ನಳಿನ್ ಕುಮಾರ್ ಕಟೀಲು ಗೆದ್ದರೆ ಮೋದಿಗೆ ಗೆಲುವು: ಮಾಳವಿಕಾ
ಮಂಗಳೂರು, ಎ.11: ಕಳೆದ ಐದು ವರ್ಷಗಳ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಾಡಿರುವ ಸಾಧನೆಗಳನ್ನು ಹೇಳಿಕೊಂಡು ಅವರ ಹೆಸರಿನಲ್ಲಿ ಮತ ಕೇಳಲು ನಮಗೆ ಯಾವುದೇ ಸಂಕೋಚ ಇಲ್ಲ. ಹಾಗಾಗಿ ದಕ್ಷಿಣ ಕನ್ನಡ ಕ್ಷೇತ್ರದ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಪರವಾಗಿ ಮೋದಿ ಹೆಸರಿನಲ್ಲಿ ಜನರ ಬಳಿಗೆ ಹೋಗುತ್ತಿದ್ದೇವೆ. ನಳಿನ್ ಕುಮಾರ್ ಗೆದ್ದರೆನೇ ಮೋದಿಗೆ ಗೆಲುವು ಎಂದು ಬಿಜೆಪಿ ಪ್ರಚಾರಕಿ ಮಾಳವಿಕಾ ಅವಿನಾಶ್ ಹೇಳಿದ್ದಾರೆ.
ಕ್ಷೇತ್ರದ ಲೋಕಸಭಾ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಪರ ಪ್ರಚಾರಕ್ಕೆ ಜಿಲ್ಲೆಗೆ ಆಗಮಿಸಿರುವ ಅವರು ಪಕ್ಷದ ಚುನಾವಣಾ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಈ ಪ್ರತಿಕ್ರಿಯೆ ನೀಡಿದರು.
ಕಳೆದ ಐದು ವರ್ಷಗಳಲ್ಲಿ ಪ್ರಧಾನಿ ಅವರ ಸಾಧನೆಯ ಜತೆಗೆ ನಾವು ಸ್ಥಳೀಯ ಅಭ್ಯರ್ಥಿಗಳ ರಿಪೋರ್ಟ್ ಕಾರ್ಡ್ಗಳನ್ನು ತಂದಿದ್ದೇವೆ. ನಳಿನ್ ಕುಮಾರ್ ಅವರ ಸಾಧನೆಯ ರಿಪೋರ್ಟ್ ಕಾರ್ಡ್ ಕೂಡಾ ಇದೆ ಎಂದು ಅವರು ಹೇಳಿದರು.
ಐದು ವರ್ಷಗಳ ಹಿಂದೆ ಲೋಕಸಭಾ ಚುನಾವಣೆಯ ಸಂದರ್ಭ ನರೇಂದ್ರ ಮೋದಿ ಜನಸಾಮಾನ್ಯರ ಪಾಲಿಗೆ ಒಂದು ಹೆಸರು ಮಾತ್ರವಾಗಿದ್ದರು. ಇಂದು ಅವರು ಮಂತ್ರವಾಗಿದ್ದಾರೆ. ಭ್ರಷ್ಟಾಚಾರ ನಿರ್ಮೂಲನೆ, ಆಂತರಿಕ ಭದ್ರತೆ, ರೈತರು ಕಾರ್ಮಿಕರಿಗೆ ಪೂರಕವಾದ ಹಲವಾರು ಯೋಜನೆಗಳನ್ನು ಜಾರಿಗೆ ತಂದು ನರೇಂದ್ರ ಮೋದಿಯವರು ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ದಿದ್ದಾರೆ ಎಂದು ಮಾಳವಿಕಾ ಹೇಳಿದರು.
