ಮತದಾನ ನಿಜವಾದ ರಾಷ್ಟ್ರ ಭಕ್ತಿ: ಬ್ರಿಗೇಡಿಯರ್ ಐಎನ್ಆರ್ ರೈ
ಮಂಗಳೂರು, ಎ.11: ಮತಗಟ್ಟೆಗೆ ತೆರಳಿ ಮತದಾನ ಮಾಡುವುದೇ ನಿಜವಾದ ರಾಷ್ಟ್ರ ಭಕ್ತಿ ಎಂದು ಬ್ರಿಗೇಡಿಯರ್ ಐ.ಎನ್.ರೈ ಅಭಿಪ್ರಾಯ ವ್ಯಕ್ತಪಡಿಸಿದರು.
ದ.ಕನ್ನಡ ಜಿಲ್ಲಾ ಸ್ವೀಪ್ ಸಮಿತಿ, ದ.ಕ.ಜಿಲ್ಲಾ ಕಸಾಪ, ಆಕಾಶವಾಣಿ ಮಂಗಳೂರು, ರೋಟರ್ಯಾಕ್ಟ್ ಮಂಗಳೂರು ಸಿಟಿಯ ಸಹಯೋಗದಲ್ಲಿ ಕದ್ರಿ ಉದ್ಯಾನವನದಲ್ಲಿ ಗುರುವಾರ ನಡೆದ ಮತದಾನದೆಡೆಗೆ ವಾಕ್ ವಿತ್ ಟಾಕ್ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಗಡಿಯಲ್ಲಿ ಪ್ರಾಣಾರ್ಪಣೆ ಮಾಡುವುದು ಮಾತ್ರ ರಾಷ್ಟ್ರ ಭಕ್ತಿ ಅಲ್ಲ. ಮತದಾನದ ಮೂಲಕ ಬಲಿಷ್ಠ ಸರ್ಕಾರ ರಚಿಸಿ ದೇಶದ ರಕ್ಷಣೆ, ಭದ್ರತೆ, ಅಭಿವೃದ್ಧಿಗೆ ಕಾರಣರಾಗುವುದು ಕೂಡ ರಾಷ್ಟ್ರ ಭಕ್ತಿಯಾಗಿದೆ. ಎಲ್ಲರೂ ಮತದಾನ ಮಾಡುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆ ಮಾದರಿಯಾಗಬೇಕು ಎಂದರು.
ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ನಟ ದೇವದಾಸ್ ಕಾಪಿಕಾಡ್, ಗೃಹರಕ್ಷಕದಳದ ಕಮಾಂಡೆಂಟ್ ಡಾ.ಮುರಲೀ ಮೋಹನ್ ಚೂಂತಾರು, ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಡಾ.ಸೆಲ್ವಮಣಿ ಆರ್., ಆಕಾಶವಾಣಿ ಮುಖ್ಯಸ್ಥೆ ಉಷಾಲತಾ ಸರಪಾಡಿ, ಲೆಕ್ಕ ಪರಿಶೋಧಕ ಶಾಂತರಾಮ ಶೆಟ್ಟಿ, ರೋಟರ್ಯಾಕ್ಟ್ ಅಧ್ಯಕ್ಷ ಗಣೇಶ್, ಕಲಾವಿದೆ ಶಬರಿ ಗಾಣಿಗ, ಕ್ರೀಡಾ ಸಾಧಕ ಪ್ರದೀಪ್ ಆಚಾರ್ಯ, ನಿವೃತ್ತ ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮ, ರೇಡಿಯೋ ಕೇಳುಗರ ಸಂಘದ ರಾಮರಾವ್ ಮೊದಲಾದವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮವನ್ನು ಮಂಗಳೂರು ಆಕಾಶವಾಣಿ ಕೇಂದ್ರವು ನೇರಪ್ರಸಾರ ಮಾಡಿತ್ತು. ಕಾರ್ಯಕ್ರಮ ಸಂಯೋಜಕ ಡಾ.ಸದಾನಂದ ಪೆರ್ಲ ನಿರೂಪಿಸಿದರು.