ಅಧಿಕಾರಕ್ಕಾಗಿ ಕೋಮುವಾದಿಗಳೊಂದಿಗೆ ಸೇರಬೇಡಿ : ಸಿಎಂ, ಪ್ರಮೋದ್ಗೆ ಉಡುಪಿ ಮುಸ್ಲಿಂ ಮುಖಂಡರ ನೇರನುಡಿ
► ಜಾತ್ಯತೀತ ತತ್ವಕ್ಕೆ ಎಂದೂ ಮೋಸ ಮಾಡುವುದಿಲ್ಲ ಎಂದು ಕುಮಾರಸ್ವಾಮಿ ಭರವಸೆ ► ವಿಡಿಯೋ ವೈರಲ್ !
ಉಡುಪಿ, ಎ.10: ಜಾತ್ಯತೀತ ತತ್ವಕ್ಕೆ ಸದಾ ಬದ್ಧರಾಗಿರಿ, ಅಧಿಕಾರಕ್ಕಾಗಿ ಕೋಮುವಾದಿಗಳ ಜೊತೆ ಸೇರಬೇಡಿ ಎಂದು ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಉಡುಪಿ ಚಿಕ್ಕಮಗಳೂರು ಲೋಕ ಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಅವರಿಗೆ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟವು ನೇರ ನುಡಿಯ ಮೂಲಕ ಎಚ್ಚರಿಸಿರುವ ಸಂದೇಶ ನೀಡಿರುವ ವೀಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅದಕ್ಕೆ ಸ್ಪಂದಿಸಿರುವ ಕುಮಾರಸ್ವಾಮಿ ಯಾವತ್ತೂ ಜಾತ್ಯತೀತ ತತ್ವಕ್ಕೆ ಮೋಸ ಮಾಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಕೋಶಾಧಿಕಾರಿ ಎಸ್.ಕೆ. ಇಕ್ಬಾಲ್ ಕಟಪಾಡಿ ಅವರ ಮನೆಯಲ್ಲಿ ಮುಸ್ಲಿಂ ಮುಖಂಡರನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಕುಮಾರ ಸ್ವಾಮಿ ಹಾಗೂ ಪ್ರಮೋದ್ ಮಧ್ವರಾಜ್ ಅವರಿಗೆ ಒಕ್ಕೂಟದ ಜಿಲ್ಲಾಧ್ಯಕ್ಷ ಯಾಸೀನ್ ಮಲ್ಪೆ ಸಮುದಾಯದ ಆಶಯ, ಬೇಡಿಕೆ ಹಾಗೂ ತಮ್ಮ ಸಿದ್ಧಾಂತಗಳಿಗೆ ರಾಜಕೀಯ ಪಕ್ಷಗಳ ಬದ್ಧತೆಯ ಕುರಿತು ನೇರ ಮಾತುಗಳಲ್ಲಿ ಹೇಳಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ.
‘ಈ ಹಿಂದೆ ತಾವು ಮುಖ್ಯಮಂತ್ರಿಯಾಗಿದ್ದಾಗ ಹಮ್ಮಿಕೊಂಡಿದ್ದ ಜನಪರ ಕಾರ್ಯಕ್ರಮಗಳ ಬಗ್ಗೆ ಸಮುದಾಯಕ್ಕೆ ಬಹಳ ಅಭಿಮಾನ ಹಾಗೂ ಗೌರವ ಇದೆ. ಆದರೆ ನೀವು ಈ ಹಿಂದೆ ಬಿಜೆಪಿ ಜೊತೆ ಸೇರಿ ಸರಕಾರ ರಚಿಸಿದ್ದೀರಿ. ಆದುದರಿಂದ ಈ ಬಾರಿಯ ಚುನಾವಣೆಯಲ್ಲಿ ತಮಗೆ ಹೆಚ್ಚು ಸೀಟು ಬಂದರೆ ಮತ್ತೆ ನೀವು ಅವರೊಂದಿಗೆ ಸೇರಿಕೊಳ್ಳುವ ಸಾಧ್ಯತೆ ಇಲ್ಲದಿಲ್ಲ ಎಂಬ ಸಂಶಯ ಜನರಲ್ಲಿ ಮೂಡಿದೆ. ಕೋಮುವಾದಿ ಶಕ್ತಿಯನ್ನು ಸೋಲಿಸುವ ಉದ್ದೇಶದಿಂದ ನಾವು ಜಾತ್ಯತೀತ ಪಕ್ಷಗಳನ್ನು ಬೆಂಬಲಿಸುತ್ತಿದ್ದೇವೆ. ಆದುದರಿಂದ ಮುಂದಿನ ದಿನ ಗಳಲ್ಲಿ ಹಿಂದೆ ಮಾಡಿರುವ ತಪ್ಪು ಮರುಕಳಿಸುವುದಿಲ್ಲ ಎಂಬ ಭರವಸೆಯನ್ನು ತಾವು ಜನರಿಗೆ ನೀಡಬೇಕು’ ಎಂದು ಯಾಸೀನ್ ಮಲ್ಪೆ ತಮ್ಮ ಭಾಷಣದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯನ್ನು ಉದ್ದೇಶಿಸಿ ಹೇಳಿದರು.
