ಉಡುಪಿ: ಚುನಾವಣಾ ಕಾರ್ಯದಲ್ಲಿ ಹೀಗೊಬ್ಬ ಶ್ರಮಜೀವಿ
ಉಡುಪಿ, ಎ.11: ಚುನಾವಣಾ ಸಂದರ್ಭದಲ್ಲಿ ಚುನಾವಣೆ ಡ್ಯೂಟಿ ಬಂದಿದೆ ಎಂದರೆ ಸಾಕು ನೌಕರರಲ್ಲಿ ನಡುಕ ಪ್ರಾರಂಭವಾಗುತ್ತದೆ. ನೇಮಕ ಆದೇಶ ಬಂದ ತಕ್ಷಣ ವಿವಿಧ ಕಾರಣಗಳನ್ನು ಮುಂದಿಟ್ಟುಕೊಂಡು ವೈದ್ಯರ ಪ್ರಮಾಣಪತ್ರ ಪಡೆದುಕೊಂಡು ಬಂದು, ಚುನಾವಣಾ ಕರ್ತವ್ಯಕ್ಕೆ ನೇಮಿಸಬಾರದೆಂದು ಕೋರಿ ಅಧಿಕಾರಿಗಳ ಮುಂದೆ ಕ್ಯೂ ನಿಲ್ಲುವವರ ಸಂಖ್ಯೆ ಸಾಕಷ್ಟು ದೊಡ್ಡದಿದೆ.
ಆದರೆ ಇಲ್ಲೊಬ್ಬ ಸಿಬ್ಬಂದಿಯಿದ್ದಾರೆ, ಚುನಾವಣೆ ಬಂತೆಂದರೆ ಇವರಿಗೆ ಬಿಡುವಿಲ್ಲದ ಕೆಲಸ. ಯಾವುದೇ ಬೇಸರವಿಲ್ಲದೆ, ಚುನಾವಣೆಗೆ ಸಂಬಂಧಿಸಿದ ಯಾವುದೇ ಕೆಲಸವನ್ನು ಅತ್ಯಂತ ಶ್ರದ್ಧೆಯಿಂದ ನಿರ್ವಹಿಸುತ್ತಾರೆ. ಇವರೇ ಉಡುಪಿ ಜಿಲ್ಲಾಧಿಕಾರಿ ಕಚೇರಿಯ ಚುನಾವಣಾ ಶಾಖೆಯ 'ಡಿ ಗ್ರೂಪ್' ಸಿಬ್ಬಂದಿ ವಿಶ್ವನಾಥ ಶೆಟ್ಟಿ.
ಚುನಾವಣಾ ಕಾರ್ಯಕ್ಕೆ ನಿಯೋಜನೆಯಾಗುವ ಸಿಬ್ಬಂದಿ ತನ್ನ ಇಡೀ ಸೇವಾವಧಿಯಲ್ಲಿ ಸುಮಾರು 10 ರಿಂದ 15 ಚುನಾವಣೆಗಳಲ್ಲಿ ಕರ್ತವ್ಯ ನಿರ್ವಹಿಸಬಹುದು. ಅದೂ ಪ್ರತಿ ಚುನಾವಣೆಗೆ ಕೇವಲ 2 ದಿನ. ಆದರೆ ವಿಶ್ವನಾಥ್ ಶೆಟ್ಟಿ ಸೇವೆಗೆ ಸೇರಿ ಪ್ರಸ್ತುತ 18 ವರ್ಷಗಳಾಗಿದ್ದು, ಇದುವರೆಗೆ ಸುಮಾರು 80ಕ್ಕೂ ಅಧಿಕ ಚುನಾವಣೆಗಳಲ್ಲಿ ಚುನಾವಣಾ ಪ್ರಕ್ರಿಯೆ ಆರಂಭವಾದ ದಿನದಿಂದ, ಮತದಾನ ಮುಗಿದು, ಫಲಿತಾಂಶ ಘೋಷಣೆಯಾಗಿ ಚುನಾವಣಾ ಪ್ರಕಿಯೆ ಮುಗಿಯುವವರೆಗೂ ಕರ್ತವ್ಯ ನಿರ್ವಹಿಸುತ್ತಾರೆ.
ಚುನಾವಣಾ ಸಂದರ್ಭದಲ್ಲಿ ಸದಾ ಬ್ಯುಸಿಯಾಗಿ, ಸಮಯದ ಮಿತಿಯಿಲ್ಲದೇ, ಕೆಲಸದ ಒತ್ತಡದಲ್ಲಿ ಕಾರ್ಯ ನಿರ್ವಹಿಸುವ ಇವರು, ಯಾವುದೇ ಕೆಲಸ ಹೇಳಿದರೂ ಬೇಸರಗೊಳ್ಳದೆ ತಮಗೆ ನೀಡಿದ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ.
