ಮಂಗಳೂರು: ‘ಇಂಡಿಯನ್ ಡಿಸೈನ್ ಸ್ಕೂಲ್’ ಶುಭಾರಂಭ
ಮಂಗಳೂರು, ಎ.12: ನಗರದ ಅತ್ತಾವರ-ಫಳ್ನೀರ್ನ ಎಸ್.ಎಲ್. ಮಥಾಯಸ್ ರಸ್ತೆಯಲ್ಲಿನ ಐವರಿ ಎನ್ಕ್ಲೇವ್ನ ಮೂರನೇ ಮಹಡಿಯಲ್ಲಿ ‘ಇಂಡಿಯನ್ ಡಿಸೈನ್ ಸ್ಕೂಲ್’ (ಐಡಿಎಸ್)ನ್ನು ಎ.ಕೆ.ಗ್ರೂಪ್ನ ಚೆಯರ್ಮ್ಯಾನ್ ಎಂ. ಅಹ್ಮದ್ ಅವರು ರಿಬ್ಬನ್ ಕತ್ತರಿಸುವ ಮೂಲಕ ಶುಕ್ರವಾರ ಲೋಕಾರ್ಪಣೆಗೊಳಿಸಿದರು.
ಇಂಡಿಯನ್ ಡಿಸೈನ್ ಸ್ಕೂಲ್ ಉದ್ಘಾಟನೆ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞಿ, ಎ.ಕೆ.ಗ್ರೂಪ್ ವತಿಯಿಂದ ಚಾಲನೆ ನೀಡಲಾದ ‘ಇಂಡಿಯನ್ ಡಿಸೈನ್ ಸ್ಕೂಲ್’ನಲ್ಲಿ ಸಮಾಜ, ದೇಶ, ಜಗತ್ತಿಗೆ ಉಪಕಾರಿಯಾಗುವ ತಲೆಮಾರು ಹೊರಬರಲಿ. ಪ್ರವಾದಿ ಮುಹಮ್ಮದ್ (ಸ) ಅವರು ಕುರ್ಆನ್ನಲ್ಲಿ ಎಲ್ಲಾ ವಿಷಯಗಳ ಬಗ್ಗೆ ತಿಳಿಸಿದ್ದಾರೆ. ಮೊದಲ ಪ್ರಾಶಸ್ತ್ಯವನ್ನು ‘ದೇವ’ನ ಬಗ್ಗೆ ಪ್ರಸ್ತಾಪಿಸಿದ್ದು, ಎರಡನೆದ್ದು ಶಿಕ್ಷಣಕ್ಕೆ ಸಂಬಂಧಿಸಿದ್ದಾಗಿದೆ. ಶಿಕ್ಷಣದ ಮೂಲಕ ಇಲ್ಮ್ (ಅರಿವು) ಪಡೆಯಬೇಕು. ಜ್ಞಾನವುಳ್ಳವರನ್ನು ಜಗತ್ತು ಅನುಸರಿಸುತ್ತದೆ ಎಂದು ಹೇಳಿದರು.