‘ಪ್ರಮೋದ್ ಮಧ್ವರಾಜ್ ತಾವು ನುಡಿದಂತೆ ಜಾತ್ಯತೀತ ತತ್ವಕ್ಕೆ ಸದಾ ಬದ್ಧರಾಗಿರಬೇಕು. ಕಳೆದ ಅವಧಿಯಲ್ಲಿ ಜನರಿಗೆ ಸಂಶಯ ಬರುವಂತಹ ಅನೇಕ ಮಾತುಗಳು, ನಡವಳಿಕೆಗಳು ಅವರಿಂದ ವ್ಯಕ್ತವಾಗಿವೆ. ತಾನು ಜಾತ್ಯತೀತ ತತ್ವಕ್ಕೆ ಬದ್ಧ ಎಂದು ಅವರು ಹೇಳಿದ್ದರೂ ಅವರ ಹೇಳಿಕೆಗಳು ಮತ್ತು ವರ್ತನೆಗಳ ಬಗ್ಗೆ ಜನರಿಗೆ ಸಂಶಯ ಇದೆ. ಆ ಸಂಶಯ ಭಾವನೆ ಮುಂದಿನ ದಿನಗಳಲ್ಲಿ ಬಾರದಂತೆ ಎತ್ಚರಿಕೆ ವಹಿಸಬೇಕು. ನುಡಿದಂತೆ ನಡೆಯುವ ಮೂಲಕ ಜಾತ್ಯತೀತ ತತ್ವಕ್ಕೆ ಬದ್ಧರಾಗಿರಬೇಕು’ ಎಂದು ಯಾಸೀನ್ ಅವರು ತಿಳಿಸಿದರು.
ಸಮುದಾಯದ ಬೇಡಿಕೆ ಈಡೇರಿಸಿ
‘ಸಮ್ಮಿಶ್ರ ಸರಕಾರ ರಚನೆಯಾಗಿ ನೀವು ಮುಖ್ಯಮಂತ್ರಿಯಾದ ನಂತರ ಮಂಡಿಸಿದ ಈ ಬಾರಿಯ ಬಜೆಟ್ನಲ್ಲಿ ಮುಸ್ಲಿಮ್ ಸಮುದಾಯವನ್ನು ಕಡೆಗಣಿಸಲಾಗಿದೆ. ಅದಕ್ಕೆ ಕಾರಣ ಕಳೆದ ಚುನಾವಣೆಯಲ್ಲಿ ಮುಸ್ಲಿಮ್ ಸಮುದಾಯದವರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿರುವುದು ಮತ್ತು ಜೆಡಿಎಸ್ನ್ನು ಬೆಂಬಲಿಸಲಿದೆ ಇರುವುದು ಎಂದು ಜನರು ಆಡಿಕೊಳ್ಳುತ್ತಿದ್ದಾರೆ. ಈ ಕುರಿತು ಸಮುದಾಯದಲ್ಲಿರುವ ಸಂಶಯಗಳನ್ನು ನಿವಾರಣೆ ಮಾಡುವ ನಿಟ್ಟಿನಲ್ಲಿ ಜನಪರ ಕಾರ್ಯಕ್ರಮಗಳನ್ನು ರೂಪಿಸಬೇಕು. ಮುಸ್ಲಿಮರಿಗೆ ಸಾಚಾರ್ ಆಯೋಗದ ಶಿಫಾರಸು ಪ್ರಕಾರ ಕಾರ್ಯಕ್ರಮಗಳನ್ನು ಜಾರಿಗೆ ತರಬೇಕು’ ಎಂದು ಯಾಸೀನ್ ಮಲ್ಪೆ ತಮ್ಮ ಭಾಷಣ ದಲ್ಲಿ ಮುಖ್ಯಮಂತ್ರಿಯನ್ನು ಒತ್ತಾಯಿಸಿದರು.
