ಬಿಜೆಪಿಯನ್ನು ಸೋಲಿಸಿ ಜಾತ್ಯತೀತ ಪಕ್ಷವನ್ನು ಗೆಲ್ಲಿಸಲು ಸಿಐಟಿಯು ಕರೆ
ಮಂಗಳೂರು, ಎ.13: ಬೀಡಿ ಕೈಗಾರಿಕೆಗೆ ಮಾರಕವಾಗಿ ಕಾರ್ಮಿಕರನ್ನು ಬೀದಿಪಾಲು ಮಾಡುವ ಬಿಜೆಪಿ ನೇತೃತ್ವದ ಎನ್ಡಿಎ ಸರಕಾರದ ನೀತಿಯನ್ನು ಹಿಮ್ಮೆಟ್ಟಿಸಲು ಬಿಜೆಪಿಯನ್ನು ಸೋಲಿಸಿ ಜಾತ್ಯತೀತ ಪಕ್ಷವನ್ನು ಗೆಲ್ಲಿಸಬೇಕಾಗಿದೆ ಎಂದು ಸೌತ್ ಕೆನರಾ ಬೀಡಿ ವರ್ಕರ್ಸ್ ಫೆಡರೇಶನ್ (ಸಿಐಟಿಯು) ಜಿಲ್ಲೆಯ ಮತದಾರರಿಗೆ ಕರೆ ನೀಡಿದೆ.
ಬೀಡಿ ಕೈಗಾರಿಕೆಗೆ ಮಾರಕವಾಗುವ ಕೋಟ್ಪಾಕಾಯ್ದೆಗೆ ಕಾರ್ಮಿಕ ವಿರೋಧಿ ತಿದ್ದುಪಡಿಯನ್ನು ತಂದಿರುವುದಲ್ಲದೆ ಕೆಲಸ ಕಳಕೊಳ್ಳುವ ಬೀಡಿ ಕಾರ್ಮಿಕರಿಗೆ ಕೋಟ್ಪಾಕಾಯ್ದೆಯಲ್ಲಿ ಪರಿಹಾರವನ್ನು ಸೂಚಿಸದೆ ಅನ್ಯಾಯವೆಸಗಿರುವ ಬಿಜೆಪಿ ಕೇಂದ್ರ ಸರಕಾರ, ನೋಟಿನ ಮಾನ್ಯತೆ ರದ್ದು ಮಾಡಿ ಅಸಂಘಟಿತ ಕಾರ್ಮಿಕರನ್ನು ಬೀದಿ ಪಾಲು ಮಾಡಿರುವುದು ಮಾತ್ರವಲ್ಲದೆ ಡಿಜಿಟಲೀರಣ ನೀತಿಯತ್ತ ಬೀಡಿ ಕಾರ್ಮಿಕರ ಮಕ್ಕಳಿಗೆ ನ್ಯಾಯಯುತವಾಗಿ ಸಿಗಬೇಕಾದ ವಿದ್ಯಾರ್ಥಿ ವೇತನ, ಬೀಡಿ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಸಿಗಬೇಕಾದ ಆರೋಗ್ಯ ಸೌಲಭ್ಯಗಳು ಸಿಗದಂತೆ ಮಾಡಲು ಕಾರಣವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಬೀಡಿ ಕಾರ್ಮಿಕರ ಜಿಲ್ಲೆಯಾಗಿರುವ ದ.ಕ.ದಲ್ಲಿ ಬೀಡಿ ಕಾರ್ಮಿಕರು ಇಷ್ಟೆಲ್ಲಾ ಸಮಸ್ಯೆಗಳಿಂದ ಪರಿತಪಿಸುತ್ತಿದ್ದರೆ ಜಿಲ್ಲೆಯಿಂದ 10 ವರ್ಷಗಳಿಂದ ಸಂಸದರಾಗಿರುವ ಹಾಲಿ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಕಿಂಚಿತ್ತೂ ಸ್ಪಂದಿಸಿಲ್ಲ. ಹಾಗಾಗಿ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿ ಜಾತ್ಯತೀತ ಪಕ್ಷವನ್ನು ಗೆಲ್ಲಿಸಬೇಕು ಎಂದು ಸಿಐಟಿಯು ಆಗ್ರಹಿಸಿದೆ.