ಒಳ್ಳೆಯ ಚಿಂತನೆಯಿಂದ ಸಾಧನೆ ಮಾಡಲು ಸಾಧ್ಯ: ಅದಮಾರು ಸ್ವಾಮೀಜಿ
ಉಡುಪಿ, ಎ.10: ಒಳ್ಳೆಯ ಚಿಂತನೆಗಳ ಬಗ್ಗೆ ಮನಸ್ಸಿನಲ್ಲಿ ಅರ್ಥ ತಿಳಿದು ಕೊಂಡು ಮನನ ಮಾಡಿದರೆ ಅದು ಪ್ರಾಪ್ತವಾಗುತ್ತದೆ. ಅದೇ ರೀತಿ ಯಾವುದೇ ಕ್ಷೇತ್ರದಲ್ಲೂ ಪ್ರಗತಿ ಹಾಗೂ ಬದಲಾವಣೆ ತರಬೇಕೆಂಬುದರ ಬಗ್ಗೆ ಒಳ್ಳೆಯ ಚಿಂತನೆ ಮಾಡಿದರೆ ಬಹಳ ದೊಡ್ಡ ಸಾಧನೆ ಮಾಡಲು ಸಾಧ್ಯ. ಆದುದರಿಂದ ಚಿಂತನೆಯನ್ನು ಮೊದಲು ನಮ್ಮ ಮೆದುಳಿನಲ್ಲಿ ಹೂಡಿಕೆ ಮಾಡಬೇಕು ಎಂದು ಅದಮಾರು ಮಠ ಆಡಳಿತ ಮಂಡಳಿಯ ಉಪಾಧ್ಯಕ್ಷ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಉಡುಪಿ ಪೂರ್ಣಪ್ರಜ್ಞ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ವಾಣಿಜ್ಯ ವಿಭಾಗದ ವತಿಯಿಂದ ಕರ್ನಾಟಕ ಬ್ಯಾಂಕ್, ಪೂರ್ಣಪ್ರಜ್ಞ ಕಾಲೇಜು ಅಧ್ಯಯನ ಮತ್ತು ಅಭಿವೃದ್ಧಿ ಕೇಂದ್ರ, ಮಂಗಳೂರು ವಿವಿ ವಾಣಿಜ್ಯ ಉಪನ್ಯಾ ಸಕರ ಸಂಘದ ಸಹಯೋಗದೊಂದಿಗೆ ಬುಧವಾರ ಕಾಲೇಜಿನ ಪ್ರಜ್ಞ ಸಭಾಂಗಣ ದಲ್ಲಿ ಆಯೋಜಿಸಲಾದ ‘ತಂತ್ರಜ್ಞಾನ ಯುಗದಲ್ಲಿ ಅವಿಷ್ಕಾರಾತ್ಮಕ ಬ್ಯಾಂಕಿಂಗ್ ವ್ಯವಸ್ಥೆ’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಬ್ಯಾಂಕ್ ಎಂಬುದು ದೇಹದಲ್ಲಿ ರಕ್ತ ಇದ್ದಂತೆ. ಆದುದರಿಂದ ಬ್ಯಾಂಕಿಂಗ್ ವ್ಯವಸ್ಥೆ ಎಂಬುದು ಇಂದು ಬಹಳ ಮುಖ್ಯವಾಗಿದೆ. ನಾವು ಹೂಡಿಕೆಯನ್ನು ನಮ್ಮ ಮೆದುಳಿಗೆ ಮಾಡಬೇಕು. ಆ ಮೂಲಕ ಯೋಚನೆ ಮಾಡಿ ಮಾತ ನಾಡಬೇಕು. ಒಳ್ಳೆಯ ಮಾತೇ ದೊಡ್ಡ ಸಂಪತ್ತು ಹೊರತು ಹಣ ಅಲ್ಲ. ಮಾತು ಚೆನ್ನಾಗಿದ್ದರೆ ಸಂಪತ್ತು ಬರುತ್ತದೆ. ಯಾವ ಸಂದರ್ಭದಲ್ಲಿ ಹೇಗೆ ಮಾತನಾಡ ಬೇಕೆಂಬ ಕಲೆ ಅರಿತುಕೊಳ್ಳಬೇಕು ಎಂದರು.
ದೇವರ ಚಿಂತನೆ ಮಾಡುವುದು ಕೂಡ ಹೂಡಿಕೆಯಾಗಿದೆ. ಸಹಶೀಲರಾದರೆ ನಾವು ಯಶಸ್ವಿಯಾಗುತ್ತೇವೆ. ಅದರಿಂದ ಒಳ್ಳೆಯ ಫಲಿತಾಂಶ ಬರಲು ಕೂಡ ಸಾಧ್ಯವಾಗುತ್ತದೆ. ಒಳ್ಳೆಯ ಚಿಂತನೆಯಿಂದ ಒಳ್ಳೆಯ ಗುಣ ನಮ್ಮಲ್ಲಿ ಬೆಳವಣಿಗೆ ಯಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಪೂರ್ಣಪ್ರಜ್ಞ ಕಾಲೇಜು ಅಧ್ಯಯನ ಮತ್ತು ಅಭಿವೃದ್ಧಿ ಕೇಂದ್ರದ ಸಂಯೋಜಕ ಡಾ.ಕೃಷ್ಣ ಕೊತ್ತಾಯ ದಿಕ್ಸೂಚಿ ಭಾಷಣ ಮಾಡಿದರು. ಅದಮಾರು ಮಠ ಶಿಕ್ಷಣ ಟ್ರಸ್ಟ್ನ ಕಾರ್ಯದರ್ಶಿ ಡಾ.ಚಂದ್ರಶೇಖರ್, ನಿವೃತ್ತ ಪ್ರಾಂಶುಪಾಲ ಡಾ.ಬಿ.ಜಗದೀಶ್ ಶೆಟ್ಟಿ, ಮಂಗಳೂರು ವಿವಿ ವಾಣಿಜ್ಯ ಉಪನ್ಯಾಸಕರ ಸಂಘದ ಕಾರ್ಯದರ್ಶಿ ಪ್ರೊ.ಲೂವಿಸ್ ಮನೋಜ್, ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿ ಜಯಲಕ್ಷ್ಮೀ ಉಪಸ್ಥಿತರಿದ್ದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಎ.ಪಿ.ಭಟ್ ವಹಿಸಿದ್ದರು. ಕಾಲೇಜಿನ ಕಾಮರ್ಸ್ ಮತ್ತು ಮೆನೇಜ್ಮೆಂಟ್ ವಿಭಾಗದ ಮುಖ್ಯಸ್ಥ ಪ್ರೊ. ಶಿವಕುಮಾರ್ ಪಿ.ಟಿ. ಸ್ವಾಗತಿಸಿದರು. ಸಂದೀಪ್ ಶೆಟ್ಟಿ ವಂದಿಸಿದರು. ಜ್ಯೋತಿ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.