ಶಾಂತಿ, ಸಾಮರಸ್ಯ - ದೇಶದ ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ನ್ಯಾ. ನೂರುದ್ದೀನ್ ಸಾಲ್ಮರ
ಪುತ್ತೂರು: ಅಧಿಕಾರದ ಆಸೆಯಿಂದ ಜಾತಿ, ಧರ್ಮಗಳ ಹೆಸರಿನಲ್ಲಿ ದ್ವೇಷವನ್ನು ಸೃಷ್ಠಿಸುವ ವಾತಾವರಣಗಳು ನಡೆಯುತ್ತಿದ್ದು, ದೇಶದಲ್ಲಿ ಅಸಹಿಷ್ಣುತೆ ಹೆಚ್ಚಾಗುತ್ತಿದೆ. ಇವುಗಳನ್ನು ತಡೆದು ಸಾಮರಸ್ಯದ ಜೀವನ ಸಾಗಿಸಲು ಅನುಕೂಲಕರವಾದ ವಾತಾವರಣವನ್ನು ಕಾಂಗ್ರೆಸ್ ಪಣ ತೊಟ್ಟಿದೆ. ಈ ಹಿನ್ನೆಲೆಯಲ್ಲಿ ಶಾಂತಿ, ಸಾಮರಸ್ಯ ಮತ್ತು ದೇಶದ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಕೆಪಿಸಿಸಿ ಅಲ್ಪ ಸಂಖ್ಯಾತರ ಸಮಿತಿ ಸಂಯೋಜಕ ನ್ಯಾಯವಾದಿ ನೂರುದ್ದೀನ್ ಸಾಲ್ಮರ ತಿಳಿಸಿದರು.
ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅಸಹಿಷ್ಣುತೆ ಅಧಿಕವಾಗಿದೆ. ಕೇಂದ್ರದ ಸಚಿವರು, ಸಂಸದರು ಕೋಮು ಧ್ವೇಷವನ್ನು ಸಾರುತ್ತಿದ್ದಾರೆ. ದೇಶದ ಅಭಿವೃದ್ಧಿಗೆ ಬದಲಾಗಿ ಕೋಮು ಧ್ವೇಷದ ಹೆಸರಿನಲ್ಲಿ ಸಮಾಜವನ್ನು ಒಡೆಯಲಾಗುತ್ತಿದೆ. ಸಮಾಜದಲ್ಲಿ ಅಶಾಂತಿಯ ಪರಿಣಾಮದಿಂದ ಅಭಿವೃದ್ಧಿ ಕುಂಠಿತವಾಗುತ್ತಿದೆ. ಸಂವಿಧಾನವನ್ನು ಬದಲಾಯಿಸುವ ಮಾತುಗಳೂ ಸಂಸದರಿಂದ ಕೇಳಿ ಬರುತ್ತಿದೆ. ದೇಶದ ಆರ್ಥಿಕ ಪರಿಸ್ಥಿತಿ ಚಿಂತಾಜನಕವಾಗಿದೆ. ದೇಶದ ಸಂವಿಧಾನವನ್ನು ಉಳಿಸುವುದು ಮತದಾರರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಜಾತ್ಯಾತೀತ ನಿಲುವಿನ ಮಿಥುನ್ ರೈ ಅವರನ್ನು ಈ ಬಾರಿ ಎಲ್ಲರೂ ಬೆಂಬಲಿಸಲಿದ್ದಾರೆ ಎಂದರು.
