‘ಲೋಕಸಭೆ ಚುನಾವಣೆ-2019: ಕಾರ್ಮಿಕ ಸನ್ನದು ಬಿಡುಗಡೆ’
ಮಂಗಳೂರು, ಎ.12: ನವ ಉದಾರಿವಾದಿ ನೀತಿಗಳ ವಿರುದ್ಧ 1991ರಿಂದ ನಡೆದಿರುವ ಜಂಟಿ ಹೋರಾಟಗಳ ಮುಂದುವರಿದ ಭಾಗವಾಗಿ ಕೇಂದ್ರ ಕಾರ್ಮಿಕ ಸಂಘಟನೆಗಳು ಬಿಡುಗಡೆ ಮಾಡಿರುವ ‘ರಾಷ್ಟ್ರದ ಕಾರ್ಮಿಕರ ಬೇಡಿಕೆಗಳ ಸನ್ನದ’ನ್ನು ಶುಕ್ರವಾರ ನಗರದ ಖಾಸಗಿ ಹೊಟೇಲಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭ ಮಾತನಾಡಿದ ಸಿಐಟಿಯು ದ.ಕ.ಜಿಲ್ಲಾ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ 2015 ಮತ್ತು 2016ರ ಸೆಪ್ಟೆಂಬರ್ 2ರಂದು ನಡೆಸಲಾದ ರಾಷ್ಟ್ರವ್ಯಾಪಿ ಸಾರ್ವತ್ರಿಕ ಮುಷ್ಕರಗಳು, 2017ರ ನವೆಂಬರ್ನಲ್ಲಿ ನಡೆಸಲಾದ ‘ಮಹಾಪಡಾವ್’ ಸಂಸತ್ ಚಲೋ, 2019ರ ಜನವರಿ 8 ಮತ್ತು 9ರ ಸಾರ್ವತ್ರಿಕ ಮುಷ್ಕರ ಬೇಡಿಕೆಗಳ ಜೊತೆಗೆ ದುಡಿಯುವ ಜನತೆಯ ಪ್ರಶ್ನೆಗಳ ಆಧಾರಿತ ’ಕಾರ್ಮಿಕರ ಸನ್ನದ’ನ್ನು ಮುಂದಿನ ಲೋಕಸಭಾ ಚುನಾವಣೆಗಾಗಿ ರಾಷ್ಟ್ರದ ಎಲ್ಲಾ ರಾಜಕೀಯ ಪಕ್ಷಗಳ ಮುಂದಿರಿಸಿವೆ. ರಾಷ್ಟ್ರವ್ಯಾಪಿ ಸನ್ನದಿನ ಜೊತೆಯಲ್ಲೇ ರಾಜ್ಯದ ಜನತೆ ಎದುರಿಸಿರುವ ಸವಾಲುಗಳನ್ನು ಕೂಡ ರಾಜ್ಯದ ಕಾರ್ಮಿಕರು ಮನಗಾಣಬೇಕು ಎಂದರು.
ಗಗನಕ್ಕೇರುತ್ತಿರುವ ಆವಶ್ಯಕ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸಲು ನಿರ್ದಿಷ್ಟವಾದ ಕ್ರಮಗಳನ್ನು ಕೈಗೊಳ್ಳಬೇಕು. ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ವಿಸ್ತರಿಸಿ ಬಲಪಡಿಸಬೇಕು. ಕನಿಷ್ಠ ಕೂಲಿ ಮಾಸಿಕ 18,000 ರೂ.ಗಾಗಿ ಅಧಿಸೂಚನೆ ಜಾರಿಗೊಳಿಸಬೇಕು. ಅಧಿಕ ಸಂಖ್ಯೆಯಲ್ಲಿ ಕಾರ್ಮಿಕರನ್ನು ನೇಮಿಸಬಲ್ಲ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಮೂಲಕ ನಿರುದ್ಯೋಗ ಸಮಸ್ಯೆಯನ್ನು ನಿಯಂತ್ರಿಸಬೇಕು. ಸರಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ನೇಮಕಾತಿ ಮುಖಾಂತರ ಭರ್ತಿ ಮಾಡಬೇಕು. ನೇಮಕಾತಿಗಳ ಮೇಲಿರುವ ನಿಷೇಧವನ್ನು ಮತ್ತು ಪ್ರತಿವರ್ಷ ಸರಕಾರಿ ಕಚೇರಿಗಳಲ್ಲಿ ಶೇ.3 ಹುದ್ದೆಗಳನ್ನು ಕಡಿತ ಮಾಡಬೇಕೆಂಬ ನಿಯಮವನ್ನು ತೆಗೆದುಹಾಕಬೇಕು. ಖಾಯಂ ಮತ್ತು ನಿರಂತರ ಸ್ವರೂಪದ ಹುದ್ದೆಗಳನ್ನು ಹೊರಗುತ್ತಿಗೆ ಮತ್ತು ಗುತ್ತಿಗೆ ನೀಡುವುದನ್ನು ನಿಲ್ಲಿಸಬೇಕು. ಸಮಾನ ಕೆಲಸ ಮಾಡುವ ಗುತ್ತಿಗೆ ಕಾರ್ಮಿಕರಿಗೆ ಖಾಯಂ ನೌಕರರಂತೆ ಸಮಾನ ವೇತನ ಮತ್ತು ಸವಲತ್ತುಗಳನ್ನು ಕಡ್ಡಾಯವಾಗಿ ನೀಡಬೇಕು ಎಂಬ ಸುಪ್ರೀಂ ಕೋರ್ಟ್ನ ತೀರ್ಮಾನವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಮಾಸಿಕ ಕನಿಷ್ಠ ಪಿಂಚಣಿ 6,000 ರೂ.