ಬಿಜೆಪಿಯಿಂದ ಜನರ ಭಾವನೆಯೊಂದಿಗೆ ಚೆಲ್ಲಾಟವಾಡುವ ಪ್ರಣಾಳಿಕೆ: ಸಚಿವ ಯು.ಟಿ.ಖಾದರ್
ಮಂಗಳೂರು, ಎ.11: ಪ್ರತೀ ಚುನಾವಣೆಯ ಸಂದರ್ಭ ಬಿಜೆಪಿ ಜನರ ಭಾವನೆಯೊಂದಿಗೆ ಚೆಲ್ಲಾಟವಾಡುವ ಪ್ರಣಾಳಿಕೆಯನ್ನು ಬಿಡುಗಡೆ ಮಾಡುತ್ತಿದೆ. ಈ ಬಾರಿಯೂ ಕಳೆದ ಪ್ರಣಾಳಿಕೆಯ ‘ಕಟ್ ಆ್ಯಂಡ್ ಪೇಸ್ಟ್’ ಮಾಡಿ ಬಿಡುಗಡೆಗೊಳಿಸಿ ಜನರನ್ನು ವಂಚಿಸಲು ಮುಂದಾಗಿದೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದರು.
ದ.ಕ.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಅವರು, ಭಾವನಾತ್ಮಕ ವಿಚಾರದಿಂದ ಜಿಲ್ಲೆಯ ಅಭಿವೃದ್ಧಿ ಆಗುವುದಿಲ್ಲ. ಬಿಜೆಪಿಯು ಜನರ ಭಾವನೆಯೊಂದಿಗೆ ಚೆಲ್ಲಾಟವಾಡುತ್ತಿದೆ. ಹಾಗಾಗಿ ಬಿಜೆಪಿ ಅಭ್ಯರ್ಥಿ ನಳಿನ್ಗೆ ಪ್ರಜ್ಞಾವಂತ ಮತದಾರರು ಮತ ಚಲಾಯಿಸಬಾರದು. ಬದಲಾಗಿ ಆತ್ಮಾವಲೋಕನ ಮಾಡಿ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈಗೆ ಮತ ಚಲಾಯಿಸಬೇಕು. ಆ ಮೂಲಕ ಜಿಲ್ಲೆಯ ಜ್ವಲಂತ ಸಮಸ್ಯೆಯ ಬಗ್ಗೆ ಪಾರ್ಲಿಮೆಂಟ್ ನಲ್ಲಿ ಧ್ವನಿ ಎತ್ತುವ ಸಂಸದನ ಆಯ್ಕೆ ಮಾಡಬೇಕು ಎಂದರು.
ಕಾಂಗ್ರೆಸ್ ಜನರ ಬದುಕಿಗೆ ಬೇಕಾದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಿದರೆ ಪ್ರಣಾಳಿಕೆಯಲ್ಲಿ ನೀಡಿದ ಎಲ್ಲಾ ಆಶ್ವಾಸನೆಯನ್ನು ಈಡೇರಿಸಲಾಗುವುದು ಎಂದ ಖಾದರ್, ಪ್ರಧಾನಿ ನರೇಂದ್ರ ಮೋದಿ ಎಲ್ಲಾ ರಂಗದಲ್ಲೂ ವಿಫಲರಾಗಿದ್ದಾರೆ. ಅವರಿಂದಾಗಿ ವಿದೇಶದಲ್ಲಿ ಭಾರತ ತಲೆತಗ್ಗಿಸುವಂತಾಗಿದೆ ಎಂದರು.
ದ.ಕ.ಜಿಲ್ಲೆಯಲ್ಲಿ ಬಿಜೆಪಿಗರು ಅಭ್ಯರ್ಥಿ ನಳಿನ್ಗೆ ಅಲ್ಲ, ಪ್ರಧಾನಿ ನರೇಂದ್ರ ಮೋದಿಗಾಗಿ ಮತ ಚಲಾಯಿಸಿ ಎನ್ನುತ್ತಿದ್ದಾರೆ. ಹಾಗಿದ್ದರೆ ನಾಳೆ ದ.ಕ.ಜಿಲ್ಲೆಯ ಅಭಿವೃದ್ಧಿಯನ್ನು ಮೋದಿ ಬಂದು ಮಾಡುತ್ತಾರಾ? ಸಮಸ್ಯೆಗಳ ಪರಿಹಾರಕ್ಕಾಗಿ ಸಂಸದರ ಬಳಿ ಜನರು ಹೋಗಬೇಕೋ ಅಥವಾ ಮೋದಿಯ ಬಳಿ ಹೋಗಬೇಕೋ ಎಂದು ಖಾದರ್ ಪ್ರಶ್ನಿಸಿದರು.
ಹಾಲಿ ಸಂಸದ, ಬಿಜೆಪಿ ಅಭ್ಯರ್ಥಿ ನಳಿನ್ರಿಂದ ದ.ಕ.ಜಿಲ್ಲೆಗೆ ಭಾರೀ ಅನ್ಯಾಯವಾಗಿದೆ. ವಿಜಯಾ ಬ್ಯಾಂಕನ್ನು ಅವರಿಂದ ಉಳಿಸಿಕೊಳ್ಳಲಾಗಲಿಲ್ಲ, ಮಂಗಳೂರು ವಿಮಾನ ನಿಲ್ದಾಣದ ನಿರ್ವಹಣೆಯ ಗುತ್ತಿಗೆಯನ್ನು ಉದ್ಯಮಿಯ ಕೈಗೆ ಕೊಡುವುದರಿಂದ ಅವರಿಗೆ ತಪ್ಪಿಸಿಕೊಳ್ಳಲಾಗಲಿಲ್ಲ. ಹೀಗಿರುವಾಗ ನಳಿನ್ಗೆ ಯಾಕೆ ಮತ ನೀಡಬೇಕು? ಎಂದು ಪ್ರಶ್ನಿಸಿದರಲ್ಲದೆ, ಕಾಂಗ್ರೆಸ್ನ ಸಮರ್ಥ ಅಭ್ಯರ್ಥಿ ಮಿಥುನ್ ರೈಗೆ ಮತ ನೀಡಿ ಗೆಲ್ಲಿಸಿ ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್, ಎಸ್ಸಿಡಿಸಿಸಿ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್, ಮಾಜಿ ಸಚಿವ ಅಭಯಚಂದ್ರ ಜೈನ್, ಪಕ್ಷದ ಮುಖಂಡರಾದ ಇಬ್ರಾಹೀಂ ಕೋಡಿಜಾಲ್, ಕಳ್ಳಿಗೆ ತಾರನಾಥ ಶೆಟ್ಟಿ, ಸಂತೋಷ್ ಶೆಟ್ಟಿ, ಬಿ.ಎ.ಮುಹಮ್ಮದ್ ಹನೀಫ್, ಸದಾಶಿವ ಉಳ್ಳಾಲ್ ಉಪಸ್ಥಿತರಿದ್ದರು.