ಈ ಹಿಂದೆ ಪ್ರಮೋದ್ ಮಧ್ವರಾಜ್ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಒಕ್ಕೂಟದಿಂದ ಸಲ್ಲಿಸಿರುವ ಸಮುದಾಯದ 15 ಬೇಡಿಕೆಗಳ ಪೈಕಿ ಒಂದೇ ಒಂದು ಬೇಡಿಕೆಯನ್ನು ಈವರೆಗೆ ಈಡೇರಿಸಿಲ್ಲ. ಇದನ್ನು ಮುಂದಿನ ದಿನಗಳಲ್ಲಿ ಈಡೇರಿಸುವ ಕೆಲಸ ವನ್ನು ಮುಖ್ಯಮಂತ್ರಿಗಳು ಮಾಡಬೇಕು. ಜಿಲ್ಲೆಯಲ್ಲಿ ಮಸೀದಿ, ಮದರಸ ಸೇರಿದಂತೆ ಮುಸ್ಲಿಮರ ಆರಾಧನಾಲಯಗಳನ್ನು ನಿರ್ಮಿಸಲು ವಿನಾಕಾರಣ ತಡೆಯೊಡ್ಡುವ ಕಾರ್ಯ ನಡೆಯುತ್ತಿದ್ದು, ಈ ನಿಟ್ಟಿನಲ್ಲಿ ಆರಾಧನಾಲಯಗಳ ನಿರ್ಮಿಸಲು ಯಾವುದೇ ಅಡೆ ತಡೆ ಬಾರದೆ ರಾಜ್ಯಮಟ್ಟದಲ್ಲಿ ಸರಳ ಕಾನೂನು ರಚಿಸಬೇಕು ಎಂದವರು ಆಗ್ರಹಿಸಿದರು .
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಂದುಕೊರತೆ ಸಭೆಯಂತೆ ಮೂರು ತಿಂಗಳಿಗೊಮ್ಮೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಅಧ್ಯಕ್ಷತೆ ಯಲ್ಲಿ ಮುಸ್ಲಿಮ್ ಸಮುದಾಯದ ಕುಂದುಕೊರತೆ ಸಭೆಯನ್ನು ಕಾನೂನು ಬದ್ಧವಾಗಿ ನಡೆಸುವ ಕುರಿತು ಆದೇಶ ಹೊರಡಿಸಬೇಕು ಎಂದು ಯಾಸೀನ್ ಮಲ್ಪೆ ಆಗ್ರಹಿಸಿದರು.
ವಿವಿಧ ಇಲಾಖೆಗಳಲ್ಲಿ ವಿನಿಯೋಗಿಲ್ಪಡುವ ವಿನಿಯೋಗದ ಶೇ.15ರಷ್ಟು ಅಲ್ಪಸಂಖ್ಯಾತರಿಗಾಗಿ ಮೀಸಲಿಡಬೇಕೆಂದು ಈ ಹಿಂದಿನ ಸರಕಾರದ ನಿರ್ಣಯ ವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಈ ಬಗ್ಗೆ ನಿಗಾ ವಹಿಸುವಂತೆ ವಿವಿಧ ಇಲಾಖೆಗಳಿಗೆ ಸುತ್ತೋಲೆಯನ್ನು ರವಾನಿಸಬೇಕು ಹಾಗೂ ಅಲ್ಪಸಂಖ್ಯಾತರ ಪ್ರದೇಶಾಭಿವೃದ್ಧಿಗೆ ಹೆಚ್ಚಿನ ಅನುದಾನ ಮೀಸಲಿಡಬೇಕು ಎಂದು ಅವರು ಒತ್ತಾಯಿಸಿದರು.
