ಬಿಲ್ಲವ ಸಮುದಾಯವನ್ನು ಕಾಂಗ್ರೆಸ್ ಕಡೆಗಣಿಸಿಲ್ಲ: ಜನಾರ್ದನ ಪೂಜಾರಿ ಪುತ್ರ ಸಂತೋಷ್ ಸ್ಪಷ್ಟನೆ
ಮಂಗಳೂರು, ಎ.12: ಕಾಂಗ್ರೆಸ್ ಬಿಲ್ಲವ ಸಮುದಾಯವನ್ನು ಅಥವಾ ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಅವರನ್ನು ಕಡೆಗಣಿಸಿಲ್ಲ ಎಂದು ಜನಾರ್ದನ ಪೂಜಾರಿ ಅವರ ಪುತ್ರ ಸಂತೋಷ್ ಜೆ. ಪೂಜಾರಿ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಂದೆಯವರಿಗೆ ಚುನಾವಣಾ ಪ್ರಕ್ರಿಯೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಆಗದಿರುವ ಕಾರಣ ಅವರ ಪರವಾಗಿ ಕಳೆದ ಒಂದು ವಾರದಿಂದ ತಾನು ಪ್ರಚಾರ ಕಾರ್ಯದಲ್ಲಿ ಭಾಗವಹಿಸುತ್ತಿರುವುದಾಗಿ ತಿಳಿಸಿದರು.
ದೇವರಾಯ ನಾಯ್ಕ, ವಿನಯ ಕುಮಾರ್ ಸೊರಕೆ, ಆರ್.ಎಲ್. ಜಾಲಪ್ಪ, ಜನಾರ್ದನ ಪೂಜಾರಿ, ಎಸ್ .ಬಂಗಾರಪ್ಪ ಮತ್ತು ಈ ಚುನಾವಣೆಯಲ್ಲಿ ಬಿ.ಕೆ.ಹರಿಪ್ರಸಾದ್, ಮಧು ಬಂಗಾರಪ್ಪ ಅವರಿಗೆ ಕಾಂಗ್ರೆಸ್ ಅವಕಾಶ ನೀಡಿದೆ. ಕಾಂಗ್ರೆಸ್ ಪಕ್ಷ ಆರಂಭದಿಂದಲೂ ಬಿಲ್ಲವ, ಈಡಿಗ ಸಹಿತ ಹಿಂದುಳಿದ ವರ್ಗಗಳಿಗೆ ಬೆಂಬಲ ನೀಡಿದೆ. ಆದ್ದರಿಂದ ಜನಾರ್ದನ ಪೂಜಾರಿ, ಅವರ ಕನಸು ನನಸು ಮಾಡಲು ಸಾರ್ವಜನಿಕರು, ಅವರ ಹಿತೈಷಿಗಳು ಯುವಜನರು ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡದ ಅಗತ್ಯಗಳ ಬಗ್ಗೆ ಪಾರ್ಲಿಮೆಂಟ್ನಲ್ಲಿ ಸಮರ್ಥವಾಗಿ ಧ್ವನಿ ಎತ್ತಬಲ್ಲ ಸಾಮರ್ಥ್ಯವಿರುವ ಸುಶಿಕ್ಷಿತ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಅವರನ್ನು ಬೆಂಬಲಿಸಬೇಕೆಂದು ಅವರು ಹೇಳಿದರು. ಸದ್ಯ ಸಕ್ರಿಯ ರಾಜಕಾರಣದ ಬಗ್ಗೆ ಆಲೋಚನೆ ಮಾಡಿಲ್ಲ. ಆದರೆ ಅನಿವಾರ್ಯ ವಾದಲ್ಲಿ ಸಕ್ರಿಯ ರಾಜಕಾರಣ ಪ್ರವೇಶ ಮಾಡುವ ಬಗ್ಗೆ ಆಲೋಚಿಸುವುದಾಗಿ ಅವರು ತಿಳಿಸಿದರು.
ಅನಿವಾರ್ಯವಾದಲ್ಲಿ ಸಕ್ರಿಯ ರಾಜಕಾರಣಕ್ಕೆ !
ಪ್ರಚಾರ ಕಾರ್ಯ ಮುಂದುವರಿಸುವುದಾಗಿ ಹೇಳಿದ ಅವರು, ತಂದೆಯವರ ಗಮನಕ್ಕೆ ತಂದು ಈ ಪತ್ರಿಕಾಗೋಷ್ಠಿ ನಡೆಸುವುದಾಗಿ ಹೇಳುವ ಮೂಲಕ ರಾಜಕಾರಣ ಪ್ರವೇಶಕ್ಕೆ ಕುಟುಂಬದ ಹಿರಿಯರ ಗ್ರೀನ್ ಸಿಗ್ನಲ್ ದೊರಕಿರುವುದನ್ನೂ ಸೂಚ್ಯವಾಗಿ ಹೇಳಿದರು.
