ಪ್ರಾಕೃತ ಡಿಪ್ಲೊಮೋ ಕೋರ್ಸ್ನ ಸಂಪರ್ಕ ತರಗತಿ ಉದ್ಘಾಟನೆ
ಕಾರ್ಕಳ: ಪ್ರಾಕೃತ ಭಾಷೆ ಅತ್ಯಂತ ಹಳೆಯ ಭಾಷೆ. ಇತಿಹಾಸದಲ್ಲಿನ ಎಷ್ಟೋ ಗತ ನೆನಪುಗಳು ಪ್ರಾಕೃತ ಭಾಷೆಯಲ್ಲಿ ಬರೆಯಲ್ಪಟ್ಟಿವೆ. ಭಾಷೆಯ ಬಗ್ಗೆ ಜ್ಞಾನವಿಲ್ಲದ ಕಾರಣ ಎಷ್ಟೋ ವಿಷಯಗಳು ಜನರಿಗೆ ಅರಿಯದಾಗಿದೆ. ಭಾಷೆಯನ್ನು ಕಲಿಯುವ ಹವ್ಯಾಸ ಬೆಳೆಸಿಕೊಂಡರೆ ಜ್ಞಾನ ಹೆಚ್ಚಾಗುತ್ತದೆ ಎಂದು ಶ್ರವಣ ಬೆಳಗೊಳ ಪ್ರಾಕೃತ ಭವನದ ಉಪನ್ಯಾಸಕ ಡಾ. ರಾಜೇಂದ್ರ ಪಾಟೀಲ್ ಶಾಸ್ತ್ರಿ ಹೇಳಿದ್ದಾರೆ.
ಅವರು ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಇತಿಹಾಸ ವಿಭಾಗದಿಂದ ನಡೆದ ಪ್ರಾಕೃತ ಡಿಪ್ಲೊಮೋ ಕೋರ್ಸ್ನ ಸಂಪರ್ಕ ತರಗತಿಗಳನ್ನು ಉದ್ಘಾಟಿಸಿ ಮಾತನಾಡಿದರು.
ಜಗತ್ತಿನ ಇತಿಹಾಸ ಅರಿಯಬೇಕು. ಇವು ನಿಜವಾದ ಪಾಠ ಕಲಿಸುತ್ತವೆ. ಕಲಾ ವಿದ್ಯಾರ್ಥಿಗಳಿಗೆ ಈ ಡಿಪ್ಲೊಮೋ ಕೋರ್ಸ್ ಹೆಚ್ಚಿನ ಸಹಾಯವಾಗಲಿದೆ. ಪ್ರಾಕೃತ ಭಾಷೆಯ ಜ್ಞಾನ ಉನ್ನತ ಶಿಕ್ಷಣಕ್ಕೆ, ಇಲ್ಲವೇ ಸಂಶೋಧನೆಯಂತಹ ಕಾರ್ಯಗಳಿಗೆ ನೆರವಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಮಂಜುನಾಥ್ ಎ. ಕೋಟ್ಯಾನ್ ಮಾತನಾಡಿ, ಕಲಾ ವಿಭಾಗದಲ್ಲಿ ವಿದ್ಯಾರ್ಥಿಗಳಿಗೆ ಸಾಕಷ್ಟು ಅವಕಾಶಗಳಿವೆ. ಆದರೆ ಅದರ ಕುರಿತು ಹೆಚ್ಚಿನವರಿಗೆ ಅರಿವಿಲ್ಲ. ಪ್ರಾಕೃತ ಭಾಷಾ ಕಲಿಕೆ ಇತಿಹಾಸ ವಿದ್ಯಾರ್ಥಿಗಳಿಗೆ ಮುಂದೊಂದು ದಿನ ಸಹಾಯಕವಾಗಲಿದೆ. ಆದ್ದರಿಂದ ಪ್ರತಿಯೊಬ್ಬರೂ ಈ ಕೋರ್ಸ್ನ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಶ್ರವಣಬೆಳಗೊಳ ಪ್ರಾಕೃತ ಭವನದ ಉಪನ್ಯಾಸಕ ಲೋಕಕುಮಾರ್, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಇತಿಹಾಸ ವಿಭಾಗದ ಮುಖ್ಯಸ್ಥೆ ಸುಚಿತ್ರಾ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿಗಳಾದ ರೇಣುಕಾ ಕಾರ್ಯಕ್ರಮ ನಿರೂಪಿಸಿದರು. ಪೂರ್ಣೇಶ್ ವಂದಿಸಿದರು. (ಫೊಟೋ:10ಕಾರ್ಕಳ-ರಾಜೇಂದ್ರ)