ಜಾತ್ಯತೀತ ತತ್ವಕ್ಕೆ ದ್ರೋಹ ಮಾಡಲ್ಲ: ಸಿಎಂ
ಮುಸ್ಲಿಮ್ ಒಕ್ಕೂಟದ ಬೇಡಿಕೆ ಹಾಗೂ ಸಲಹೆಗಳನ್ನು ಸಮಚಿತ್ತದಿಂದ ಆಲಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ತಾಳ್ಮೆಯಿಂದಲೇ ಎಲ್ಲದಕ್ಕೂ ಪ್ರತಿಕ್ರಿಯಿಸಿದ್ದಾರೆ. ‘ನಾನು ಮುಸ್ಲಿಮ್ ಸಮುದಾಯಕ್ಕೆ ಯಾವುದೇ ಕಾರಣಕ್ಕೂ ದ್ರೋಹ ಮಾಡಲ್ಲ. ರಾಜ್ಯದಲ್ಲಿ ಬಿಜೆಪಿಯನ್ನು ಸಂಪೂರ್ಣವಾಗಿ ಸೋಲಿಸುವುದೇ ನನ್ನ ಗುರಿ. ಈ ಬಾರಿ ರಾಜ್ಯದಲ್ಲಿ 22-23 ಜೆಡಿಎಸ್ ಕಾಂಗ್ರೆಸ್ ಅಭ್ಯರ್ಥಿಗಳು ಗೆಲವು ಸಾಧಿಸಲೇಬೇಕು. ಇದಕ್ಕೆ ಅಲ್ಪಸಂಖ್ಯಾತರು ನಮ್ಮ ಜೊತೆ ಕೈಜೋಡಿಸಬೇಕು. ನಿಮ್ಮಲ್ಲಿ ನಮ್ಮ ಬಗ್ಗೆ ಯಾವುದೇ ಅನುಮಾನ ಇರಬಾರದು ಎಂದು ಮನವಿ ಮಾಡಿದರು.
2014ರಲ್ಲಿ ನಾವು ಬಿಜೆಪಿ ಜೊತೆ ಮೈತ್ರಿ ಮಾಡಬೇಕೆಂದು ಬಯಸಿರಲಿಲ್ಲ. ರಾಜ್ಯದಲ್ಲಿ ನಮ್ಮ ಪಕ್ಷ ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ನನ್ನ ಮುಂದೆ ಇತ್ತು. ಅವರೊಂದಿಗೆ ಸರಕಾರ ಮಾಡಿದರೂ ಎಂದಿಗೂ ನಾನು ಜಾತ್ಯತೀತ ತತ್ವಗಳೊಂದಿಗೆ ರಾಜಿ ಮಾಡಿಕೊಂಡಿರಲಿಲ್ಲ. ದೇವೇಗೌಡರಿಗೂ ಬಿಜೆಪಿ ಜೊತೆ ಸರಕಾರ ಮಾಡಿದಕ್ಕೂ ಸಂಬಂಧವೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಇನ್ನು ಮುಂದೆ ಯಾವುದೇ ಕಾರಣಕ್ಕೂ ಬಿಜೆಪಿ ಜೊತೆ ಹೋಗುವ ಪ್ರಶ್ನೆಯೇ ಇಲ್ಲ. ಅಂತಹ ಪರಿಸ್ಥಿತಿ ಬಂದರೆ ಜನರ ಮುಂದೆ ಬಂದು ಚುನಾವಣೆ ಎದುರಿಸುತ್ತೇವೆ. ಕೇಂದ್ರ ಅಥವಾ ರಾಜ್ಯದಲ್ಲಿ ಬಿಜೆಪಿ ಜೊತೆ ಎಂದಿಗೂ ಅಧಿಕಾರ ಹಂಚಿಕೊಳ್ಳುವುದಿಲ್ಲ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಬಜೆಟ್ನಲ್ಲಿ ಮುಸ್ಲಿಮ್ ಸಮುದಾಯವನ್ನು ನಾವು ಕಡೆಗಣಿಸಿಲ್ಲ. ಬೇಕಾದರೆ ಈ ವರ್ಷದ ಬಜೆಟ್ನ ಸಂಪೂರ್ಣ ಮಾಹಿತಿಯನ್ನು ನಿಮ್ಮ ಮುಂದೆ ಇಡುತ್ತೇನೆ. ಹಿಂದೆಗಿಂತ ನಾನು ಒಂದು ನಯಾ ಪೈಸೆ ಕಡಿಮೆ ಮಾಡಿದ್ದಿದ್ದರೆ ನಾನು ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆ. ಇಂದು ವ್ಯವಸ್ಥಿತವಾಗಿ ನಮ್ಮ ಮತ್ತು ನಿಮ್ಮ ಸಂಬಂಧ ಹಾಳು ಮಾಡಲು ಹೊರಟಿದ್ದಾರೆ ಎಂದು ಅವರು ಹೇಳಿದರು.
