ಮೋದಿ ಮುಕ್ತ ಭಾರತವಾದರೆ ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಲು ಸಾಧ್ಯ: ಬೋಜೇಗೌಡ
ಉಡುಪಿ, ಎ.13: ಈ ಬಾರಿಯ ಲೋಕಸಭಾ ಚುನಾವಣೆಯು ಪ್ರಜಾ ಪ್ರಭುತ್ವ ವ್ಯವಸ್ಥೆಯ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಪ್ರಜಾಪ್ರಭುತ್ವ ಉಳಿಯ ಬೇಕಾದರೆ ಮೋದಿ ಮುಕ್ತ ಭಾರತ ಆಗಬೇಕು. ಮೋದಿ ಮುಕ್ತ ದೇಶವಾದರೆ ಮಾತ್ರ ಭಾರತದಲ್ಲಿ ಪ್ರಜಾಪ್ರಭುತ್ವ ಉಳಿಯುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಜೆಡಿಎಸ್ ಮುಖಂಡ ಬೋಜೇಗೌಡ ಹೇಳಿದ್ದಾರೆ.
ಉಡುಪಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಡೀ ಜಿಲ್ಲೆಯ ಎಲ್ಲ ಸಮಸ್ಯೆಗಳ ಕುರಿತು ಚರ್ಚೆಯಾಗುವ ಕೆಡಿಪಿ ಸಭೆಗಳಿಗೆ ಸಂಸದೆ ಶೋಭಾ ಕರಂದ್ಲಾಜೆ ಭಾಗವಹಿಸದೆ ನಿರ್ಲಕ್ಷಿಸಿದ್ದಾರೆ. ಹೀಗೆ ಇರುವಾಗ ಅವರು ಜನರ ಸಮಸ್ಯೆಗಳಿಗೆ ಹೇಗೆ ಸ್ಪಂದಿಸಲು ಸಾಧ್ಯ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರು ಸಿಕ್ಕಿದ ಅವಕಾಶವನ್ನು ಸರಿಯಾಗಿ ಜನರ ಕಲ್ಯಾಣಕ್ಕಾಗಿ ಬಳಸಿಕೊಂಡಿಲ್ಲ ಎಂಬುದು ಸತ್ಯ ಎಂದವು ದೂರಿದರು.
ಗೋ ಬ್ಯಾಕ್ ಹೇಳಿದವರೇ ಇಂದು ಅದೇ ಅಭ್ಯರ್ಥಿ ಪರ ಮತಯಾಚನೆ ಮಾಡುತ್ತಿದ್ದಾರೆ. ಹಾಗಾದರೆ ಇವರ ಗೋ ಬ್ಯಾಕ್ ಅಭಿಯಾನದ ಉದ್ದೇಶ ವಾದರೂ ಏನು. ಯಾವ ನೈತಿಕತೆಯ ಆಧಾರದಲ್ಲಿ ಇವರು ಶೋಭಾ ಪರವಾಗಿ ಮತದಾರರಲ್ಲಿ ಮತ ಕೇಳುತ್ತಿದ್ದಾರೆ ಎಂದು ಅವರು ಪ್ರಶ್ನಿಸಿದರು.
ವಿಜಯ ಬ್ಯಾಂಕಿಗೆ ಸ್ವಾಯತ್ತತೆ ಕೊಟ್ಟು, ಅದೇ ಹೆಸರಿನಲ್ಲಿ ಉಳಿಸುವ ಪ್ರಯತ್ನವನ್ನು ಈ ಎರಡು ಜಿಲ್ಲೆಗಳ ಸಂಸದರಾದ ನಳಿನ್ ಹಾಗೂ ಶೋಭಾ ಮಾಡಿಲ್ಲ. ಇವರಿಬ್ಬರು ಕೂಡ ಸಂಸತ್ತಿನಲ್ಲಿ, ಸಂಬಂಧಪಟ್ಟ ಸಚಿವರಲ್ಲಿ ಹಾಗೂ ಸ್ಥಳೀಯರ ನಿಯೋಗ ಕರೆದುಕೊಂಡು ಹೋಗಿ ಕೇಂದ್ರದ ಜೊತೆ ಈ ಕುರಿತು ಮಾತುಕತೆ ನಡೆಸುವ ಯಾವುದೇ ಪ್ರಯತ್ನ ಮಾಡಿಲ್ಲ. ಈ ವಿಚಾರದಲ್ಲಿ ಎರಡೂ ಸಂಸದರು ಕೂಡ ವಿಫಲರಾಗಿದ್ದಾರೆಂದು ಅವರು ಆರೋಪಿಸಿದರು.
ಸಂವಿಧಾನಿಕ ಸಂಸ್ಥೆಗಳಾದ ಐಟಿ, ನ್ಯಾಯಾಂಗ, ಸಿಬಿಐಗಳನ್ನು ದುರು ಪಯೋಗ ಮಾಡಿರುವ ದೇಶದ ಏಕೈಕ ಪ್ರಧಾನಿ ನರೇಂದ್ರ ಮೋದಿ. ಐಟಿ, ಸಿಬಿಐ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಜೆಡಿಎಸ್ ಹಾಗೂ ಕಾಂಗ್ರೆಸ್ ಮುಖಂಡರು, ಆಪ್ತರನ್ನು ಗುರಿಯಾಗಿರಿಸಿಕೊಂಡು ದಾಳಿ ಮಾಡಲಾಗುತ್ತಿದೆ. ಈ ಮೂಲಕ ಸಂವಿಧಾನಿಕ ಸಂಸ್ಥೆಗಳಲ್ಲಿ ಹಸ್ತಕ್ಷೇಪ ಮಾಡಿ ಬಿಜೆಪಿ ಚುನಾವಣೆ ಎದುರಿಸುತ್ತಿರುವುದು ಖಂಡನೀಯ ಎಂದರು.
