ಉಡುಪಿ: ಎ.13ರಿಂದ ಸಂಗೀತ ರಸಗಹಣ ಶಿಬಿರ
ಉಡುಪಿ, ಎ.12: ಕನಕದಾಸ ಅಧ್ಯಯನ ಸಂಶೋಧನಾ ಪೀಠ ಉಡುಪಿ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್, ಸರಿಗಮ ಭಾರತಿ ಸಂಗೀತ ವಿದ್ಯಾಲಯ ಪರ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ಕನಕದಾಸ ಕೀರ್ತನ ಹಾಗೂ ಸಂಗೀತ ರಸಗ್ರಹಣ ಶಿಬಿರ ಎ.13 ಮತ್ತು 14ರಂದು ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ.
ಕನಕದಾಸ ಕೀರ್ತನ ಹಾಗೂ ಸಂಗೀತ ರಸಗ್ರಹಣ ಶಿಬಿರವನ್ನು ನಾಳೆ ಬೆಳಗ್ಗೆ 9 ಗಂಟೆಗೆ ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಜಿ ವಿಜಯ್ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್ನ ಆಡಳಿತಾಧಿಕಾರಿ ಡಾ.ಎಚ್.ಶಾಂತಾರಾಮ್ ವಹಿಸುವರು. ಮುಖ್ಯ ಅತಿಥಿ ಗಳಾಗಿ ಡಾ. ಮುಲ್ಲೈ ವಾಸಲ್ ಚಂದ್ರಮೌಳಿ ಭಾಗವಹಿಸುವರು.
ಉದ್ಘಾಟನೆಯ ಬಳಿಕ ಆರಂಭಗೊಳ್ಳುವ ಶಿಬಿರ ಸಂಜೆ 4 ರವರೆಗೆ ನಡೆಯ ಲಿದೆ. ಶಿಬಿರವನ್ನು ಚೆನ್ನೈನ ಡಾ. ಮುಲ್ಲೈವಾಸಲ್ ಚಂದ್ರಮೌಳಿ ನಡೆಸಿ ಕೊಡಲಿದ್ದಾರೆ. ಬಳಿಕ ಬರೋಡದ ಎಸ್.ಕೆ. ಮಹತಿ ಇವರ ಸಂಗೀತ ಕಚೇರಿ ನಡೆಯಲಿದೆ.
ಎ.14ರ ಬೆಳಗ್ಗೆ 9 ರಿಂದ ಸಂಗೀತ ಶಿಬಿರ ನಡೆಯಲಿದೆ. ಅಪರಾಹ್ನ 1:45ರಿಂದ 3:15ರವರೆಗೆ ಪುತ್ತೂರಿನ ಶ್ರೀಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಸಂಸ್ಥೆಯ ಕಲಾವಿದರಿಂದ ವಿದ್ವಾನ್ ದೀಪಕ್ ಕುಮಾರ್ ಪುತ್ತೂರು ನಿರ್ದೇಶನದಲ್ಲಿ ‘ಹರಿತ’ ವಿಷಯಾಧಾರಿತಕನಕದಾಸರ ಹಾಡುಗಳಿಗೆ ಸಂಬಂಧಿಸಿ ಭರತನಾಟ್ಯ ಪ್ರಸ್ತುತಗೊಳ್ಳಲಿದೆ. ಸಂಜೆ 5 ಕ್ಕೆ ಸಮಾರೋಪ ಹಾಗೂ ಶಿಬಿರಾರ್ಥಿಗಳಿಂದ ಹಾಡುಗಾರಿಕೆ ನಡೆಯಲಿದೆ ಎಂದು ಸಂಘಟಕರ ಪ್ರಕಟಣೆ ತಿಳಿಸಿದೆ.