ಕಾಂಗ್ರೆಸ್ ಪಕ್ಷದ ಘೋಷಣಾ ಪತ್ರದಲ್ಲಿ ಈ ಬಾರಿ ನ್ಯಾಯ್ ಎಂಬ ಯೋಜನೆಯನ್ನು ಘೋಷಿಸಿದ್ದಾರೆ. ಹಾಗಾದರೆ ಇಷ್ಟು ವರ್ಷಗಳಿಂದ ಅವರಿಂದ ಅನ್ಯಾಯವೇ ಆಗಿರುವುದು ಎಂಬುದನ್ನು ಅವರು ಒಪ್ಪಿಕೊಳ್ಳುತ್ತಿದ್ದಾರೆಯೇ ಎಂಬ ಬಗ್ಗೆ ಅವರು ಉತ್ತರ ನೀಡಬೇಕು. ಬಿಜೆಪಿಗೆ ದೇಶ ಮೊದಲಾದರೆ ಕಾಂಗ್ರೆಸ್ಗೆ ಮತ ಬ್ಯಾಂಕೇ ಮೊದಲು ಎಂದು ಮಾಳವಿಕಾ ಮೂದಲಿಸಿದರು.
ರಾಜ್ಯದಲ್ಲಿ ಈಗಿರುವುದು ಮಹಾ ಮಿಲಾವಟ್ ಸರಕಾರ ಎಂದು ಕಟಕಿಯಾಡಿದ ಅವರು, ಮುಖ್ಯಮಂತ್ರಿ ಕುಮಾರ ಸ್ವಾಮಿಯವರು ಉಳಾಯಿಬೆಟ್ಟು ಪ್ರಕರಣವೊಂದಕ್ಕೆ ಸಂಬಂಧಿಸಿ ಆರೋಪಿಗಳನ್ನು ಖುಲಾಸಿಗೊಳಿಸಿ, ಹಿಂದೂಗಳ ಮೇಲೆ ಮಲತಾಯಿ ಧೋರಣೆ ಅನುಸರಿಸಿದ್ದಾರೆ. ಈ ಬಗ್ಗೆ ಅವರು ಉತ್ತರಿಸಬೇಕು. ಬಾಲಾಕೋಟ್ ದಾಳಿ ಸಂದರ್ಭ ಬಿಜೆಪಿ ಸಂಭ್ರಮಾಚರಣೆ ಮಾಡಿತ್ತು. ಆದರೆ ಸಂಭ್ರಮಾಚರಣೆಯಿಂದ ಕೆಲವರಿಗೆ ನೋವಾಗುತ್ತದೆ ಎಂದು ಹೇಳಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ದೇಶಭಕ್ತರಿಗೆ ಹಾಡಿದ ಅವಮಾನ ಎಂದು ಹೇಳಿದರು.
ಬಿಜೆಪಿಯು ಕರ್ನಾಟಕದಲ್ಲಿ 36 ಜನ ತಾರಾ ಪ್ರಚಾರಕರನ್ನು ನೇಮಕ ಮಾಡಿದ್ದು, ಅವರಲ್ಲಿ ತಾನೂ ಒಬ್ಬಾಕೆ. ಈಗಾಗಲೇ 12 ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದು, ಕೆಲ ದಿನಗಳ ಹಿಂದೆ ಸುರತ್ಕಲ್,ಬಂಟ್ವಾಳ ಸೇರಿದಂತೆ ಕೆಲವು ಕಡೆಗಳಲ್ಲಿ ಪ್ರಬುದ್ಧರ ಸಮಾವೇಶಗಳಲ್ಲಿ ಭಾಗವಹಿಸಿದ್ದೇನೆ. ಇದೀಗ ಸಂಪೂರ್ಣ ಪ್ರಚಾರ ಕಾರ್ಯದಲ್ಲಿ ಭಾಗವಹಿಸುತ್ತಿರುವುದಾಗಿ ಅವರು ಹೇಳಿದರು.
ಗೋಷ್ಠಿಯಲ್ಲಿ ಬಿಜೆಪಿ ನಾಯಕರಾದ ಮೋನಪ್ಪ ಭಂಡಾರಿ, ಪೂಜಾ ಪೈ, ಪ್ರಭಾ ಮಾಲಿನಿ, ಧನಲಕ್ಷ್ಮಿ ಗಟ್ಟಿ ಉಪಸ್ಥಿತರಿದ್ದರು.