ಯುಪಿಎ ಜಿಎಸ್ಟಿ ಜಾರಿಗೆ ತರಲು ಹೊರಟಾಗ ಆರ್ಥಿಕ ದಿವಾಳಿ ಆಗುತ್ತದೆ ಎಂದು ಹೇಳಿದ್ದ ಬಿಜೆಪಿ, ಈಗ ಜಿಎಸ್ಟಿಯನ್ನು ಆರ್ಥಿಕ ಕ್ರಾಂತಿ ಎನ್ನುತ್ತಿದೆ. ಅದೇ ರೀತಿ ಯುಪಿಎ ಪರಿಚಯಿಸಿದ ಆಧಾರ್ ಕಾರ್ಡ್ಗೆ ಈಗ ಬಿಜೆಪಿ ಪ್ರೋತ್ಸಾಹ ನೀಡುತ್ತಿದೆ. ಯಾರೋ ಹುಟ್ಟಿಸಿದ ಮಕ್ಕಳಿಗೆ ಬಟ್ಟೆ ಹೊಲಿಸಿ ನಾಮಕರಣ ಮಾಡಿದರೆ ನಮ್ಮ ಮಕ್ಕಳಾಗಲ್ಲ ಎಂದು ಅವರು ಲೇವಡಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಉದಯಕುಮಾರ್ ಶೆಟ್ಟಿ ಮುನಿಯಾಲು, ಜೆಡಿಎಸ್ ಮುಖಂಡರಾದ ವಾಸುದೇವ ರಾವ್, ಸಬ್ಲಾಡಿ ಮಂಜಯ್ಯ ಶೆಟ್ಟಿ, ರಂಜಿತ್ ಕುಮಾರ್ ಶೆಟ್ಟಿ, ಇಕ್ಬಾಲ್ ಆತ್ರಾಡಿ, ಪ್ರಕಾಶ್ ಶೆಟ್ಟಿ, ರಫೀಕ್, ರಝಾಕ್ ಉಚ್ಚಿಲ ಉಪಸ್ಥಿತರಿದ್ದರು.
ಸ್ಥಳೀಯರಾದ ಪ್ರಮೋದ್ಗೆ ಜನಾಶೀರ್ವಾದ
ಐದು ವರ್ಷಗಳಲ್ಲಿ ಸಂಸದರಾಗಿದ್ದ ಶೋಭಾ ಕರಂದ್ಲಾಜೆ ಉಡುಪಿ ಅಥವಾ ಚಿಕ್ಕಮಗಳೂರಿನಲ್ಲಿ ಮನೆ ಮಾಡಿಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸಲು ಸ್ಥಳೀಯ ರಾಗಬೇಕೆಂದು ಆಲೋಚನೆ ಕೂಡ ಮಾಡಿಲ್ಲ. ಆದುದರಿಂದ ಅವರಿಗೆ ಈ ಬಾರಿ ಜನ ಶಿಕ್ಷೆ ಕೊಡುತ್ತಾರೆ. ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿರುವ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಸ್ಥಳೀಯರೇ ಆಗಿದ್ದಾರೆ. ಜನರು ಅವರಿಗೆ ಆಶೀರ್ವಾದ ಮಾಡಬೇಕು ಎಂದು ಬೋಜೇಗೌಡ ಮನವಿ ಮಾಡಿದರು.
ಬಹಳಷ್ಟು ಸಲ ಸಮೀಕ್ಷೆಗಳು ಸುಳ್ಳಾಗಿವೆ. ನಾನು ವಿಧಾನಪರಿಷತ್ ಸದಸ್ಯ ನಾಗುತ್ತೇನೆಂದು ಯಾರು ಕೂಡ ಊಹಿಸಿರಲಿಲ್ಲ. ಅದೇ ರೀತಿ ಈ ಬಾರಿಯೂ ಊಹೆಗೂ ನಿಲುಕದ ಫಲಿತಾಂಶ ಹೊರಬರಲಿದೆ. ಚಿಕ್ಕಮಗಳೂರು ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಪ್ರಮೋದ್ ಮಧ್ವರಾಜ್ ಅವರಿಗೆ 50ರಿಂದ 60 ಸಾವಿರ ಮತಗಳ ಮುನ್ನಡೆ ದೊರೆಯಲಿದೆ ಎಂದವರು ವಿಶ್ವಾಸ ವ್ಯಕ್ತಪಡಿಸಿದರು.
ಕಳೆದ ಬಾರಿ ಮೋದಿ ಅಲೆ ಇರುವುದನ್ನು ಒಪ್ಪಿಕೊಳ್ಳುತ್ತೇವೆ. ಆದರೆ ಈ ಬಾರಿ ಎಲ್ಲೂ ಮೋದಿ ಅಲೆ ಇಲ್ಲ. ಯುವ ಸಮುದಾಯ ಈಗಲೂ ಮೋದಿ ಅಲೆಯಲ್ಲಿ ತೇಲುತ್ತಿದ್ದಾರೆ. ಅವರಿಗೆ ತಿಳುವಳಿಕೆ ಮೂಡಿಸುವಲ್ಲಿ ನಾವು ಇನ್ನು ಸಂಪೂರ್ಣ ಯಶಸ್ಸು ಆಗಿಲ್ಲ ಎಂದು ಅವರು ತಿಳಿಸಿದರು.