ಕಳೆದ 28 ವರ್ಷಗಳಲ್ಲಿ ಜಿಲ್ಲೆಯಲ್ಲಿ ನಿರೀಕ್ಷಿತ ರೀತಿಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಕಳೆದ 5 ವರ್ಷಗಳಲ್ಲಿ ಅಭಿವೃದ್ಧಿ ಬದಲು ಕರಾವಳಿಯ ಆರ್ಥಿಕ, ಔದ್ಯೋಗಿಕ ವ್ಯವಸ್ಥೆಗಳನ್ನು ತಲ್ಲಣಗೊಳಿಸುವ ನೀತಿಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ. ಇದರಿಂದ ಇಲ್ಲಿನ ವಾಣಿಜ್ಯ, ಸಣ್ಣ ವ್ಯಾಪಾರ ಕ್ಷೇತ್ರಗಳಲ್ಲಿ ಅಪಾರ ನಷ್ಟ ಮತ್ತು ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಿದೆ. ಅದಕ್ಕಾಗಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುವಂತೆ ವಿನಂತಿಸುವುದಾಗಿ ಸಂತೋಷ್ ಜೆ. ಪೂಜಾರಿ ಹೇಳಿದರು.
ಜಿಲ್ಲೆಯ ಅಭಿವೃದ್ಧಿ, ಸಾಮಾಜಿಕ ನ್ಯಾಯಕ್ಕೆ ಮನ್ನಣೆ ನೀಡಿರುವ ಕಾಂಗ್ರೆಸ್ ಪಕ್ಷಕ್ಕೆ ಜನತೆ ಬೆಂಬಲ ನೀಡುವ ಮೂಲಕ ಕೃತಜ್ಞತೆ ಸಲ್ಲಿಸಬೇಕು. ದಕ್ಷಿಣ ಕನ್ನಡ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಬೇಕು ಎಂದು ಅವರು ಹೇಳಿದರು.
ಪೂಜಾರಿ ಅವರ ಸುದೀರ್ಘ ಅವಧಿಯ ರಾಜಕಾರಣದಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳದ ಅವರ ಪುತ್ರನ ದಿಢೀರ್ ಈ ನಡೆ ಇದೀಗ ಸಾರ್ವಜನಿಕ ವಲಯದಲ್ಲಿ ಕುತೂಹಲ ಕೆರಳಿಸಿದೆ.
ಹಿರಿಯನ ಸ್ಥಾನಲ್ಲಿದ್ದು ಆಶೀರ್ವಾದವಷ್ಟೆ !
ಕುದ್ರೋಳಿ ಕ್ಷೇತ್ರಕ್ಕೆ ಬಂದು ಬೇಡಿದಾಗ ಹಿರಿಯನ ಸ್ಥಾನದಲ್ಲಿದ್ದು ಜನಾರ್ದನ ಪೂಜಾರಿ ಅವರು ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ಗೆ ಗೆಲ್ಲುವಂತೆ ಆಶೀರ್ವಾದ ಮಾಡಿದ್ದಾರೆ. ಅದೇ ರೀತಿ ಅವರಲ್ಲಿ ಮೋದಿ ಪ್ರಧಾನಿಯಾಗಲಿ ಎಂದು ಹಾರೈಸಿದ್ದಾರಷ್ಟೆ ಎಂದು ಸಂತೋಷ್ ಜೆ. ತಿಳಿಸಿದರು.
ಆದರೆ ಕಾಂಗ್ರೆಸ್ ಸಮಾವೇಶದಲ್ಲಿ ತಮ್ಮ ಮನಸ್ಸಿನಲ್ಲಿದ್ದ ಭಾವನೆಯನ್ನು ಜನಾರ್ದನ ಪೂಜಾರಿ ಅವರು ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗೆ ಪೂರ್ತಿ ಬೆಂಬಲ ಘೋಷಿಸಿದ್ದಾರೆ. ಲೋಕಸಭೆಯಲ್ಲಿ ಧ್ವನಿ ಎತ್ತುವ ಸಂಸದರು ನಮಗೆ ಬೇಕಿದೆ. ಈಗ ಯುವಕರಲ್ಲಿ ಹುಮ್ಮಸ್ಸಿದ್ದು, ಲೋಕಸಭೆಯಲ್ಲಿ ಕರಾವಳಿಯನ್ನು ಪ್ರತಿನಿಧಿಸುವ ತಾಕತ್ತು ಮಿಥುನ್ ರೈಗೆ ಇದೆ ಎಂದು ಜನಾರ್ದನ ಪೂಜಾರಿ ಹೇಳಿದ್ದಾರೆ ಎಂದು ಸಂತೋಷ್ ಜೆ. ತಿಳಿಸಿದರು.