ನ್ನು ಬೆಲೆ ಏರಿಕೆಗೆ ಅನುಗುಣವಾಗಿ ಗ್ರಾಹಕ ಬೆಲೆ ಸೂಚ್ಯಾಂಕಕ್ಕೆ ಹೊಂದಿಸಲಾದ ತುಟ್ಟಿಭತ್ತೆ ಸಹಿತ ಎಲ್ಲರಿಗೂ ಖಾತ್ರಿಪಡಿಸಬೇಕು. ಕಾರ್ಮಿಕ ವಿರೋಧಿಯಾದ ಮತ್ತು ಮಾಲಕರ ಪರವಾಗಿರುವ ಕಾರ್ಮಿಕ ಕಾನೂನುಗಳ ತಿದ್ದುಪಡಿಯನ್ನು ನಿಲ್ಲಿಸಬೇಕು. ಈಗಿರುವ ಕಾರ್ಮಿಕ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ದುಡಿಯುವ ಸ್ಥಳದಲ್ಲಿ ಮಹಿಳಾ ಕಾರ್ಮಿಕರಿಗೆ ಲೈಂಗಿಕ ಕಿರುಕುಳವನ್ನು ತಡೆಗಟ್ಟುವ ಶಾಸನವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ರಾಜಕೀಯದಲ್ಲಿ ಮಹಿಳೆಯರ ಪಾಲ್ಗೊಳ್ಳುಇಕೆ ಹೆಚ್ಚಿಸಲು ಶಾಸನ ಸಭೆಗಳಲ್ಲಿ ಶೇ.33 ಮೀಸಲಾತಿ ಶಾಸನ ಅಂಗೀಕರಿಸಬೇಕು. ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 300 ದಿನಗಳ ಕಾಲ ಕೆಲಸ ಒದಗಿಸಬೇಕು. ಮಾನವರಿಂದ ಶೌಚಾಲಯ ಶುಚಿಗೊಳಿಸುವ ಅಮಾನುಷ ಪದ್ಧತಿಯನ್ನು ತಡೆಗಟ್ಟಲು ಕಟ್ಟುನಿಟ್ಟಾದ ಕ್ರಮಕೈಗೊಳ್ಳಬೇಕು. ಒಳಚರಂಡಿ ಕೆಲಸ ಮಾಡುವಾಗ ಮೃತಪಟ್ಟ ಕಾರ್ಮಿಕರ ಕುಟುಂಬದಕ್ಕೆ ಸುಪ್ರೀಂಕೋರ್ಟ್ ತೀರ್ಪಿನಂತೆ ಸೂಕ್ತ ಪರಿಹಾರ ನೀಡಬೇಕು. 12ನೇ ತರಗತಿಯವರೆಗೆ ಎಲ್ಲಾ ಮಕ್ಕಳಿಗೂ ಉಚಿತ ಶಿಕ್ಷಣವನ್ನು ತಾಂತ್ರಿಕ ಶಿಕ್ಷಣ ಸಹಿತ ನೀಡಬೇಕು. ಶಿಕ್ಷಣಕ್ಕೆ ಜಿ.ಡಿ.ಪಿ.ಯ ಶೇ.10 ಬಜೆಟ್ ಹಣ ಮೀಸಲಿಡಬೇಕು. ಸರ್ವರಿಗೂ ಉಚಿತ ಆರೋಗ್ಯ ಸೇವೆ ಒದಗಿಸಬೇಕು. ಆರೋಗ್ಯ ಸವಲತ್ತಿಗಾಗಿ ಸರಕಾರವು ವೆಚ್ಚ ಮಾಡುತ್ತಿರುವ ಹಣದ ಪ್ರಮಾಣವನ್ನು ಜಿ.ಡಿ.ಪಿ.ಯ ಶೇ.5ಕ್ಕೆ ಏರಿಸಬೇಕು. ಸಂವಿಧಾನದ ಸೂಕ್ತ ತಿದ್ದುಪಡಿ ಮೂಲಕ ಉದ್ಯೋಗದ ಹಕ್ಕನ್ನು ಮೂಲಭೂತ ಹಕ್ಕನ್ನಾಗಿಸಬೇಕು ಇತ್ಯಾದಿಯನ್ನು ಸನ್ನದಿನಲ್ಲಿ ಸೇರಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಿಐಟಿಯು ದ.ಕ.ಜಿಲ್ಲಾಧ್ಯಕ್ಷ ಜೆ. ಬಾಲಕೃಷ್ಣ ಶೆಟ್ಟಿ, ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ವಿ. ರಾವ್, ಜಿಲ್ಲಾ ಕಾರ್ಯದರ್ಶಿ ಕರುಣಾಕರ್, ಜಿಲ್ಲಾ ಉಪಾಧ್ಯಕ್ಷ ಸೀತಾರಾಮ್ ಬೆರಿಂಜ ಉಪಸ್ಥಿತರಿದ್ದರು.