‘ಚುನಾವಣಾ ಸಿಬ್ಬಂದಿ ಮತದಾನದಿಂದ ವಂಚಿತರಾಗಬಾರದು’
ಉಡುಪಿ, ಎ.11: ಎ.18ರಂದು ನಡೆಯುವ ಉಡುಪಿ -ಚಿಕ್ಕಮಗಳೂರು ಲೋಕಸಭಾ ಚುನಾವಣೆಯ ಕರ್ತವ್ಯಕ್ಕೆ ನಿಯೋಜಿತರಾಗಿ ರುವ ಸಿಬ್ಬಂದಿಗಳು ತಮ್ಮ ಮತದಾನದ ಹಕ್ಕಿನಿಂದ ವಂಚಿತರಾಗದಂತೆ ಅವರಿಗೆ ಅಂಚೆಮತ ಪತ್ರ ಮತ್ತು ಇಡಿಸಿ ವಿತರಿಸುವಲ್ಲಿ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸುವಂತೆ ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚಿಸಿದ್ದಾರೆ.
ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಉಡುಪಿ ಮತ್ತು ಚಿಕ್ಕಮಗಳೂರು ಕ್ಷೇತ್ರದ ವಿಧಾನಸಭಾ ಕ್ಷೇತ್ರವಾರು ನಿಯೋಜಿಸಿರುವ ಅಂಚೆ ಮತಪತ್ರ ನಿರ್ವಹಣೆ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಚುನಾವಣೆಯಲ್ಲಿ ಪ್ರತಿ ಮತವೂ ಅಮೂಲ್ಯವಾಗಿದೆ. ಅದರಲ್ಲೂ ಚುನಾವಣಾ ಕರ್ತವ್ಯದಲ್ಲಿರುವ ಸರಕಾರಿ ನೌಕರರೇ ಮತದಾನದಿಂದ ವಂಚಿತ ರಾಗುವುದು ಮತ್ತು ಅವರ ಮತಗಳೇ ಸರಿಯಾಗಿ ಚಲಾವಣೆಯಾಗಿಲ್ಲವಾದರೆ ಲೋಪವಾಗುತ್ತದೆ. ಆದ್ದರಿಂದ ಉಡುಪಿ ಚಿಕ್ಕಮಗಳೂರು ಲೋಕಸಭಾ ವ್ಯಾಪ್ತಿ ಯಲ್ಲಿ, ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ಕರ್ತವ್ಯಕ್ಕೆ ನಿಯೋಜಿಸಿರುವ ಅಧಿಕಾರಿ /ಸಿಬ್ಬಂದಿಗಳು ಕೋರಿರುವ ಇಡಿಸಿ (ಎಲೆಕ್ಷನ್ ಡ್ಯೂಟಿ ಸರ್ಟಿಫಿಕೇಟ್) ಅರ್ಜಿಗಳನ್ನು ಕೂಡಲೇ ವಿತರಿಸಿ, 2 ದಿನದಲ್ಲಿ ಸಂಪೂರ್ಣ ವರದಿ ನೀಡುವಂತೆ ಹಾಗೂ ಈಗಾಗಲೇ ಸಂಗ್ರಹಿಸಿರುವ ಅರ್ಜಿಗಳನ್ನು ಕೂಡಲೇ ಸಂಬಂದಪಟ್ಟ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳಿಗೆ ಕಳುಹಿಸಿ, ಯಾವುದೇ ಕಾರಣ ಕ್ಕೂ ಸಿಬ್ಬಂದಿಗಳು ಮತದಾನದಿಂದ ವಂಚಿತರಾಗದಂತೆ ಎಚ್ಚರ ವಹಿಸುವಂತೆ ವಿದ್ಯಾಕುಮಾರಿ ಸೂಚಿಸಿದರು.
ಮಸ್ಟರಿಂಗ್ ದಿನ ತಾನು ಖುದ್ದು ಸಿಬ್ಬಂದಿಗಳು ಇಡಿಸಿ ಪಡೆದಿರುವ ಕುರಿತು ಪರಿಶೀಲನೆ ನಡೆಸಲಿದ್ದು, ಯಾವುದೇ ಸಿಬ್ಬಂದಿ ಈ ಬಗ್ಗೆ ದೂರು ನೀಡಿದಲ್ಲಿ ಸಂಬಂಧಪಟ್ಟವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಎಚ್ಚರಿಸಿದರು.
ಮಸ್ಟರಿಂಗ್ ಸಮಯದಲ್ಲಿ ಅಂಚೆ ಮತಪತ್ರ ಚಲಾವಣೆ ಆರಂಭಿಸುವ ಪೆಸಿಲಿಟೇಷನ್ ಕೇಂದ್ರದಲ್ಲಿ ಅಗತ್ಯ ನಿಯಮಗಳನ್ನು ಅನುಸರಿಸಿ, ಯಾವುದೇ ಕಾರಣಕ್ಕೂ ಅಂಚೆ ಮತಪತ್ರಗಳ ದುರುಪಯೋಗವಾಗದಂತೆ ನೋಡಿ ಕೊಳ್ಳಬೇಕು ಎಂದು ಎಡಿಸಿ ಹೇಳಿದರು.
ಸಭೆಯಲ್ಲಿ ಉಡುಪಿ ಜಿಲ್ಲಾ ಅಂಚೆಪತ್ರದ ನೋಡಲ್ ಆಧಿಕಾರಿ ಕೃಷ್ಣ ಹೆಪ್ಸೂರ್ ಮತ್ತು ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ವಿವಿಧ ವಿಧಾನಸಭಾ ಕ್ಷೇತ್ರದ ಅಂಚೆ ಮತಪತ್ರ ನಿರ್ವಹಣೆ ಅಧಿಕಾರಿಗಳು ಉಪಸ್ಥಿತ ರಿದ್ದರು.