ಮಂಗಳೂರು ವಿಶ್ವವಿದ್ಯಾನಿಲಯ ಹಾಸ್ಟೆಲ್ನಲ್ಲಿ ರ್ಯಾಗಿಂಗ್: ಆರೋಪ
ಕ್ಷುಲ್ಲಕ ಘಟನೆ ರಾಜಿಯಲ್ಲಿ ಇತ್ಯರ್ಥ; ವಿವಿ ಆಡಳಿತ ಸ್ಪಷ್ಟನೆ
ಮಂಗಳೂರು, ಎ.11: ಮಂಗಳೂರು ವಿಶ್ವವಿದ್ಯಾಲಯ ಹಾಸ್ಟೆಲ್ನಲ್ಲಿ ರ್ಯಾಗಿಂಗ್ ಆರೋಪ ಕುರಿತಂತೆ ತನಿಖೆ ನಡೆಸಿದ ವಿವಿ ಆಡಳಿತ, ‘ಇದೊಂದು ಕ್ಷುಲ್ಲಕ ಘಟನೆಯಾಗಿದ್ದು, ಇದನ್ನು ರಾಜಿಯಲ್ಲಿ ಇತ್ಯರ್ಥಪಡಿಸಲಾಗಿದೆ’ ಎಂದು ಸ್ಪಷ್ಟಪಡಿಸಿದೆ.
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎಸ್ಸಿ ಅಧ್ಯಯನ ಮಾಡುತ್ತಿರುವ ವಿವಿ ಹಾಸ್ಟೆಲ್ ವಿದ್ಯಾರ್ಥಿ ಅಸ್ಸಾಂ ಮೂಲದ ಜಹಾಂಗೀರ್ ಎಂಬಾತನಿಂದ ಎಂ.ಎಸ್ಸಿ ವಿದ್ಯಾರ್ಥಿಗಳಾದ ಅನಿಲ್ ಮತ್ತು ಸಾಗರ್ ಎಂಬ ವಿದ್ಯಾರ್ಥಿಗಳು ‘ಟ್ಯಾಲೆಂಟ್ ಡೇ’ ಕಾರ್ಯಕ್ರಮ ನೀಡಲು ಚಪ್ಪಲಿಯನ್ನು ಪಡೆದಿದ್ದರು. ಅದನ್ನು ಎರಡು ದಿನದ ಬಳಿಕ ಜಹಾಂಗೀರ್ಗೆ ಮರಳಿಸಲಾಗಿತ್ತು.
ಈ ವೇಳೆ ಅನಿಲ್ ಮತ್ತು ಸಾಗರ್ ಸೇರಿ ತನ್ನನ್ನು ನಿಂದಿಸಿದ್ದಾರೆ ಎಂದು ಜಹಾಂಗೀರ್ ದೆಹಲಿಯ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಕ್ಕೆ ದೂರು ನೀಡಿದ್ದರು. ಅಲ್ಲಿಂದ ವಿವಿಗೆ ಮಾಹಿತಿ ರವಾನೆಯಾಗಿದ್ದು, ವಿವಿ ಆಡಳಿತ ಬುಧವಾರ ರ್ಯಾಗಿಂಗ್ ತಡೆ ಸಮಿತಿಯ ಸಭೆ ನಡೆಸಿ ಈ ಬಗ್ಗೆ ವಿಚಾರಣೆ ನಡೆಸಿತ್ತು. ಅಲ್ಲದೆ, ಕೊಣಾಜೆ ಪೊಲೀಸರು ಕೂಡ ವಿಚಾರಣೆಗೆ ಕರೆಸಿದ್ದರು.
ಗುರುವಾರ ಮತ್ತೆ ವಿವಿ ಆಡಳಿತ ಈ ಮೂರು ಮಂದಿಯನ್ನು ಕರೆಸಿ ತಪ್ಪೊಪ್ಪಿಗೆ ಪತ್ರ ಹಾಗೂ ದೂರನ್ನು ವಾಪಸ್ ಪಡೆಯುವಂತೆ ಜಹಾಂಗೀರ್ಗೆ ಸೂಚಿಸಿ ಪ್ರಕರಣವನ್ನು ಇತ್ಯರ್ಥಪಡಿಸಿತು ಎಂದು ವಿವಿ ಮೂಲಗಳು ತಿಳಿಸಿವೆ.
ಈ ಪ್ರಕರಣವನ್ನು ರಾಜಿಯಲ್ಲಿ ಇತ್ಯರ್ಥಪಡಿಸಲಾಗಿದೆ ಎಂದು ವಿವಿ ರಿಜಿಸ್ಟ್ರಾರ್ ಎ.ಎಂ.ಖಾನ್ ತಿಳಿಸಿದ್ದಾರೆ.