ಮಲೆನಾಡು ಉಳಿಸುವ ಭರವಸೆ ನೀಡುವವರಿಗೆ ಬೆಂಬಲ: ಮಲೆನಾಡು ಸಂರಕ್ಷಣಾ ವೇದಿಕೆ ನಿರ್ಧಾರ
ಉಡುಪಿ, ಎ.12: ಮಲೆನಾಡಿನ ಜ್ವಲಂತ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಅವುಗಳನ್ನು ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಸೇರಿಸುವ ಹಾಗೂ ಮಲೆನಾಡಿಗೆ ಸ್ಪಷ್ಟ ಭರವಸೆಯನ್ನು ನೀಡುವ ಅಭ್ಯರ್ಥಿಗಳನ್ನು ಮಾತ್ರ ಲೋಕಸಭಾ ಚುನಾವಣೆಯಲ್ಲಿ ಬೆಂಬಲಿಸುವ, ಉಳಿದವರನ್ನು ವಿರೋಧಿಸುವ ನಿರ್ಧಾರವನ್ನು ಚಿಕ್ಕಮಗಳೂರಿನ ಮಲೆನಾಡು ಸಂರಕ್ಷಣಾ ವೇದಿಕೆ ಕೈಗೊಂಡಿದೆ ಎಂದು ವೇದಿಕೆಯ ಅಧ್ಯಕ್ಷ ಹಾಗೂ ಪರಿಸರ ಹೋರಾಟಗಾರ ಕಲ್ಕುಳಿ ವಿಠಲ ಹೆಗ್ಡೆ ಹೇಳಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲೆನಾಡಿನ ಸಮಸ್ಯೆಗಳ ಕುರಿತು ಚರ್ಚಿಸಲು ಈ ಬಾರಿ ಉಡುಪಿ-ಚಿಕ್ಕ ಮಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಎಲ್ಲಾ ಅಭ್ಯರ್ಥಿಗಳಿಗೆ ನಾವು ಮನವಿ ಮಾಡಿದ್ದರೂ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ರನ್ನು ಹೊರತು ಪಡಿಸಿ ಉಳಿದ ಯಾವುದೇ ಪಕ್ಷದ ಪ್ರತಿನಿಧಿಗಳು ಸಮಾಲೋಚನೆಗೆ ಆಗಮಿಸಿಲ್ಲ ಎಂದವರು ಆಕ್ರೋಶ ವ್ಯಕ್ತಪಡಿಸಿದರು.
ಮಲೆನಾಡಿನ ಅಭಿವೃದ್ಧಿ ಮತ್ತು ಕೃಷಿ ಚಟುವಟಿಕೆಗಳನ್ನು ನಿರ್ಬಂಧಿಸುವ ಕಸ್ತೂರಿ ರಂಗನ್ ವರದಿ ಹಾಗೂ ಅರಣ್ಯ ವಾಸಿಗಳು ಮತ್ತು ಆದಿವಾಸಿಗಳ ಕಾಯ್ದೆ ವಂಚಿತರನ್ನು ಅರಣ್ಯದಿಂದ ಹೊರಹಾಕಬೇಕೆಂಬ ಸುಪ್ರೀಂ ಕೋರ್ಟಿನ ಇತ್ತೀಚಿನ ತೀರ್ಪು ನಮಗೆ ತೂಗುಕತ್ತಿಯಂತಿದೆ. ಇವುಗಳ ಬಗ್ಗೆ ನಮ್ಮ ಜನಪ್ರತಿನಿಧಿ ಗಳು ಸ್ಪಷ್ಚವಾದ ನಿಲುವು ತಾಳಬೇಕಿದೆ ಎಂದು ಕಲ್ಕುಳಿ ನುಡಿದರು.
ರಾಜ್ಯ ಸರಕಾರ ಕಸ್ತೂರಿರಂಗನ್ ವರದಿಯನ್ನು ತಿರಸ್ಕರಿಸಿದ್ದರೂ, ಬಿಜೆಪಿ ಸಂಸದ ಡಾ.ಪ್ರಭಾಕರ ಕೋರೆ ನೇತೃತ್ವದ ಕೇಂದ್ರ ಸರಕಾರದ ಭರವಸೆ ಸಮಿತಿಯು ಮಲೆನಾಡಿನ 59,000 ಚದರ ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸಿ ಎಲ್ಲಾ ಅಭಿವೃದ್ಧಿ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸುವಂತೆ ಶಿಫಾರಸ್ಸು ಮಾಡಿದೆ ಎಂದವರು ಹೇಳಿದರು.
