ಮೀನುಗಾರಿಕಾ ಸಮುದಾಯಕ್ಕೆ ಇನ್ನಷ್ಟು ನೆರವು: ಬಿ.ಎಲ್. ಸಂತೋಷ್
ಮಂಗಳೂರು, ಎ.11: ಮೀನುಗಾರಿಕೆ ಮತ್ತು ಮೀನುಗಾರಿಕಾ ಸಮುದಾಯದ ಅಭಿವೃದ್ಧಿಗೆ ಇನ್ನಷ್ಟು ನೆರವು ದೊರೆಯಲಿದೆ ಎಂದು ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹೇಳಿದರು.
ಬಿಜೆಪಿ ದ.ಕ. ಜಿಲ್ಲಾ ಮೀನುಗಾರರ ಪ್ರಕೋಷ್ಠದಿಂದ ನಗರದ ಸುಧೀಂದ್ರ ಸಭಾಂಗಣದಲ್ಲಿ ಗುರುವಾರ ನಡೆದ ಮೀನುಗಾರ ಪ್ರತಿನಿಧಿಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರ ಸರಕಾರದಲ್ಲಿ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಮೀನುಗಾರಿಕಾ ಸಚಿವಾಲಯ ಘೋಷಿಸಿ, 500 ಕೋಟಿ ರೂ. ಅನುದಾನ ನೀಡುವ ಮೂಲಕ ಮೀನುಗಾರಿಕಾ ಸಮುದಾಯಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಮುಂದಿನ ಸರಕಾರದಲ್ಲಿ ಮೀನುಗಾರಿಕಾ ಸಚಿವರು ಇರಲಿದ್ದಾರೆ ಎಂದು ತಿಳಿಸಿದರು.
ಮೀನುಗಾರಿಕೆಗೆ ಪೂರಕವಾಗಿ ಮಂಗಳೂರಿನ ಕುಳಾಯಿ ಬಂದರು ಸಹಿತ ದೇಶಾದ್ಯಂತ 40ಕ್ಕೂ ಹೆಚ್ಚು ಸರ್ವಋತು ಬಂದರು ಕಾಮಗಾರಿಯನ್ನು ಮುಂದಿನ ಮೂರು ವರ್ಷದೊಳಗೆ ಪೂರ್ಣಗೊಳಿಸಲು ಮೋದಿ ಸರಕಾರ ಸಂಕಲ್ಪ ತೊಟ್ಟಿದೆ. ಮತ್ಸಸಂಪದ ಯೋಜನೆಯಡಿ ಮೀನುಗಾರಿಕೆಗೆ 20 ಸಾವಿರ ಕೋಟಿ ರೂ. ಒದಗಿಸಲಾಗುತ್ತಿದೆ. ಓಶಿಯನ್ ಸ್ಮಾರ್ಟ್ ಯೋಜನೆಯಡಿ ಮತ್ಸಸಂಪತ್ತು ಇರುವ ಪ್ರದೇಶದ ಬಗ್ಗೆ ಮೀನುಗಾರರ ಮೊಬೈಲ್ಗೆ ಸಂದೇಶ ಕಳುಹಿಸಲಾಗುತ್ತಿದೆ. 5 ಲಕ್ಷ ಮೀನುಗಾರರು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.
