘ವಿರುಪಾ’ ತೆರೆಗೆ
ಮಂಗಳೂರು, ಎ.10: ವಿಶೇಷ ಮಕ್ಕಳು ಅಭಿನಯಿಸಿರುವ ಸಮಾಜದಲ್ಲಿ ಸೌಹಾರ್ದವನ್ನು ಸಾರುವ ಮಕ್ಕಳ ಚಿತ್ರ ‘ವಿರುಪಾ’ ಎ.12ರಂದು ಕರ್ನಾಟಕ ರಾಜ್ಯಾದ್ಯಂತ ತೆರೆ ಕಾಣಲಿದೆ.
ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಚಿತ್ರದ ನಿರ್ದೇಶಕ ಪುನೀಕ್ ಶೆಟ್ಟಿ, ಮಕ್ಕಳನ್ನೇ ಕೇಂದ್ರೀಕರಿಸಿ ನಿರ್ಮಿತ ಚಿತ್ರ ಇದಾಗಿದೆ ಎಂದರು.
ಈ ಚಿತ್ರದ ವಿಶೇಷವೆಂದರೆ ಚಿತ್ರದಲ್ಲಿ ನಟಿಸಿರುವ ಬಾಲಕ ಶಾಹಿಲ್ ಭಟ್ಕಳದವರಾಗಿದ್ದು, ಅವರಿಗೆ ಕಣ್ಣು ಕಾಣಿಸುವುದಿಲ್ಲ. ಇನ್ನೋರ್ವ ಬಾಲಕ ಚರಣ್ ತುಮಕೂರಿನವರಾಗಿದ್ದು, ಅವರಿಗೆ ಕಿವಿ ಕೇಳಿಸದು, ಮಾತನಾಡಲು ಆಗದು. ಇವರ ಜತೆ ಹೊಸಪೇಟೆಯ ವಿಷ್ಣು ಎಂಬ ಬಾಲಕನೂ ನಟಿಸಿದ್ದು, ಚಿತ್ರದಲ್ಲಿ ಮಕ್ಕಳದೇ ಪ್ರಧಾನ ಪಾತ್ರ ಎಂದು ಅವರು ವಿವರಿಸಿದರು.
ಡುಬೋಯ್ಸೋ ಪ್ರೊಡಕ್ಷನ್ನಡಿ ನಿರ್ಮಾಣವಾದ ಪ್ರಥಮ ಚಿತ್ರ ಇದಾಗಿದ್ದು, ಡ್ಯಾಫ್ನಿ ನೀತು ಡಿಸೋಜ ಚಿತ್ರದ ನಿರ್ಮಾಪಕರು. ಐತಿಹಾಸಿಕ ಸ್ಥಳ ಹಂಪಿಯಲ್ಲಿ ಚಿತ್ರೀಕರಿಸಲಾಗಿದ್ದು, ಪ್ರಸಿದ್ಧ ಪ್ರವಾಸಿ ತಾಣವಾದ ಹಂಪಿಯಲ್ಲಿ ಗೈಡ್ಗಳು ಹಲವಾರು ಮಂದಿ. ಪ್ರತಿದಿನವೂ ಹೊಸಬರನ್ನು ಭೇಟಿಯಾಗುವ ಅವರ ಜೀವನದಲ್ಲಿ ಏನೆಲ್ಲಾ ಕತೆಗಳು ನಡೆದಿರಬಹುದು ಎಂಬ ಕುತೂಹಲಕಾರಿ ಘಟನೆಯನ್ನು ಒಳಗೊಂಡ ಚಿತ್ರ ಇದಾಗಿದೆ. ಚಿತ್ರದಲ್ಲಿ ಒಂದು ಹಾಡು ಅಳವಡಿಸಲಾಗಿದ್ದು, ಒಟ್ಟು ಒಂದು ಗಂಟೆ 40 ನಿಮಿಷಗಳ ಅವಧಿಯದ್ದಾಗಿದೆ ಎಂದು ಅವರು ಹೇಳಿದರು.
ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ವಿಶೇಷ ಮಕ್ಕಳಿಗೆ ಚಿತ್ರೀಕರಣಕ್ಕೆ ಮುಂಚಿತವಾಗಿ 15 ದಿನಗಳ ಕಾಲ ತರಬೇತಿಯನ್ನು ನೀಡಲಾಗಿದೆ ಎಂದು ಪುನೀಕ್ ಶೆಟ್ಟಿ ತಿಳಿಸಿದರು.
ಚಿತ್ರದಲ್ಲಿ ಫ್ರಾನ್ಸ್ನ ಗಾಳಿಪಟ ತಜ್ಞ ಡ್ಯಾನಿಯಲ್ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಫ್ರಾನ್ಸ್ನಲ್ಲಿ ಗಾಳಿಪಟ ಸ್ಪರ್ಧೆಯ ಸಂದರ್ಭ ಪರಿಚಿತರಾಗಿದ್ದ ಅವರು ಚಿತ್ರದಲ್ಲಿ ನಟಿಸುವ ಆಸಕ್ತಿ ತೋರಿದ್ದರು. ಮಾತ್ರವಲ್ಲದೆ ಹಂಪಿ ಕ್ಷೇತ್ರದ ಬಗ್ಗೆ ವಿಶೇಷ ಅಧ್ಯಯನವನ್ನು ಅವರು ಮಾಡುತ್ತಿದ್ದು, ಅಲ್ಲಿಯೇ ಚಿತ್ರೀಕರಣ ನಡೆಸಲು ಪ್ರೋತ್ಸಾಹಿಸಿದ್ದಾರೆ ಎಂದು ಕಲಾವಿದ ದಿನೇಶ್ಹೊಳ್ಳ ಈ ಸಂದರ್ಭ ತಿಳಿಸಿದ್ದಾರೆ.
ದ್ದಿಗೋಷ್ಠಿಯಲ್ಲಿ ಬಾಲಕ ನಟರಾದ ಶಾಹಿಲ್, ಚರಣ್, ಅರುಣ್ ಬಂಗೇರ ಉಪಸ್ಥಿತರಿದ್ದರು.
ಮಕ್ಕಳ ಚಿತ್ರಕ್ಕೆ ಥಿಯೇಟರ್ ಸಮಸ್ಯೆ!
ಮಕ್ಕಳ ಚಿತ್ರಕ್ಕೆ ಬೇಡಿಕೆಯೇ ಇಲ್ಲ ಎಂದು ಹೇಳಿಕೊಂಡು ಥಿಯೇಟರ್ಗಳನ್ನೇ ನೀಡುತ್ತಿಲ್ಲ. ವಿರುಪಾ ಚಿತ್ರ ಬಿಡುಗಡೆಗೆ ಥಿಯೇಟರ್ಗಾಗಿ ಬಹಳಷ್ಟು ಕಷ್ಟ ಪಡಬೇಕಾಯಿತು. ಈ ಚಿತ್ರ ಮಕ್ಕಳಿಗಾಗಿಯೇ ತಯಾರು ಮಾಡಲಾದ ಚಿತ್ರ. ಕಮರ್ಷಿಯಲ್ ಚಿತ್ರವಲ್ಲ. ಆ ಚಿತ್ರದಿಂದ ಬರುವ ಲಾಭಾಂಶವನ್ನು ವಿಶೇಷ ಮಕ್ಕಳಿಗೇ ನೆರವು ನೀಡುವ ಉದ್ದೇಶವನ್ನು ಹೊಂದಲಾಗಿದೆ ಎಂದು ಕಾರ್ಯಕಾರಿ ನಿರ್ಮಾಪಕ ಡಿಕ್ಸನ್ ಜಾಕಿ ಡಿಸೋಜ ತಿಳಿಸಿದರು.