ಮಲೆನಾಡಿನಲ್ಲಿ ರೈತರು ಹಾಗೂ ಆದಿವಾಸಿಗಳು ಅನುಭವಿಸುತ್ತಿರುವ ಸಮಸ್ಯೆಗಳನ್ನು ವಿವರಿಸಿದ ಅವರು, ಇದು ಇಲ್ಲಿನ ನಿವಾಸಿಗಳನ್ನು ಕಂಗೆಡಿಸಿದೆ ಎಂದರು. ಕಸ್ತೂರಿ ರಂಗನ್ ವರದಿಗೆ ವೇದಿಕೆಯ ವತಿಯಿಂದ 10,000ಕ್ಕೂ ಅಧಿಕ ಲಿಖಿತ ಆಕ್ಷೇಪಗಳನ್ನು ಸಲ್ಲಿಸಿದ್ದೇವೆ. ಆದರೂ ಸರಕಾರ ಅವುಗಳನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದರು.
ಜನರ ಉಪಯೋಗಕ್ಕೆ ಬಳಕೆಯಾಗುವ ಅರಣ್ಯವನ್ನು ಚಿಕ್ಕಮಗಳೂರು ಜಿಲ್ಲೆ ಯೊಂದರಲ್ಲೇ 1.38 ಲಕ್ಷ ಎಕರೆ ಪ್ರದೇಶವನ್ನು ಡೀಮ್ಡ್ ಅರಣ್ಯವೆಂದು ಘೋಷಿಸಿ ಅದರೊಳಗೆ ವಾಸಿಸುವ ಸಾವಿರಾರು ಮಂದಿಯ ಬದುಕಿಗೆ ಕಂಟಕ ಉಂಟಾಗಿದೆ. ಜನರ ಉಪಯೋಗಕ್ಕೆ ಬಳಕೆಯಾಗುವ ಅರಣ್ಯವನ್ನು ಚಿಕ್ಕಮಗಳೂರು ಜಿಲ್ಲೆ ಯೊಂದರಲ್ಲೇ 1.38 ಲಕ್ಷ ಎಕರೆ ಪ್ರದೇಶವನ್ನು ಡೀಮ್ಡ್ ಅರಣ್ಯವೆಂದು ಘೋಷಿಸಿ ಅದರೊಳಗೆ ವಾಸಿಸುವ ಸಾವಿರಾರು ಮಂದಿಯ ಬದುಕಿಗೆ ಕಂಟಕ ಉಂಟಾಗಿದೆ. ರಾಷ್ಟ್ರೀಯ ಉದ್ಯಾನವನದ ಸುತ್ತಮುತ್ತಲಿನ 10ಕಿ.ಮೀ..ವ್ಯಾಪ್ತಿಯ ಜನವಸತಿ ಪ್ರದೇಶದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯದಂತೆ ನಿರ್ಬಂಧ ವಿಧಿಸಲಾಗುತ್ತಿದೆ. ಇದರಿಂದ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಶೃಂಗೇರಿ, ಕಾರ್ಕಳ, ಕುಂದಾಪುರ, ಹೊರನಾಡು, ಬೆಳ್ತಂಗಡಿ ಮುಂತಾದ ಅನೇಕ ಮಲೆನಾಡು ಪ್ರದೇಶಗಳು ತೊಂದರೆಗೊಳಗಾಗಿವೆ.
ಚಿಕ್ಕಮಗಳೂರು ಜಿಲ್ಲೆಯನ್ನು ಕರಾವಳಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯನ್ನು ನಾಲ್ಕು ಅಡಿ ಅಗಲ ಮಾಡಲು ಬಿಡದೆ ಸುಗಮ ಸಂಚಾರಕ್ಕೆ ಅಡ್ಡಿ ಪಡಿಸಲಾಗುತ್ತಿದೆ. ಇದರಿಂದ ಪ್ರತಿವರ್ಷ ಸಾಕಷ್ಟು ಸಾವುನೋವುಗಳಾ ಗುತ್ತಿವೆ. ಕುದುರೆಮುಖ ಕಂಪೆನಿಗೆ ನೀಡಿದ್ದಗ 1620 ಎಕರೆ ಕಂದಾಯ ಜಾಗವನ್ನು ದಾಂಡೇಲಿಯ ಅಂಕೋಲ ರೈಲ್ವೆ ಯೋಜನೆಗೆ ಪರ್ಯಾಯ ಜಾಗವಾಗಿ ನೀಡಲಾಗಿದೆ. ಇದರಿಂದ ಚಿಕ್ಕಮಗಳೂರು ಜಿಲ್ಲೆ ಅಭಿವೃದ್ಧಿಗೆ ಕಂದಾಯ ಭೂಮಿಯೇ ಇಲ್ಲದಂತಾಗಿದೆ.