ಶಿಕ್ಷಣವಂತರಿಂದಲೇ ಇಂದು ದೇಶದಲ್ಲಿ ಅಶಾಂತಿ, ಅಸಹಿಷ್ಣುತೆ ಉದ್ಭವಿಸುತ್ತಿದೆ. ಎಲ್ಲ ಅರಿವು ಉಳ್ಳವರೇ ಕೋಮುಗಲಭೆಗಳನ್ನು ಉದ್ವಿಗ್ನಗೊಳಿಸುತ್ತಿ ದ್ದಾರೆ. ಹೃದಯಗಳನ್ನು ಒಡೆಯುವವರೂ ಶಿಕ್ಷಣವಂತರೇ ಆಗಿದ್ದಾರೆ. ಇದು ಅತ್ಯಂತ ಕಳವಳಕಾರಿ ವಿಷಯವಾಗಿದೆ. ಹಾಗಾಗಿ ಶಿಕ್ಷಣ ಸಂಸ್ಥೆಗಳು ಶೈಕ್ಷಣಿಕ ವಿಷಯಗಳ ಜತೆ ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳನ್ನು ರೂಪಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಪ್ರವಾದಿಯು ಜಗತ್ತಿನಲ್ಲಿ ತನ್ನ ಅನುಯಾಯಿಗಳ ಬೃಹತ್ ಗುಂಪನ್ನು ಬೆಳೆಸಿದ್ದಾರೆ. ಶಿಕ್ಷಣವಂತರು ಎಲ್ಲ ರೀತಿಯಲ್ಲೂ ಅರ್ಹರು, ಸಮರ್ಥರಾಗಿದ್ದಾರೆ. ಕಲಿಕೆ ನಿರಂತರ ಪ್ರಕ್ರಿಯೆ. ಶಿಕ್ಷಣವಂತರು ಜಗತ್ತಿನ ನಾಯಕರಾಗುತ್ತಾರೆ ಎಂದು ಪ್ರವಾದಿ ಪ್ರತಿಪಾದಿಸಿರುವುದಾಗಿ ಅವರು ತಿಳಿಸಿದರು.
ನಿವೃತ್ತ ಐಜಿಪಿ ಪಿ.ಎಚ್.ರಾಣೆ ಮಾತನಾಡಿ, ವಿದ್ಯೆ, ಅರಿವು ಇಲ್ಲದ ಮನುಷ್ಯನಿಲ್ಲ. ಮನುಷ್ಯನಿಲ್ಲದ ಸಮಾಜವಿಲ್ಲ. ವಿದ್ಯಾದಾನ ಅತ್ಯಂತ ಕಠಿಣವಾಗಿದೆ. ಈ ಬಗ್ಗೆ ಭಾಷಣಗಳನ್ನು ಮಾಡಲು ಸರಳ. ಆದರೆ ಅದನ್ನು ಕಾರ್ಯರೂಪಕ್ಕೆ ತರುವುದು ಕಠಿಣವಾಗಿದೆ. ವಾಣಿಜ್ಯ ಉದ್ದೇಶಗಳಿಂದಲೇ ಇಂದು ಶಿಕ್ಷಣ ಸಂಸ್ಥೆ ಗಳು ಹುಟ್ಟಿಕೊಳ್ಳುತ್ತಿವೆ. ಇಂತಹ ಸಂದರ್ಭದಲ್ಲಿ ‘ಇಂಡಿಯನ್ ಡಿಸೈನ್ ಸ್ಕೂಲ್’ ಭರವಸೆಯ ಬೆಳಕಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಖತೀಬ್ ತಯ್ಯೀಬ್ ದುಆಗೈದರು. ಈ ಸಂದರ್ಭ ಐಡಿಎಸ್ನ ಚೆಯರ್ಮ್ಯಾನ್ ಹಾಗೂ ವಿನ್ಯಾಸಕಾರ ಮುಹಮ್ಮದ್ ನಿಸಾರ್, ಐಡಿಎಸ್ನ ನಿರ್ದೇಶಕಿ ನಫೀಸಾ ಶಿರಿನ್, ಎ.ಕೆ.ಗ್ರೂಪ್ ಆಫ್ ಕಂಪೆನೀಸ್ನ ವ್ಯವಸ್ಥಾಪಕ ನಿರ್ದೇಶಕ ಎ.ಕೆ.ನಿಯಾಝ್, ವಿಶ್ವಾಸ್ ಬಾವ ಗ್ರೂಪ್ನ ಅಬ್ದುಲ್ ರವೂಫ್ ಪುತ್ತಿಗೆ, ಆಝಾದ್ ಗ್ರೂಪ್ನ ಮನ್ಸೂರ್ ಅಹ್ಮದ್, ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ನ ಅಧ್ಯಕ್ಷ ಎಸ್.ಎಂ. ರಶೀದ್ ಹಾಜಿ ಮತ್ತಿತರರು ಉಪಸ್ಥಿತರಿದ್ದರು.
ಬಿಲಾಲ್ ರಹೀಫ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.