ಚುನಾವಣಾ ಶಾಖೆಯಲ್ಲಿ ವಿವಿಧ ಪತ್ರಗಳನ್ನು ಸಂಬಂಧಪಟ್ಟವರಿಗೆ ತಲುಪಿಸುವುದು, ಜೆರಾಕ್ಸ್ ಕಾರ್ಯ, ಚುನಾವಣೆಗೆ ಸಂಬಂಧಿಸಿದ ಕಡತಗಳ ಜೋಡಣೆ, ಚುನಾವಣಾ ಕಾರ್ಯಕ್ಕೆ ಬರುವ ಸಾಮಗ್ರಿಗಳ ಶೇಖರಣೆ, ವಿತರಣೆ, ಮತ ಎಣಿಕಾ ಕೇಂದ್ರದಲ್ಲಿನ ಅಗತ್ಯ ಕಾರ್ಯಗಳನ್ನು ಇವರು ನಿರ್ವಹಿಸುತ್ತಾರೆ.
2001ರಲ್ಲಿ ಕೇವಲ 900 ರೂ. ವೇತನಕ್ಕೆ ಗ್ರಾಮ ಸಹಾಯಕರಾಗಿ ಸೇರಿದ ಇವರು, ಇದುವರೆಗೂ ಜಿಲ್ಲೆಯ ಗ್ರಾಪಂ, ತಾಪಂ, ನಗರಸಭೆ, ಪುರಸಭೆ, ವಿಧಾನಸಭೆ, ವಿಧಾನ ಪರಿಷತ್, ಎಪಿಎಂಸಿ ಚುನಾವಣೆ, ಲೋಕಸಭಾ ಚುನಾವಣೆಗಳಲ್ಲಿ ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ.
ಮತದಾನ ಪವಿತ್ರ ಕರ್ತವ್ಯ, ಮತದಾನ ಪ್ರಜಾಪ್ರಭುತ್ವದ ಯಶಸ್ಸಿಗೆ ಮೂಲ ಎಂದು ಹೇಳುವುದನ್ನು ಕೇಳಿರುವ ಇವರು, ನಾವು ಚುನಾವಣೆಗಾಗಿ ಎಷ್ಟೆಲ್ಲಾ ಕಷ್ಟ ಪಡುತ್ತೇವೆ. ಇದರ ಉದ್ದೇಶ ಒಂದೇ ಯಾವುದೇ ಹಂತದಲ್ಲೂ ಚುನಾವಣಾ ಕಾರ್ಯದಲ್ಲಿ ತೊಂದರೆಯಾಗಬಾರದು ಎಂಬುದು. ಪ್ರತಿಯೊ ಬ್ಬರು ಮತದಾನ ಮಾಡಬೇಕು ಎನ್ನುವ ಇವರು, ಸುಗಮ ಚುನಾವಣೆಗೆ ನನ್ನಿಂದ ಕೈಲಾದಷ್ಟು ಸೇವೆ ಸಲ್ಲಿಸುವ ಭಾಗ್ಯ ದೊರೆತಿರುವುದೇ ನನಗೆ ಹೆಮ್ಮ ಎನ್ನುತ್ತಾರೆ.
ಇವರು ಈ ಹಿಂದೆ ಚುನಾವಣಾ ಸಾಮಗ್ರಿಗಳನ್ನು ತರಲು ಬೆಂಗಳೂರಿಗೆ ತೆರಳಬೇಕಾಗಿತ್ತು. ಆದರೆ ಈಗ ಇಲ್ಲಿಗೆ ನೇರವಾಗಿ ಬರುತ್ತಿದೆ. ಹಿಂದೆ ಮತಪತ್ರ ಎಣಿಕೆ ಸಮಯದಲ್ಲಿ ಬೆಳಗಿನ ಜಾವದವರೆಗೂ ಕರ್ತವ್ಯ ನಿರ್ವಹಿಸಿದ್ದೇನೆ. ಈಗ ಇವಿಎಂ ಬಂದ ಕಾರಣ ಮತದಾನ ಸುಲಭವಾಗಿದೆ ಎಂದು ಹೇಳುವ ವಿಶ್ವನಾಥ ಶೆಟ್ಟಿ, ತನ್ನ ಬಿಡುವಿಲ್ಲದ ಕಾರ್ಯದಲ್ಲಿಯೂ ಇಷ್ಟು ಮಾಹಿತಿ ನೀಡಿ, ಅಧಿಕಾರಿಗಳು ಕರೆಯುತ್ತಿದ್ದಾರೆ ಸರ್.... ಎನ್ನುತ್ತಾ ಮತ್ತೆ ತನ್ನ ಕಾರ್ಯದಲ್ಲಿ ಮಗ್ನರಾದರು.
(ವಿಶ್ವನಾಥ ಶೆಟ್ಟಿ ಸಂಪರ್ಕಕ್ಕೆ ಮೊ.ಸಂ.9686915459)