ಕಳೆದ ಐದು ವರ್ಷದ ಅವಧಿಯಲ್ಲಿ ಮೋದಿ ಸರಕಾರ ಏಳು ಕೋಟಿ ಮನೆಗೆ ಗ್ಯಾಸ್ ಸಂಪರ್ಕ ಒದಗಿಸಿದೆ. 9.70 ಶೌಚಗೃಹ ನಿರ್ಮಾಣಗೊಂಡಿದೆ. 18,600 ಗ್ರಾಮಗಳಿಗೆ ವಿದ್ಯುತ್ ಪೂರೈಸಲಾಗಿದೆ. 453 ಯೋಜನೆಗಳ 6.7 ಲಕ್ಷ ಕೋಟಿ ರೂ. ಲಾನುಭವಿಗಳ ಖಾತೆಗೆ ನೇರವಾಗಿ ಜಮೆಯಾಗಿದೆ. ಮುಂದಿನ ಐದು ವರ್ಷದಲ್ಲಿ ಎಲ್ಲ ಸಬ್ಸಿಡಿ ಹಣ ಲಾನುಭವಿಗಳ ಖಾತೆಗೆ ನೇರವಾಗಿ ಬರಲಿದೆ. ಮಾಡುವ ಕೆಲಸ ಇನ್ನಷ್ಟಿದೆ. ಅದಕ್ಕಾಗಿ ಈ ಚುನಾವಣೆಯಲ್ಲಿ ಬೆಂಬಲಿಸಲು ಮನವಿ ಮಾಡಿದರು.
ಬಿಜೆಪಿ ವಿಭಾಗ ಪ್ರಭಾರಿ ಉದಯಕುಮಾರ್ ಶೆಟ್ಟಿ, ಸಹ ಪ್ರಭಾರಿ ಪ್ರತಾಪಸಿಂಹ ನಾಯಕ್, ಬಿಜೆಪಿ ದ.ಕ. ಲೋಕಸಭಾ ಕ್ಷೇತ್ರ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕ ಗೋಪಾಲಕೃಷ್ಣ ಹೇರಳೆ, ಮೀನುಗಾರಿಕಾ ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷರಾದ ನಿತಿನ್ಕುಮಾರ್, ರಾಮಚಂದ್ರ ಬೈಕಂಪಾಡಿ, ಪ್ರಮುಖರಾದ ಬಾಬು ಬಂಗೇರ, ಶೋಭೇಂದ್ರ ಸಸಿಹಿತ್ಲು ಉಪಸ್ಥಿತರಿದ್ದರು.
‘ಭವಿಷ್ಯದಲ್ಲಿ ಮೀನುಗಾರರ ಸಮಸ್ಯೆಗೆ ಪರಿಹಾರ’
ಮೀನುಗಾರಿಕಾ ಸಮುದಾಯ ಹಿಂದಿನಿಂದಲೂ ಹಿಂದುತ್ವ ಮತ್ತು ದೇಶಾಭಿಮಾನದ ಹಿನ್ನೆಲೆಯಲ್ಲಿ ಬಿಜೆಪಿಯನ್ನು ಬೆಂಬಲಿಸುತ್ತಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿಯ ಆಡಳಿತದಲ್ಲಿ ಮೀನುಗಾರಿಕಾ ಸಮುದಾಯಕ್ಕೆ ಸಾಕಷ್ಟು ಕೊಡುಗೆ ದೊರೆತಿದೆ ಎಂದು ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಹೇಳಿದರು.
ಯಡಿಯೂರಪ್ಪ ಸರಕಾರ ಇದ್ದಾಗ ನಮ್ಮ ಬೇಡಿಕೆಗಳನ್ನು ಈಡೇರಿಸಲಾಗಿದೆ. ಕೇಂದ್ರದಲ್ಲೂ ಮೀನುಗಾರಿಕಾ ಸಮುದಾಯದ ಹಲವಾರು ಮಂದಿ ಬಿಜೆಪಿ ಸಂಸದರಿದ್ದು, ಮುಂದಿನ ದಿನಗಳಲ್ಲಿ ಮೀನುಗಾರರ ಸಮಸ್ಯೆ ಪರಿಹಾರಗೊಳ್ಳಲಿದೆ. ಈ ಬಾರಿಯೂ ಕರಾವಳಿಯ ಮೂರೂ ಲೋಕಸಭಾ ಕ್ಷೇತ್ರದಲ್ಲಿ ಮೀನುಗಾರಿಕಾ ಸಮುದಾಯ ಬಿಜೆಪಿಗೆ ಮತ ನೀಡಬೇಕು ಎಂದು ವಿನಂತಿಸಿದರು.