ಲೋಕಸಭಾ ಚುನಾವಣೆ: 4 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ
ಉಡುಪಿ, ಎ.13: ಉಡುಪಿ ಚಿಕ್ಕಮಗಳೂರು ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ, ಎ.18ರಂದು ನಡೆಯುವ ಮತದಾನದ ಸಂದರ್ಭ ದಲ್ಲಿ ಸಾರ್ವಜನಿಕ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಹಾಗೂ ಮುಕ್ತ, ನಿಷ್ಪಕ್ಷಪಾತ ಮತ್ತು ನ್ಯಾಯಯುತ ಚುನಾವಣೆ ನಡೆಯುವ ಉದ್ದೇಶದಿಂದ ಕುಂದಾಪುರ, ಉಡುಪಿ, ಕಾಪು ಹಾಗೂ ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಎ.16ರ ಸಂಜೆ 6:00ರಿಂದ ಎ.19ರ ಬೆಳಗ್ಗೆ 6:00 ಗಂಟೆಯವರೆಗೆ ಸೆಕ್ಷನ್ 144ರಂತೆ ಕುಂದಾಪುರ, ಉಡುಪಿ, ಕಾಪು, ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ನಿಷೇದಾಜ್ಞೆ ವಿಧಿಸಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಆದೇಶಿಸಿದ್ದಾರೆ.
ಈ ಸಮಯದಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳಿಂದ ಪೂರ್ವಾನುಮತಿ ಪಡೆಯದೆ, ಯಾವುದೇ ರೀತಿಯ ಸಾರ್ವಜನಿಕ ಮೆರವಣಿಗೆ, ಸಾರ್ವಜನಿಕ ಸಭೆ, ಸಮಾರಂಭ ನಡೆಸುವಂತಿಲ್ಲ, ಸಾರ್ವಜನಿಕ ರಸ್ತೆ, ಬೀದಿ, ಓಣಿ, ಕೇರಿಗಳಲ್ಲಿ, ಸ್ಥಳಗಳಲ್ಲಿ, ಕಟ್ಟಡ ಮತ್ತು ಮತದಾನ ಕೇಂದ್ರಗಳ ಸುತ್ತಮುತ್ತ 5 ಅಥವಾ ಅದಕ್ಕಿಂತ ಹೆಚ್ಚು ಜನ ಸೇರುವುದು, ಗುಂಪುಗೂಡುವುದನ್ನು ನಿಷೇಧಿಸಲಾಗಿದೆ.
ನಿಷೇಧಾಜ್ಞೆ ಜಾರಿಯಾದ ಕೂಡಲೇ ಕ್ಷೇತ್ರದ ಮತದಾರರಲ್ಲದ ರಾಜಕೀಯ ಪಕ್ಷಗಳ ಕಾರ್ಯಕರ್ತರು, ತಾರಾ ಪ್ರಚಾರಕರು ಮತ್ತು ಇತರೆ ಕಾರ್ಯಕರ್ತರು ಲೋಕಸಭಾ ಕ್ಷೇತ್ರ ಬಿಟ್ಟು ತೆರಳಬೇಕು.
ಮತದಾನದ ದಿನದಂದು ಮತಗಟ್ಟೆಯಿಂದ 200 ಮೀ. ಅಂತರದೊಳಗೆ ಯಾವುದೇ ಅ್ಯರ್ಥಿಗಳ ಚುನಾವಣಾ ಬೂತ್ನ್ನು ರಚಿಸಲು ಅವಕಾಶವಿಲ್ಲ. 200 ಮೀ.ನಿಂದ ಹೊರಗೆ ಚುನಾವಣಾ ಆಯೋಗದ ನಿರ್ದೇಶನಂತೆ ಒಂದು ಮೇಜು, ಒಂದು ಕುರ್ಚಿ, ಬಿಸಿಲು ಮಳೆಯಿಂದ ರಕ್ಷಣೆಗಾಗಿ ಸಣ್ಣ ಟರ್ಪಾಲುಗಳನ್ನು ಅಳವಡಿಸಿದ ಬೂತ್ಗಳನ್ನು ಸ್ಥಳೀಯ ಆಡಳಿತದ ಪರವಾನಗಿ ಪಡೆದು ರಚಿಸಬಹುದಾಗಿದೆ.
ಮತಗಟ್ಟೆಯ 100ಮೀ. ಅಂತರದಲ್ಲಿ ಚುನಾವಣಾ ಪ್ರಚಾರ ನಡೆಸುವುದನ್ನು ಹಾಗೂ ಧ್ವನಿವರ್ಧಕ ಬಳಸುವುದನ್ನು ನಿಷೇಧಿಸಲಾಗಿದೆ. ಮತದಾನದ ದಿನದಂದು ಪತ್ರಿಕಾ ಛಾಯಾಗ್ರಾಹಕರು,ಮತದಾನದ ಗೌಪ್ಯತೆಗೆ ಧಕ್ಕೆ ಬರುವಂತೆ ಛಾಯಾಚಿತ್ರ ತೆಗೆಯುವುದನ್ನು ನಿಷೇಧಿಸಲಾಗಿದೆ ಎಂದು ಹೆಫ್ಸಿಬಾ ರಾಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲೋಕಸಭಾ ಚುನಾವಣೆ: ಸಂತೆ, ಜಾತ್ರೆಗೆ ನಿಷೇಧ
ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ, ಎ.18 ರಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಮತದಾನ ನಡೆಯಲಿದ್ದು, ಈ ಹಿನ್ನಲೆಯಲ್ಲಿ ಕುಂದಾಪುರ, ಉಡುಪಿ, ಕಾಪು, ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎ.16ರ ಸಂಜೆ 6 ಗಂಟೆಯಿಂದ ಎ.18ರ ರಾತ್ರಿ 12 ಗಂಟೆಯವರೆಗೆ ಸಂತೆ ಮತ್ತು ಎಲ್ಲಾ ತರಹದ ಜಾತ್ರೆಗಳನ್ನು ಹಾಗೂ ಪೂರ್ವಾನುಮತಿ ಪಡೆಯದ ಉತ್ಸವಗಳನ್ನು ನಡೆಸುವುದನ್ನು ನಿಷೇಧಿಸಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಆದೇಶ ಹೊರಡಿಸಿದ್ದಾರೆ.