ಉಡುಪಿ: ವಿದ್ಯಾರ್ಥಿಗಳಿಂದ ಮತದಾನ ಜಾಗೃತಿ ಜಾಥಾ
ಉಡುಪಿ, ಎ.13: ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಉಡುಪಿ ಕನ್ನರ್ಪಾಡಿಯ ಸಂತಮೇರಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಂದ ಮತದಾರರಲ್ಲಿ ಜಾಗೃತಿ ಮೂಡಿಸುವ ಜಾಥಾವನ್ನು ಇಂದು ಹಮ್ಮಿಕೊಳ್ಳ ಲಾಗಿತ್ತು.
ನಗರದ ಶೋಕ ಮಾತಾ ಇಗರ್ಜಿಯ ಆವರಣದಲ್ಲಿ ನೆರೆದ 300ಕ್ಕೂ ಅಧಿಕ ಪ್ರೌಢಶಾಲಾ ವಿದ್ಯಾರ್ಥಿಗಳು ಹಾಗೂ ಮಾರ್ಗದರ್ಶಿ ಶಿಕ್ಷಕರು ಪ್ರತಿಜ್ಞಾವಿಧಿ ಸ್ವೀಕರಿಸಿದರು. ಸಂತಮೇರಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಅತಿ ವಂ. ವೆಲೇರಿಯನ್ ಮೆಂಡೋನ್ಸ ಮಾತನಾಡಿ, ಎಳೆಯ ಮಕ್ಕಳು ಹಿರಿಯರನ್ನು, ನೆರೆಹೊರೆಯರನ್ನು ನಿಭೀರ್ತಿಯಿಂದ, ಯಾವುದೇ ಒತ್ತಡಕ್ಕೆ ಒಳಗಾಗದೆ ಮತ ಚಲಾಯಿಸಲು ಪ್ರೇರೇಪಿಸುವ ಮೂಲಕ ಪ್ರಜಾಪ್ರುತ್ವವನ್ನು ಬಲಪಡಿಸುವ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
ಶೋಕ ಮಾತಾ ಇಗರ್ಜಿಯಿಂದ ಕಾಲ್ನಡಿಗೆಯಲ್ಲಿ ಆರಂಭಗೊಂಡ ಈ ಜಾಗೃತಿ ಜಾಥಾವು ಕೆ.ಎಂ.ಮಾರ್ಗದ ಮೂಲಕ ಸರ್ವಿಸ್ ಬಸ್ ನಿಲ್ದಾಣದ ಕ್ಲಾಕ್ ಟವರ್ ಮತ್ತು ಚಿತ್ತರಂಜನ್ ಸರ್ಕಲ್ ಮಾರ್ಗವಾಗಿ ಶೋಕಾ ಮಾತಾ ಇಗರ್ಜಿಯ ಆವರಣದಲ್ಲಿ ಸಮಾಪ್ತಿಗೊಂಡಿತು. ವಿದ್ಯಾರ್ಥಿಗಳ ಪ್ರತ್ಯೇಕ ತಂಡ ಬೀಡಿನಗುಡ್ಡೆ ಪ್ರದೇಶಗಳಿಗೆ ತೆರಳಿ ಅಲ್ಲಿನ ನಿವಾಸಿಗಳಲ್ಲಿ ಮತಾನದ ಕುರಿತು ಜಾಗೃತಿ ಮೂಡಿಸಿತು.
ವಿದ್ಯಾರ್ಥಿಗಳು ಜಾಥಾದುದ್ದಕ್ಕೂ ತಾವೇ ತಯಾರಿಸಿದ ಘೋಷಣಾ ಫಲಕ ಗಳನ್ನು ಪ್ರದರ್ಶಿಸಿದರು. ಶಾಲಾ ಪ್ರಾಂಶುಪಾಲೆ ಮರ್ಟಲ್.ಎಲ್.ಎಫ್. ಲೂವಿಸ್ ಜಾಥಾವನ್ನು ಸಂಘಟಿಸಿದ್ದರು. ಶಾಲಾ ಆಡಳಿತ ಮಂಡಳಿಯ ಸದಸ್ಯ ವಾಲ್ಟರ್ ಡಿಸೊೀಜ ಜಾಥಾದ ನೇತೃತ್ವ ವಹಿಸಿದ್ದರು.