‘ರಾಜಕೀಯಕ್ಕಾಗಿ ಕರಾವಳಿಯಲ್ಲಿ ಆತಂಕದ ವಾತಾವರಣ ಸೃಷ್ಟಿ’
ವಕೀಲ ಮಿತ್ರರೊಂದಿಗೆ ಕಾಂಗ್ರೆಸ್ ಸಂವಾದ
ಮಂಗಳೂರು, ಎ.11: ನೆಲದ ಮಣ್ಣಿನ ಗುಣವನ್ನು ಅರ್ಥೈಸಿಕೊಳ್ಳದಿದ್ದಾಗ ಅಭಿವೃದ್ಧಿಯಲ್ಲಿ ಕುಂಠಿತಗೊಳ್ಳುತ್ತದೆ. ಕರಾವಳಿಯಲ್ಲಿ ಕೆಲವರು ಸೌಹಾರ್ದಕ್ಕೆ ಧಕ್ಕೆ ತರುವುದರ ಜತೆಗೆ ರಾಜಕೀಯದ ಉದ್ದೇಶದಿಂದ ಆತಂಕದ ವಾತಾವರಣವನ್ನು ಸೃಷ್ಟಿಸುತ್ತಿದ್ದಾರೆ. ಇದು ಬಹಳ ಅಪಾಯಕಾರಿ ಎಂದು ಕೆಪಿಸಿಸಿ ಉಪಾಧ್ಯಕ್ಷ ವಿ.ಆರ್.ಸುದರ್ಶನ್ ತಿಳಿಸಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ಗುರುವಾರ ನಡೆದ ‘ವಕೀಲ ಮಿತ್ರರೊಂದಿಗೆ ಕಾಂಗ್ರೆಸ್ ಸಂವಾದ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಂಗಳೂರು ಬಾರ್ ಅಸೋಸಿಯೇಶನ್ಗೆ 150 ವರ್ಷಗಳ ಇತಿಹಾಸವಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ಪ್ರತಿಭಾವಂತರಿಂದ ಕೂಡಿದೆ. ಜಗತ್ತಿನ ಯಾವುದೇ ಭಾಗದಲ್ಲೂ ಕರಾವಳಿ ಮಂದಿ ಕಾಣಿಸಿಕೊಳ್ಳುತ್ತಾರೆ. ಬುದ್ಧಿವಂತರ ಜಿಲ್ಲೆಯ ಜನತೆ ಹಲವು ವರ್ಷಗಳಿಂದ ಸಮರ್ಥ ವ್ಯಕ್ತಿಯನ್ನು ಚುನಾಯಿಸುವಲ್ಲಿ ಎಡವಿದ್ದಾರೆ. ಇನ್ನಾದರೂ ಜನತೆ ಎಚ್ಚೆತ್ತುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಕರಾವಳಿಯಿಂದಲೇ ಆರಂಭವಾದ ರಾಷ್ಟ್ರೀಕೃತ ಬ್ಯಾಂಕ್ಗಳು ಪ್ರಸ್ತುತ ದಿನಗಳಲ್ಲಿ ದೇಶದಲ್ಲಿ ಉತ್ತಮ ಜವಾಬ್ದಾರಿಯನ್ನು ವಹಿಸುತ್ತಿವೆ. ಇಲ್ಲಿ ದೂರದೃಷ್ಟಿಯಿಂದ ಕೂಡಿದ ಅಭಿವೃದ್ಧಿ ಕೆಲಸಗಳಾಗಿವೆ. ಮುಂಬೈ ಮತ್ತು ಚೆನ್ನೈಗಳನ್ನು ಮೀರಿ ಬೆಳೆಯುವಂತಹ ಸಾಮರ್ಥ್ಯ ಮಂಗಳೂರಿಗಿದೆ. ಆದರೆ ಇಲ್ಲಿನ ಅಭಿವೃದ್ಧಿಹೀನ ಜನಪ್ರನಿಧಿಗಳಿಂದ ಮಂಗಳೂರು ಹಿನ್ನಡೆ ಸಾಧಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಜಲಸಾರಿಗೆ ಮೂಲಕ ನಡೆಸುವ ಹಲವು ಸಾಗಣೆಗಳು ಇಂದಿಗೂ ಚೆನ್ನೈನ ಬಂದರ್ ಮೂಲಕವೇ ಹೋಗುತ್ತಿವೆ. ನವಮಂಗಳೂರು ಬಂದರ್ ಹಿಂದುಳಿದಿದೆ. ಬೆಂಗಳೂರು-ಮಂಗಳೂರು ಸಂಪರ್ಕ ರಸ್ತೆಗಳು ಹೇಳಿಕೊಳ್ಳುವಷ್ಟು ಅಭಿವೃದ್ಧಿಯಾಗಿಲ್ಲ. ಇದು ನೇರವಾಗಿ ಪ್ರಯಾಣಿಕರಿಗೆ ಪ್ರಯಾಸದಾಯಕವಾಗಿದೆ. ಅಭಿವೃದ್ಧಿಗೆ ಜನಪ್ರತಿನಿಧಿಗಳು ತಮ್ಮ ಜವಾಬ್ದಾರಿಯನ್ನು ಮೆರೆಯಬೇಕು ಎಂದು ಹೇಳಿದರು.
ಸಂಸತ್ನ ಮಹತ್ವ ಕುಂಠಿತ: ಸಂಸದರಾದವರು ಸಂಸತ್ನಲ್ಲಿ ಅಭಿವೃದ್ಧಿ ವಿಚಾರಗಳನ್ನು ಮಂಡಿಸಿ, ಕ್ಷೇತ್ರಗಳ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಅಭಿವೃದ್ಧಿಯತ್ತ ಹೆಜ್ಜೆ ಇಡಬೇಕು. ಆದರೆ ಕೇಂದ್ರ ಸರಕಾರದಲ್ಲಿ ಕೇವಲ ರಾಜಕೀಯ ಭಾಷಣಗಳನ್ನು ಮಾಡಲಾಗುತ್ತಿದೆ. ಸಂಸತ್ನ ಮಹತ್ವ ಕಡಿಮೆಯಾಗುತ್ತಿದೆ. ಸಂಸದರೆನಿಸಿಕೊಂಡವರು ತಮ್ಮ ಜವಾಬ್ದಾರಿಗಳನ್ನು ಅರಿಯಬೇಕು. ಪ್ರಾಮಾಣಿಕವಾಗಿ ಕೆಲಸ ಮಾಡುವ ಮೂಲಕ ಅಭಿವೃದ್ಧಿಗೆ ವೇಗ ತರಬೇಕು ಎಂದು ಹೇಳಿದರು.
ಸಂವಾದ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಜೆ.ಆರ್.ಲೋಬೊ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಹರೀಶ್ಕುಮಾರ್, ಕೆಪಿಸಿಸಿ ಕಾರ್ಯದರ್ಶಿ ಕಳ್ಳಿಗೆ ತಾರಾನಾಥ ಶೆಟ್ಟಿ, ಬಿ.ಇಬ್ರಾಹೀಂ, ಸದಾಶಿವ ಉಳ್ಳಾಲ್, ಎ.ಸಿ.ಗೋಪಾಲ, ಮುಹಮ್ಮದ್ ಹನೀಫ್, ಟಿ.ಎಂ. ಪೂಜಾರಿ, ಚೆಂಗಪ್ಪ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಕಾಂಗ್ರೆಸ್ನ ವಿನಯರಾಜ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.