ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಮಿಥುನ್ ರನ್ನು ಗೆಲ್ಲಿಸಿ: ಡಿವೈಎಫ್ಐ ಕರೆ
ಮಂಗಳೂರು, ಎ.12: ನರೇಂದ್ರ ಮೋದಿ ಸರಕಾರದ ಐದು ವರ್ಷಗಳ ಆಡಳಿತ ದೇಶವನ್ನು ಎಲ್ಲಾ ರಂಗಗಳಲ್ಲಿಯೂ ಹಿಂದಕ್ಕೆ ತಳ್ಳಿದೆ. ಕಾರ್ಪೊರೇಟ್ ಪರವಾದ ಆರ್ಥಿಕತೆಯೊಂದಿಗೆ ಮತೀಯ ದ್ವೇಷದ ಕೋಮುವಾದದ ಅಜೆಂಡಾವನ್ನು ಜೋಡಿಸಿ ನಡೆಸಿದ ಆಡಳಿತ ನೀತಿಯಿಂದ ದೇಶದ ಭವಿಷ್ಯವೇ ಅಪಾಯಕ್ಕೆ ಸಿಲುಕಿದೆ. ಲೋಕಸಭಾ ಚುನಾವಣೆಯು ಪ್ರಧಾನಿ ಆಯ್ಕೆಗಾಗಿ ನಡೆಯುವಂತದ್ದಲ್ಲ. ಅದು ಸಂಸದರ ಆಯ್ಕೆಗಾಗಿ ನಡೆಯುವ ಚುನಾವಣೆಯಾಗಿದೆ. ಕೇಂದ್ರದಲ್ಲಿ ಸುಭದ್ರ ಹಾಗೂ ಪ್ರಬಲ ಜಾತ್ಯತೀತ ಪಕ್ಷಗಳು ಅಧಿಕಾರದ ಗದ್ದುಗೆ ಹಿಡಿಯುವ ಸಲುವಾಗಿ ದ.ಕ.ಲೋಕಸಭಾ ಕ್ಷೇತ್ರಕ್ಕೆ ನಡೆಯುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ರನ್ನು ಸೋಲಿಸಬೇಕು ಮತ್ತು ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಮಿಥುನ್ ಅವರನ್ನು ಗೆಲ್ಲಿಸಬೇಕು ಎಂದು ಡಿವೈಎಫ್ಐ ದ.ಕ.ಜಿಲ್ಲಾ ಸಮಿತಿ ಕರೆ ನೀಡಿದೆ.
ಶುಕ್ರವಾರ ನಗರದ ಖಾಸಗಿ ಹೊಟೇಲಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಝ್ ರೈತರು, ಕಾರ್ಮಿಕರ ಬದುಕು ಶೋಚನೀಯವಾಗಿದ್ದರೆ ನಿರುದ್ಯೋಗದ ಪ್ರಮಾಣ ನಾಲ್ಕು ದಶಕದಲ್ಲೇ ಅತ್ಯಂತ ಹೆಚ್ಚಾಗಿದೆ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಯ ಭರವಸೆಯನ್ನು ನಂಬಿ ಕಳೆದ ಚುನಾವಣೆಯಲ್ಲಿ ನರೇಂದ್ರ ಮೋದಿಯವರನ್ನು ಬೆಂಬಲಿಸಿದ್ದ ದೇಶದ ಯುವಜನತೆ ಇಂದು ಉದ್ಯೋಗ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಅಂತಹ ಹತಾಶ ಯುವಜನರನ್ನು ಧರ್ಮ, ದೇಶಭಕ್ತಿಯ ಹುಸಿ ಉನ್ಮಾದದಲ್ಲಿ ಕೆಡವಿ ಬಿಜೆಪಿ ಮತ್ತೊಮ್ಮೆ ಚುನಾವಣೆಯಲ್ಲಿ ಗೆಲುವು ಸಾಧಿಸಲು ಹೊರಟಿದೆ. ಯುವಜನತೆ ಯಾವ ಕಾರಣಕ್ಕೂ ಇಂತಹ ದಿಕ್ಕು ತಪ್ಪಿಸುವ ಸುಳ್ಳಿನ ಪ್ರಚಾರಗಳಿಗೆ ಬಲಿ ಬೀಳದೆ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯ ವಿರುದ್ಧ ಮತ ಚಲಾಯಿಸಬೇಕು ಎಂದರು.
ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ನೇರವಾಗಿ ಪ್ರಧಾನಿ ಆಯ್ಕೆಗೆ ಚುನಾವಣೆ ನಡೆಯುವುದಿಲ್ಲ. ವ್ಯಕ್ತಿ ಆಧಾರಿತ ಚುನಾವಣೆ ಕೂಡ ಅಪಾಯಕಾರಿಯಾಗಿದೆ. ಹಾಗಾಗಿ ಬಿಜೆಪಿಯು ನರೇಂದ್ರ ಮೋದಿಯನ್ನು ಮುಂದಿಟ್ಟು ಮತ ಯಾಚಿಸುವುದು ಅಕ್ಷಮ್ಯವಾಗಿದೆ. ಈ ಚುನಾವಣೆಯು ಸಂಸದರ ಆಯ್ಕೆಯಾಗಿ ನಡೆಯುವ ಚುನಾವಣೆ ಎಂಬುದನ್ನು ಮನಗಂಡು ಯುವ ಮತದಾರರ ಸಹಿತ ಎಲ್ಲರೂ ಪ್ರಬಲ ಜಾತ್ಯತೀತ ಶಕ್ತಿಗಳ ಗೆಲುವಿಗೆ ಮುನ್ನುಡಿ ಬರೆಯಬೇಕು ಎಂದು ಬಿ.ಕೆ. ಇಮ್ತಿಯಾಝ್ ಕರೆ ನೀಡಿದರು.
ಕೊಲ್ಲಿ ರಾಷ್ಟ್ರಗಳಲ್ಲಿ ಉದ್ಯೋಗವಕಾಶದ ಕೊರತೆ,ಆರ್ಥಿಕ ಹಿಂಜರಿತಗಳಿಂದ ದ.ಕ.ಜಿಲ್ಲೆಯಲ್ಲೂ ನಿರುದ್ಯೋಗದ ಸಮಸ್ಯೆ ವ್ಯಾಪಕವಾಗಿದೆ. ಸಂಸದ ನಳಿನ್ ಕುಮಾರ್ ಕಟೀಲ್ ಸ್ಥಳೀಯವಾಗಿ ಉದ್ಯೋಗ ಸೃಷ್ಟ್ಟಿಸುವ ಉದ್ಯಮ, ಕೈಗಾರಿಕೆಗಳನ್ನು ಸ್ಥಾಪಿಸುವ ಕನಿಷ್ಟ ಪ್ರಯತ್ನವನ್ನೂ ಮಾಡಿಲ್ಲ. ಉದ್ಯೋಗವನ್ನೇ ಸೃಷ್ಟಿಸದ, ಪರಿಸರಕ್ಕೆ ಮಾರಕವಾದ ಎಂಆರ್ಪಿಎಲ್ ವಿಸ್ತರಣೆಗಷ್ಟೇ ಅವರು ಗಮನ ನೀಡಿದ್ದಾರೆ. ಎಸ್ಇಝಡ್ಗೆ ಭೂಮಿ ನೀಡಿದ ಕುಟುಂಬಗಳ ಅರ್ಹರಲ್ಲಿ ಹೆಚ್ಚಿನವರಿಗೆ ಈವರೆಗೂ ನೇಮಕಾತಿ ನಡೆಯದ ಕಾರಣ ಅವರ ಬದುಕೂ ಅತಂತ್ರವಾಗಿದೆ. ಮೀನುಗಾರಿಕೆ, ಪ್ರವಾಸೋದ್ಯಮ ಮುಂತಾದ ಸಾಂಪ್ರದಾಯಿಕ ಕ್ಷೇತ್ರಗಳಲ್ಲಿಯೂ ಉದ್ಯೋಗ ಸೃಷ್ಟಿಸುವ ಅಪಾರ ಅವಕಾಶಗಳಿದ್ದರೂ ಕೂಡ ಸಂಸದ ನಳಿನ್ರ ನಿರಾಸಕ್ತಿ, ದೂರದೃಷ್ಟ್ಟಿಯ ಕೊರತೆ ಯಿಂದ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಯಾಗಿಲ್ಲ. ಯುವಜನರು ಉದ್ಯೋಗ ಅವಕಾಶಗಳಿಲ್ಲದೆ ಪರದಾಡುತ್ತಿದ್ದಾರೆ. ಇಂತಹ ಅಸಹಾಯಕ ಯುವಕರನ್ನು ಮತೀಯ ಭಾವನೆ ಕೆರಳಿಸಿ ದಾರಿ ತಪ್ಪಿಸಿದ್ದೇ ನಳಿನ್ರ ಸಾಧನೆ ಎಂದರು.
ಸುದ್ದಿಗೋಷ್ಠಿಯಲ್ಲಿ ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಜೊತೆ ಕಾರ್ಯದರ್ಶಿ ನಿತಿನ್ ಕುತ್ತಾರ್, ಕೋಶಾಧಿಕಾರಿ ಮನೋಜ್ ವಾಮಂಜೂರು, ಉಪಾಧ್ಯಕ್ಷ ನವೀನ್ ಕೊಂಚಾಡಿ, ರಫೀಕ್ ಹರೇಕಳ, ರಝಾಕ್ ಮೊಂಟೆಪದವು ಉಪಸ್ಥಿತರಿದ್ದರು.