ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ಗೆ ಸಿಪಿಐ ಬೆಂಬಲ
ಉಡುಪಿ, ಎ.13: ಎ.18ರ ಲೋಕಸಭಾ ಚುನಾವಣೆಯಲ್ಲಿ ಉಡುಪಿ ಚಿಕ್ಕಮಗಳೂರು ಕ್ಷೇತ್ರದಿಂದ ಕಾಂಗ್ರೆಸ್ ಮತ್ತು ಜೆಡಿಎಸ್ನ ಮೈತ್ರಿ ಅಭ್ಯರ್ಥಿ ಯಾಗಿ ಸ್ಪರ್ಧಿಸಿರುವ ಪ್ರಮೋದ್ ಮಧ್ವರಾಜ್ ಅವರನ್ನು ಬೆಂಬಲಿಸಲು ಭಾರತ ಕ್ಯುುನಿಸ್ಟ್ ಪಕ್ಷದ (ಸಿಪಿಐ) ನಿರ್ಧರಿಸಿದೆ.
ಸಿಪಿಐ ಪಕ್ಷದ ಉಡುಪಿ ತಾಲೂಕು ಸದಸ್ಯರು ಹಾಗೂ ಎಐಟಿಯುಸಿಗೆ ಸೇರಿದ ಕಾರ್ಮಿಕರ ಸಂಘಟನೆಗಳ ಜಂಟಿ ಸಭೆಯು ಶನಿವಾರ ಪಕ್ಷದ ಕಚೇರಿಯಲ್ಲಿ ಉಡುಪಿ ತಾಲೂಕು ಕಾರ್ಯದರ್ಶಿ ಕೆ.ವಿ.ಭಟ್ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಪಕ್ಷದ ದ.ಕ. ಮತ್ತು ಉಡುಪಿ ಜಿಲ್ಲಾ ಕಾರ್ಯದರ್ಶಿ ವಿ. ಕುಕ್ಯಾನ್, ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಕರುಣಾಕರ್ ಎಂ, ಹಿರಿಯ ನಾಯಕರಾದ ಸಂಜೀವ ಶೇರಿಗಾರ್, ರಾಜು ಪೂಜಾರಿ, ಶ್ರೀಧರ ಭಟ್ ಮುಂತಾದವರು ಉಪಸ್ಥಿತರಿದ್ದರು.
ಈ ಸಭೆಗೆ ಬ್ರಹ್ಮಾವರ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನಿತ್ಯಾನಂದ ಶೆಟ್ಟಿ, ಜೆಡಿಎಸ್ ಉಡುಪಿ ಜಿಲ್ಲಾ ಅಧ್ಯಕ್ಷ ಯೋಗೀಶ್ ವಿ.ಶೆಟ್ಟಿ ಹಾಗೂ ಕಾಂಗ್ರೆಸ್ನ ಜಯ ಸಿ ಕೋಟ್ಯಾನ್ ಆಗಮಿಸಿ, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ರನ್ನು ಬೆಂಬಲಿಸುವಂತೆ ಮನವಿ ಮಾಡಿಕೊಂಡರು.
ಪ್ರಸಕ್ತ ರಾಜಕೀಯ ವಿದ್ಯಮಾನ ಹಾಗೂ ಲೋಕಸಭಾ ಚುನಾವಣೆಯ ಬಗ್ಗೆ ಸಭೆ ಚರ್ಚಿಸಿ, ಜಾತ್ಯಾತೀತ ಪಕ್ಷಗಳಾದ ಜೆಡಿಎಸ್-ಕಾಂಗ್ರೆಸ್ ಅಭ್ಯರ್ಥಿ, ಯುವ ನಾಯಕ ಪ್ರಮೋದ್ ಮಧ್ವರಾಜ್ಗೆ ಪಕ್ಷದ ಕಾರ್ಯಕರ್ತರು ಮತ ನೀಡಿ, ಅವರನ್ನು ಗೆಲ್ಲಿಸಬೇಕೆಂಬ ತೀರ್ಮಾನವನ್ನು ಸಭೆ ಅಂಗೀಕರಿಸಿತು ಎಂದು ಕಾರ್ಯದರ್ಶಿ ಕೆ.ವಿ.ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.