ಮಂಗಳೂರು : ಸರ್ವಪಲ್ಲಿ ರಾಧಾಕೃಷ್ಣನ್ ಕರ್ನಾಟಕದವರು ಎಂದರೆ ಪ್ರಧಾನಿ ಮೋದಿ ?
ಮಂಗಳೂರಿನಲ್ಲಿ ಶನಿವಾರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ರಾಷ್ಟ್ರಪತಿ ದಿವಂಗತ ಸರ್ವಪಲ್ಲಿ ರಾಧಾಕೃಷ್ಣನ್ ಅವರು ಕರ್ನಾಟಕದವರು ಎಂಬರ್ಥದಲ್ಲಿ ಮಾತನಾಡಿದ್ದು ಕೇಳುಗರಲ್ಲಿ ಗೊಂದಲ ಮೂಡಿಸಿತು.
" ನಾನು ಇವತ್ತು ರಾಮನಾಥಪುರಂ ( ತಮಿಳುನಾಡು ) ನಿಂದ ಬಂದೆ . ಅಲ್ಲಿ ನಾವು ಅಬ್ದುಲ್ ಕಲಾಂ ( ಮಾಜಿ ರಾಷ್ಟ್ರಪತಿ ) ಅವರ ಸ್ಮಾರಕವೊಂದನ್ನು ನಿರ್ಮಿಸಿದ್ದೇವೆ. ಈಗ ನೀವು ಹೇಳಿ ರಾಧಾಕೃಷ್ಣನ್ ಅವರು ಈ ದೇಶದ ರಾಷ್ಟ್ರಪತಿ ಆಗಿರಲಿಲ್ಲವೇ ? ರಾಧಾಕೃಷ್ಣನ್ ಅವರು ಕರ್ನಾಟಕದ ಹೆಮ್ಮೆ ಆಗಿರಲಿಲ್ಲವೇ ? ಹಾಗಾದರೆ ಕೇಂದ್ರ ( ಕಾಂಗ್ರೆಸ್ ) ಸರಕಾರ ಅವರಿಗಾಗಿ ಸ್ಮಾರಕ ಮಾಡಲಿಲ್ಲ ? " ಎಂದು ಪ್ರಧಾನಿ ಮೋದಿ ಹೇಳಿದರು. ಮತ್ತೆ ಮುಂದುವರಿದು " ರಾಧಾಕೃಷ್ಣನ್ ಅವರು ತಮ್ಮ ಇಡೀ ಜೀವನವನ್ನು ಕರ್ನಾಟಕಕ್ಕಾಗಿ ಮುಡಿಪಾಗಿಟ್ಟಿದ್ದರು" ಎಂದು ಪ್ರಧಾನಿ ಹೇಳಿದರು.
ಭಾರತದ ಎರಡನೇ ರಾಷ್ಟ್ರಪತಿಯಾಗಿದ್ದ ಸರ್ವಪಲ್ಲಿ ರಾಧಾಕೃಷ್ಣನ್ ಅವರು ತಮಿಳುನಾಡಿನವರು. ಆದರೆ ಅವರು ಕರ್ನಾಟಕದವರು ಎಂಬರ್ಥದಲ್ಲಿ ಪ್ರಧಾನಿ ಹೇಳಿದ್ದು ಮಾತ್ರ ಏಕೆ ಎಂದು ಜನರಲ್ಲಿ ಚರ್ಚೆಯ ವಿಷಯವಾಗಿತ್ತು. ಇನ್ನು ರಾಧಾಕೃಷ್ಣನ್ ಅವರು ಕೇವಲ ಮೂರು ವರ್ಷಗಳ ಕಾಲ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದು ಬಿಟ್ಟರೆ ಅವರ ಶೈಕ್ಷಣಿಕ ಹಾಗು ರಾಜಕೀಯ ವೃತ್ತಿ ಜೀವನ ಕಳೆದಿದ್ದು ದೇಶದ ವಿವಿಧೆಡೆ ಹಾಗು ವಿದೇಶಗಳಲ್ಲಿ. ಹಾಗಾಗಿ ಅವರು ಕರ್ನಾಟಕದ ಹೆಮ್ಮೆ, ಅವರು ಕರ್ನಾಟಕಕ್ಕೆ ಜೀವನ ಮುಡಿಪಾಗಿಟ್ಟಿದ್ದರು ಎಂದು ಹೇಳಿದ್ದು ಯಾವ ಅರ್ಥದಲ್ಲಿ ಎಂಬುದು ಒಗಟಾಗಿಯೇ ಉಳಿದಿದೆ.