ಮಲೆನಾಡಿನ ಜನರಿಗೆ ಕೃಷಿ ಚಟುವಟಿಕೆಗೆ ಒಂದು ಎಕರೆಯನ್ನು ಮಾಡದೇ, ಅಭಯಾರಣ್ಯ ರಕ್ಷಿತಾರಣ್ಯ, ಜೈವಿಕ ಉದ್ಯಾನ, ಔಷಧಿವನ, ಹುಲಿ ಕಾರಿಡಾರ್, ಪರಿಸರ ಸೂಕ್ಷ್ಮ ಪ್ರದೇಶ, ರಾಷ್ಟ್ರೀಯ ಉದ್ಯಾನವನ ಇತ್ಯಾದಿ ಹೆಸರಿನಲ್ಲಿ ವಿದೇಶಿ ಪರಿಸರವಾದಿಗಳ ಯೋಜನೆಗಳಿಗೆ ಆಹುತಿ ನೀಡಲಾಗು ತ್ತಿದೆ. ಕೇಂದ್ರ ಸರಕಾರ ಈ ಜನವಿರೋಧಿ ಯೋಜನೆಗಳಿಗೆ ಅನುಮೋದನೆ ನೀಡುತ್ತಿದೆ.
ಕೇಂದ್ರ ಸರಕಾರದ ಈ ಎಲ್ಲಾ ಯೋಜನೆಗಳಿಂದ ಮಲೆನಾಡಿನ ಜನತೆ ಸಂಕಷ್ಟಕ್ಕೀಡಾಗಿದ್ದಾರೆ.ಈ ದಿಶೆಯಲ್ಲಿ ಮುಂದಿನ ಚುನಾವಣೆ ಮಲೆನಾಡಿನ ಭವಿಷ್ಯವನ್ನು ನಿರ್ಧರಿಸುವ ಚುನಾವಣೆಯಾಗಿದೆ. ಹೀಗಾಗಿ ಮಲೆನಾಡು ಉಳಿಯಲು ಈ ಚುನಾವಣೆಯಲ್ಲಿ ಸ್ಪರ್ಧಿಸಿರುವ ಎಲ್ಲಾ ಅಭ್ಯರ್ಥಿಗಳೂ ಹಾಗೂ ಪಕ್ಷಗಳು ಈ ವಿಷಯವನ್ನು ಪ್ರಮುಖ ಪ್ರಶ್ನೆಯಾಗಿ ಕೈಗೆತ್ತಿಕೊಂಡು ಹೋರಾಟದ ಸ್ಪಷ್ಟ ಭರವಸೆ ನೀಡಬೇಕೆಂದು ವೇದಿಕೆ ಒತ್ತಾಯಿಸುತ್ತದೆ ಎಂದು ಕಲ್ಕುಳಿ ವಿಠಲ ಹೆಗ್ಡೆ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಚಿಕ್ಕಮಗಳೂರು ಜಿಲ್ಲಾ ಆದಿವಾಸಿ ಗಿರಿಜನ ಹಿತರಕ್ಷಣಆ ಸಮಿತಿಯ ಪ್ರಧಾನ ಕಾರ್ಯದರ್ಶಿ ಮರಿಯಪ್ಪ, ಮೂಡಿಗೆರೆ ತಾಲೂಕು ನೆಲ್ಲಿಬೀಡು ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ ಸುರೇಶ್ ಭಟ್, ಮಲೆನಾಡು ಸಂರಕ್ಷಣಾ ವೇದಿಕೆ ಶೃಂಗೇರಿಯ ಕಾರ್ಯದರ್ಶಿ ವೆಂಕಟೇಶ್, ವೇದಿಕೆಯ ಕೊಪ್ಪದ ಮಣಿಶೀಲನ್, ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ರಾಮು ಕೌಳಿ ಮತ್ತು ನಜೀರ್ ಉಪಸ್ಥಿತರಿದ್ದರು.