ವಕ್ಫ್ ಆಸ್ತಿ ಕಬಳಿಕೆ ವರದಿ ಮಂಡಿಸಲು ಕೋಟ ಆಗ್ರಹ
ಮಂಗಳೂರು, ಎ.10: ಅನ್ವರ್ ಮಾಣಿಪ್ಪಾಡಿ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾಗಿದ್ದ ಸಂದರ್ಭ ವಕ್ಫ್ ಆಸ್ತಿಗಳ ಕಬಳಿಕೆ ಕುರಿತಾಗಿ ಒಂದು ವರದಿ ನೀಡಿದ್ದರು. ಅದರಲ್ಲಿ ಕೋಟ್ಯಂತರ ರೂ. ಅವ್ಯವಹಾರ ನಡೆದಿತ್ತು. ಆ ವರದಿಯನ್ನು ಸದನಕ್ಕೆ ಮಂಡಿಸಬೇಕು ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಆಗ್ರಹಿಸಿದರು.
ನಗರದ ಬಿಜೆಪಿ ಚುನಾವಣಾ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 2.5 ಲಕ್ಷ ಕೋಟಿ ವೌಲ್ಯದ 27 ಸಾವಿರ ಎಕರೆ ಜಮೀನು ಕಬಳಿಕೆ ಆಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಅದನ್ನು ಸದನದ ಮುಂದಿಡಲು ತಡೆ ಒಡ್ಡುತ್ತಿರುವವರು ಯಾರು ಎಂದು ಪ್ರಶ್ನಿಸಿದರು.
ರಾಷ್ಟ್ರಕ್ಕಾಗಿ ಕಠಿಣ ನಿರ್ಧಾರ: ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ 370ನೇ ವಿಧಿಯನ್ನು ರದ್ದು ಪಡಿಸುವ ಸ್ಪಷ್ಟ ಭರವಸೆ ನೀಡಿದೆ. ಸೌಹಾರ್ದದಿಂದ ರಾಮಮಂದಿರ ನಿರ್ಮಾಣದ ಆಶ್ವಾಸನೆ ನೀಡಿದೆ. ನದಿ ಜೋಡಣೆಯ ಬಗ್ಗೆ ಬಿಜೆಪಿ ಸ್ಪಷ್ಟ ಕಲ್ಪನೆ ಹೊಂದಿದೆ. ರಾಷ್ಟ್ರಕ್ಕಾಗಿ ಕೆಲವೊಂದು ಕಠಿಣ ನಿರ್ಧಾರಗಳು ಅಗತ್ಯ ಎಂಬುದನ್ನು ಪಕ್ಷ ಮನಗಂಡಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಲೋಕಸಭಾ ಕ್ಷೇತ್ರದ ಎಲ್ಲ ಎಂಟು ವಿಧಾನಸಭಾ ಕ್ಷೇತ್ರಗಳು ಮತ್ತು 1,861 ಮತಗಟ್ಟೆಗಳ ಕಾರ್ಯಕರ್ತರ ಅನುಭವ ಮತ್ತು ಅವರು ನೀಡುವ ಮಾಹಿತಿಯಂತೆ ದೇಶ ಮೊದಲು ಎನ್ನುವವರ ಪರವಾಗಿ ಮತದಾರರಿದ್ದಾರೆ. ಅಭ್ಯರ್ಥಿ ನಳಿನ್ಕುಮಾರ್ ಅವರನ್ನು ಗೆಲ್ಲಿಸುವ ಮೂಲಕ ಪ್ರಧಾನಿ ಮೋದಿಯನ್ನು ಬೆಂಬಲಿಸಲು ಮತದಾರರು ಉತ್ಸುಕರಾಗಿದ್ದಾರೆ ಎಂದು ಅವರು ಹೇಳಿದರು.
ಅಭಿವೃದ್ಧಿ ವಿಜಯಕ್ಕೆ ಸಹಕಾರಿ: ಕೇಂದ್ರದಲ್ಲಿ ಎನ್ಡಿಎ ಸರಕಾರ ಕೈಗೊಂಡಿರುವ ಜನ ಕಲ್ಯಾಣ ಕಾರ್ಯಕ್ರಮಗಳು, ನರೇಂದ್ರ ಮೋದಿಯವರ ಕೆಲವೊಂದು ದಿಟ್ಟ ನಿರ್ಧಾರಗಳು ಹಾಗೂ 10 ವರ್ಷಗಳಲ್ಲಿ ನಳಿನ್ಕುಮಾರ್ ಕಟೀಲು ಅವರ ವ್ಯಾಪಕ ಜನಸಂಪರ್ಕ, ಪಕ್ಷದ ಸಂಘಟನೆಯಲ್ಲಿ ತೊಡಗಿಕೊಂಡಿರುವ ರೀತಿ ಮತ್ತು ಅಪಾರ ಅಭಿವೃದ್ಧಿ ಅದ್ಭುತ ವಿಜಯಕ್ಕೆ ಸಹಕಾರಿಯಾಗಲಿದೆ ಎಂದು ಶ್ರೀನಿವಾಸ ಪೂಜಾರಿ ನುಡಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ನಿತಿನ್ಕುಮಾರ್, ವಿಕಾಸ್ ಪುತ್ತೂರು ಮತ್ತು ಕೃಷ್ಣಪ್ಪ ಪೂಜಾರಿ ಉಪಸ್ಥಿತರಿದ್ದರು.
‘ಕೇಂದ್ರದ ಯೋಜನೆಗೆ ಮೈತ್ರಿ ಸರಕಾರ ಅಡ್ಡಗಾಲು’
ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಕೇಂದ್ರ ಸರಕಾರದ ಜನಪರ ಯೋಜನೆಗಳನ್ನು ಜಾರಿ ಮಾಡಲು ಆಸಕ್ತಿ ಹೊಂದಿಲ್ಲ. ಸರಕಾರ ಅಸಹಕಾರ ನೀಡುವ ಮೂಲಕ ಕೇಂದ್ರದ ಯೋಜನೆಗಳು ಜನತೆಯ ಬಳಿಗೆ ತಲುಪದಂತೆ ಅಡ್ಡಗಾಲು ಹಾಕುತ್ತಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದರು.
ಕಿಸಾನ್ ಸಮ್ಮಾನ್ಗೆ ರಾಜ್ಯದ 76 ಲಕ್ಷ ರೈತರು ಅರ್ಹರಿದ್ದರೂ ಕೇವಲ 16 ಲಕ್ಷ ರೈತರ ಪಟ್ಟಿ ಮಾಡಿದೆ. ಆಯುಷ್ಮಾನ್ ಭಾರತ ಯೋಜನೆಯಡಿ ತುರ್ತು ಸಂದರ್ಭದಲ್ಲೂ ಸರಕಾರಿ ಆಸ್ಪತ್ರೆಗಳಿಗೆ ತೆರಳಿ ಹೆಸರು ನೋಂದಾಯಿಸಬೇಕು ಎಂಬ ನಿಯಮ ರೂಪಿಸಿ ಆರೋಗ್ಯ ಸೌಲಭ್ಯದಿಂದ ಬಡವರನ್ನು ವಂಚಿಸುತ್ತಿದೆ ಎಂದರು.