ಹೋರಾಟಗಾರ ಮಲ್ನಾಡ್ ಮೆಹಬೂಬ್ ಗಡೀಪಾರು ಆದೇಶ ಹಿಂಪಡೆಯಲು ಪಿಎಫ್ಐ ಆಗ್ರಹ
ಬೆಂಗಳೂರು: ಮಾನವ ಹಕ್ಕು ಹೋರಾಟಗಾರ, ಪತ್ರಕರ್ತರೂ ಆಗಿರುವ ಮಲ್ನಾಡ್ ಮಹ್ಬೂಬ್ ಅವರ ಗಡೀಪಾರು ಆದೇಶವನ್ನು ಕೂಡಲೇ ಹಿಂಪಡೆಯಬೇಕು ಮತ್ತು ಆ ಮೂಲಕ ಮಾನವ ಹಕ್ಕುಗಳಿಗಾಗಿ ಹೋರಾಟ ನಡೆಸುವುದು ಕ್ರಿಮಿನಲ್ ಚಟುವಟಿಕೆಯಲ್ಲ ಎಂಬ ಸಂದೇಶವನ್ನು ನಾಗರಿಕ ಸಮಾಜಕ್ಕೆ ನೀಡುವಂತೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದೆ.
ಮಲ್ನಾಡ್ ಮಹ್ಬೂಬ್ ಅವರ ಮೇಲೆ ದಾಖಲಾಗಿರುವ ಪ್ರಕರಣಗಳು ಹೋರಾಟದ ಭಾಗವಾಗಿ ದಾಖಲಾದ ಪ್ರಕರಣಗಳಾಗಿವೆ. ಹೋರಾಟಗಾರರ ಮೇಲೆ ಇಂತಹ ಪ್ರಕರಣ ದಾಖಲಿಸಲ್ಪಡುವುದು ಸಹಜವಾಗಿರುತ್ತದೆ. ಆದರೆ ಅದೇ ಕಾರಣವನ್ನು ಇಟ್ಟುಕೊಂಡು ಅವರನ್ನು ರೌಡಿಪಟ್ಟಿಗೆ ಸೇರಿಸಿರುವ ಪೊಲೀಸ್ ಇಲಾಖೆಯ ಕ್ರಮವನ್ನು ಪಾಪ್ಯುಲರ್ ಫ್ರಂಟ್ ಖಂಡಿಸುತ್ತದೆ. ಜಿಲ್ಲಾಧಿಕಾರಿಯು ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ ಗಡೀಪಾರು ಆದೇಶವನ್ನು ಮರುಪರಿಶೀಲಿಸಬೇಕು ಎಂದು ಪಿಎಫ್ಐ ಒತ್ತಾಯಿಸಿದೆ.
ಸಾಮಾಜಿಕ ಹೋರಾಟಗಾರರ ನೈತಿಕ ಸ್ಥೈರ್ಯವನ್ನು ಕುಗ್ಗಿಸುವ ಅಸ್ತ್ರವಾಗಿ ಗಡೀಪಾರು ಕಾನೂನು ಕ್ರಮದ ದುರ್ಬಳಕೆಯನ್ನು ನಾಗರಿಕ ಸಮಾಜವು ಒಗ್ಗಟ್ಟಿನಿಂದ ಪ್ರತಿಭಟಿಸಬೇಕಿದೆ. ಫ್ಯಾಷಿಝಮ್ ವಿರುದ್ಧ ಹೋರಾಟದಲ್ಲಿ ಪಾಲ್ಗೊಂಡಿದ್ದ ಮಹ್ಬೂಬ್ ಅವರು ತನ್ನ ವಸ್ತುನಿಷ್ಠ ಪತ್ರಿಕಾ ಧರ್ಮವನ್ನು ಪಾಲಿಸುವ ಮೂಲಕ ಅಧಿಕಾರಿ ವರ್ಗದ ಕೆಂಗಣ್ಣಿಗೂ ಗುರಿಯಾಗಿದ್ದರು. ಆದರೆ ಅಲ್ಪಸಂಖ್ಯಾತ ಸಮುದಾಯದ ಹೋರಾಟದ ಧ್ವನಿಯನ್ನು ಹತ್ತಿಕ್ಕಲು ಫ್ಯಾಷಿಸ್ಟ್ ಮನೋಸ್ಥಿತಿಯ ಆಡಳಿತ ವ್ಯವಸ್ಥೆಯು ಗಡೀಪಾರು ಕಾನೂನು ಕ್ರಮವನ್ನು ದುರ್ಬಳಕೆ ಮಾಡಿಕೊಂಡಿರುವುದು ಖಂಡನೀಯ. ಇದರ ವಿರುದ್ಧ ರಾಜ್ಯಾದ್ಯಂತ ಪ್ರಗತಿಪರ ಚಿಂತಕರು, ಸಂಘಟನೆಗಳು, ಪತ್ರಕರ್ತರು ಒಂದಾಗಿ ಧ್ವನಿ ಎತ್ತಬೇಕು ಎಂದು ಪಿಎಫ್ಐ ಪ್ರಧಾನ ಕಾರ್ಯದರ್ಶಿ ಯಾಸಿರ್ ಹಸನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.