ಸಾಮರಸ್ಯ ಬಯಸುವವರು ಯಾವತ್ತೂ ಕೋಮುವಾದಿಗಳಾದ ಬಿಜೆಪಿ ಅಥವಾ ಎಸ್ಡಿಪಿಐಯ ಜೊತೆ ಹೋಗುವುದಿಲ್ಲ. ಈ ಎರಡೂ ಪಕ್ಷಗಳು ಸಮುದಾಯದ ಸಮಸ್ಯೆಗಳನ್ನು ವೈಭವೀಕರಿಸಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದೆ. ತ್ರಿವಳಿ ತಲಾಖ್ ವಿಚಾರದಲ್ಲಿ ಶರೀಯತ್ ಬೋರ್ಡ್ನ ಮಾಹಿತಿ ಪಡೆಯದೆ ಏಕಾಏಕಿ ಜಾರಿಗೊಳಿಸುವ ಮೂಲಕ ಮೋದಿ ಸರ್ಕಾರವು ಮುಸ್ಲಿಂ ಸಮುದಾಯದ ಮೇಲೆ ದಬ್ಬಾಳಿಕೆ ಮಾಡುತ್ತಿದೆ. ಓಟಿಗಾಗಿ ಮೋದಿಯವರು ಈ ಕಾನೂನು ಜಾರಿಗೊಳಿಸಲು ಮುಂದಾಗಿದ್ದಾರೆ ಎಂದು ಅವರು ಆರೋಪಿಸಿದರು.
ಎಸ್ಡಿಪಿಐಗೆ ಮುಸ್ಲಿಂ ಬೆಂಬಲವಿಲ್ಲ-ನಝೀರ್ ಮಠ
ಕೆಪಿಸಿಸಿ ಪ್ರಚಾರ ಸಮಿತಿ ಕಾರ್ಯದರ್ಶಿ ನಝೀರ್ ಮಠ ಅವರು ಮಾತನಾಡಿ ಚುನಾವಣೆಯ ಸಂದರ್ಭದಲ್ಲಿ ಮಾತ್ರ ಜಾತ್ಯಾತೀತ ಪಕ್ಷವಾದ ಕಾಂಗ್ರೆಸ್ ವಿರುದ್ಧ ಹೇಳಿಕೆ ನೀಡುತ್ತಿರುವ ಎಸ್ಡಿಪಿಐಗೆ ಜಿಲ್ಲೆಯಲ್ಲಿ ಮುಸ್ಲಿಂ ಸಮುದಾಯದ ಬೆಂಬಲವಿಲ್ಲ. ಬಿಜೆಪಿ, ಮೋದಿ, ನಳಿನ್ ವಿರುದ್ದ ಎಂದೂ ಮಾತನಾಡದ ಎಸ್ಡಿಪಿಐ ಪಕ್ಷದವರು ಮಿಥುನ್ ವಿರುದ್ಧ ಮಾತ್ರ ಮಾತನಾಡುತ್ತಿದ್ದಾರೆ. ಈ ಮೂಲಕ ನಳಿನ್ ಕುಮಾರ್ ಕಟೀಲ್ ಅವರಿಗ ಪರೋಕ್ಷ ಬೆಂಬಲ ನೀಡುತ್ತಿದ್ದಾರೆ. ಜಿಲ್ಲೆಯ ಮತದಾರರಿಗೆ ತಿಳುವಳಿಕೆಯಿದೆ. ಎಸ್ಡಿಪಿಐ ಕಾರ್ಯಕರ್ತರ ಹೊರತಾಗಿ ಇತರ ಯಾವುದೇ ಮತಗಳು ಅವರಿಗೆ ಸಿಗುವುದಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಅಲ್ಪ ಸಂಖ್ಯಾತ ವಿಭಾಗದ ಅಧ್ಯಕ್ಷ ನಿರ್ಮಲ್ ಕುಮಾರ್ ಜೈನ್, ಕರ್ನಾಟಕ ಪ್ರದೇಶ ಯುವಕ ಕಾಂಗ್ರೆಸ್ ಸಂಯೋಜಕ ಅಬ್ದುಲ್ ಸಮದ್ ಸೋಂಪಾಡಿ, ನವಾಝ್ ಕೆರೆಮೂಲೆ ಉಪಸ್ಥಿತರಿದ್ದರು.