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್ಗೆ ಮತ ಹಾಕಿದರೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಮುಸ್ಲಿಮರಲ್ಲಿ ವ್ಯವಸ್ಥಿತವಾಗಿ ಅಪಪ್ರಚಾರ ನಡೆಸಲಾಗಿತ್ತು. ಇದರ ಪರಿಣಾಮ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲುಲು ಸಾಧ್ಯವಾಯಿತು. ಇಲ್ಲವಾದರೆ ಬಿಜೆಪಿ 80ಸ್ಥಾನ ಕೂಡ ಸಿಗುತ್ತಿರಲಿಲ್ಲ ಎಂದರು.
ಮುಸ್ಲಿಮ್ ಸಮುದಾಯ ಮೈಕೊಡವಿ ಎದ್ದು ಬಂದು ಈ ಬಾರಿಯ ಚುನಾ ವಣೆಯಲ್ಲಿ ಶೇ.70ರಷ್ಟು ಮತ ಚಲಾಯಿಸಿದರೆ ಎಲ್ಲ ಪಕ್ಷಗಳು ಬಂದು ನಿಮ್ಮ ಮುಂದೆ ಕೈಕಟ್ಟಿ ನಿಲ್ಲಬೇಕು. ನಿಮಗೆ ಆ ಶಕ್ತಿ ಇದೆ. ನೀವು ಅದನ್ನು ಉಪಯೋಗ ಮಾಡುತ್ತಿಲ್ಲ ಎಂದು ಅವರು ತಿಳಿಸಿದರು.
ಚುನಾವಣೆ ಮುಗಿದ ನಂತರ ಬೆಂಗಳೂರಿಗೆ ಉಡುಪಿಯ ಮುಸ್ಲಿಮ್ ಮುಖಂಡರ ನಿಯೋಗ ಬಂದರೆ ಅಧಿಕಾರಿಗಳ ಸಭೆ ಕರೆದು ಸಮಸ್ಯೆ ಹಾಗೂ ಬೇಡಿಕೆಗಳ ಬಗ್ಗೆ ಚರ್ಚೆ ನಡೆಸಲು ಸಿದ್ಧನಿದ್ದೇನೆ. ಸಮಸ್ಯೆ ಸರಿಪಡಿಸುವ ಬಗ್ಗೆ ಸ್ಥಳದಲ್ಲಿಯೇ ತೀರ್ಮಾನ ತೆಗೆದುಕೊಳ್ಳಲಾಗುವುದು. ಪ್ರಮೋದ್ ಮಧ್ವರಾಜ್ ಬಗ್ಗೆ ಯಾವುದೇ ಕಾರಣಕ್ಕೂ ಅನುಮಾನ ಪಡಬೇಡಿ. ಅವರು ದಾರಿ ತಪ್ಪಿದ್ದರೆ ಅವರನ್ನು ನಾನು ಸರಿಪಡಿಸುತ್ತೇನೆ ಎಂದು ಮುಖ್ಯಮಂತ್ರಿ ಹೇಳಿದರು.
ಒಟ್ಟಾರೆ ಈ ಸಂವಾದದಲ್ಲಿ ಮುಸ್ಲಿಮ್ ಸಮುದಾಯದ ಬೇಡಿಕೆ, ಸಮಸ್ಯೆ, ಅನುಮಾನಗಳ ಕುರಿತು ಆರೋಗ್ಯಕರ ಚರ್ಚೆಗಳು ನಡೆದವು. ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಬಿ.ಎಂ.ಫಾರೂಕ್, ಬೋಜೆಗೌಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ.ಗಫೂರ್, ಒಕ್ಕೂಟದ ಮಾಜಿ ಅಧ್ಯಕ್ಷ ಎಂ.ಪಿ. ಮೊಯ್ದಿನಬ್ಬ, ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮೌಲಾ, ಕೋಶಾಧಿಕಾರಿ ಎಸ್.ಕೆ.ಇಕ್ಬಾಲ್, ಇದ್ರೀಸ್ ಹೂಡೆ, ಸಲಾವುದ್ದೀನ್ ಅಬ್ದುಲ್ಲಾ, ಶಾಬಾನ್ ಹಂಗಳೂರು, ಅಝೀಝ್ ಉದ್ಯಾವರ, ಜಫರುಲ್ಲಾ ಹೂಡೆ, ಹಬೀಬ್ ಅಲಿ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮ ನಡೆಸಿ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದಲ್ಲಿ ಪ್ರಕರಣ ದಾಖಲಾಗಿದೆ.