ಲೋಕಸಭಾ ಚುನಾವಣೆ ಪ್ರಯುಕ್ತ ಯಶವಂತಪುರ-ಕಾರವಾರ ಮಧ್ಯೆ ವಿಶೇಷ ರೈಲು
ಉಡುಪಿ, ಎ.13: ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಲು ಊರಿಗೆ ತೆರಳುವ ಜನರ ಬೇಡಿಕೆಯ ಹಿನ್ನೆಲೆಯಲ್ಲಿ ನೈರುತ್ಯ ರೈಲ್ವೆಯ ಸಹಕಾರ ದೊಂದಿಗೆ ಬೆಂಗಳೂರಿನ ಯಶವಂತಪುರ ಜಂಕ್ಷನ್ ಹಾಗೂ ಕಾರವಾರದ ನಡುವೆ ತತ್ಕಾಲ್ ವಿಶೇಷ ರೈಲನ್ನು ಓಡಿಸಲು ಕೊಂಕಣ ರೈಲ್ವೆ ನಿರ್ಧರಿಸಿದೆ.
ರೈಲು ನಂ.06557 ಯಶವಂತಪುರ ಜಂಕ್ಷನ್-ಕಾರವಾರ ತತ್ಕಾಲ್ ವಿಶೇಷ ರೈಲು ಎ.17ರಂದು ರಾತ್ರಿ 9 ಗಂಟೆಗೆ ಯಶವಂತಪುರ ಜಂಕ್ಷನ್ನಿಂದ ಹೊರಡಲಿದ್ದು ಮರುದಿನ ಅಪರಾಹ್ನ 3:30ಕ್ಕೆ ಕಾರವಾರವನ್ನು ತಲುಪಲಿದೆ.
ಅದೇ ರೀತಿ ರೈಲು ನಂ.06558 ಕಾರವಾರ-ಯಶವಂತಪುರ ಜಂಕ್ಷನ್ ತತ್ಕಾಲ್ ವಿಶೇಷ ರೈಲು ಎ.18ರಂದು ಸಂಜೆ 6 ಗಂಟೆಗೆ ಕಾರವಾರ ದಿಂದ ಹೊರಟು ಮರುದಿನ ಬೆಳಗ್ಗೆ (ಶುಕ್ರವಾರ) 10:35ಕ್ಕೆ ಯಶವಂತಪುರ ಜಂಕ್ಷನ್ ತಲುಪಲಿದೆ.
ಈ ರೈಲು ಒಟ್ಟು 18 ಕೋಚ್ಗಳನ್ನು ಹೊಂದಲಿದ್ದು, ಇದರಲ್ಲಿ 3 ಟಯರ್ ಎಸಿ-4ಕೋಚ್, ಸ್ಲೀಪರ್-12ಕೋಚ್ ಹಾಗೂ ಎಸ್ಎಲ್ಆರ್-2ಕೋಚ್ ಇರಲಿದೆ.
ಈ ರೈಲಿಗೆ ಚಿಕ್ಕಬಾಣಾವರ, ನೆಲಮಂಗಲ, ಕುಣಿಗಲ್, ಬಿ.ಜಿ.ನಗರ, ಚೆನ್ನರಾಯಪಟ್ಟಣ್ಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಯಡಮಂಗಲ, ಕಬಕ ಪುತ್ತೂರು, ಬಂಟ್ವಾಳ, ಮಂಗಳೂರು ಜಂಕ್ಷನ್, ಸುರತ್ಕಲ್, ಮುಲ್ಕಿ, ಉಡುಪಿ, ಬಾರಕೂರು, ಕುಂದಾಪುರ, ಮೂಕಾಂಬಿಕಾ ರೋಡ್ ಬೈಂದೂರು, ಭಟ್ಕಳ, ಮುರ್ಡೇಶ್ವರ, ಹೊನ್ನಾವರ, ಕುಮಟಾ, ಗೋಕರ್ಣ ರೋಡ್ ಹಾಗೂ ಅಂಕೋಲ ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.