ಕಾಂಗ್ರೆಸ್ನದ್ದು ವಂಶೋದಯ- ಬಿಜೆಪಿಯದ್ದು ಅಂತ್ಯೋದಯ: ಪ್ರಧಾನಿ ಮೋದಿ
ಮಂಗಳೂರಿನಲ್ಲಿ ಬಿಜೆಪಿಯ ವಿಜಯ ಸಂಕಲ್ಪ ರ್ಯಾಲಿ
ಮಂಗಳೂರು, ಎ. 13: ಕಾಂಗ್ರೆಸ್ನದ್ದು ವಂಶೋದಯವಾದರೆ, ಬಿಜೆಪಿಯದ್ದು ಅಂತ್ಯೋದಯ ಎಂದು ವ್ಯಾಖ್ಯಾನ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ನ ವಂಶೋದಯದಿಂದ ಭ್ರಷ್ಟಾಚಾರ ಮತ್ತು ಅನ್ಯಾಯ ಸೃಷ್ಟಿಯಾಗುತ್ತದೆ. ಬಿಜೆಪಿಯ ಅಂತ್ಯೋಯದಿಂದ ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯ ಪ್ರತಿಷ್ಠೆ ಹೆಚ್ಚಾಗುತ್ತದೆ ಎಂದು ಹೇಳಿದರು.
ನಗರದ ನೆಹರೂ ಮೈದಾನದಲ್ಲಿ ಇಂದು ನಡೆದ ಬಿಜೆಪಿಯ ವಿಜಯ ಸಂಕಲ್ಪ ರ್ಯಾಲಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಕಾಂಗ್ರೆಸ್- ಜೆಡಿಎಸ್ ಮತ್ತು ಇತರ ಎಲ್ಲಾ ದಳಗಳ ಪ್ರೇರಣೆ ಪರಿವಾರವಾದ. ನಮ್ಮ ಪ್ರೇರಣೆ ರಾಷ್ಟ್ರವಾದ. ಅವರು ತಮ್ಮ ಪರಿವಾರವನ್ನು ತಮ್ಮ ಕೊನೆಯ ಸದಸ್ಯನವರೆಗೆ ಅಧಿಕಾರ ಒದಗಿಸಲು ದಾರಿ ಹುಡುಕುತ್ತಿರುತ್ತಾರೆ. ನಾವು ಸಮಾಜದ ಕಟ್ಟಕಡೆಯ ವ್ಯಕ್ತಿಯ ಅಭಿವೃದ್ದಿಗೆ ಶ್ರಮಿಸುತ್ತೇವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳನ್ನು ಟೀಕಿಸಿದರು.
ತಮ್ಮ ಭಾಷಣದುದ್ದಕ್ಕೂ ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕಾಂಗ್ರೆಸ್ನ ವಂಶೋದಯ ತಮ್ಮದೇ ಪಕ್ಷದ ವರಿಷ್ಠರನ್ನು ಕಡೆಗಣಿಸುತ್ತದೆ. ನಮ್ಮ ಅಂತ್ಯೋದಯ ಓರ್ವಚಹಾ ಮಾರುವವನ್ನು ಕೂಡಾ ಪ್ರಧಾನ ಮಂತ್ರಿಯನ್ನಾಗಿಸುತ್ತದೆ. ಕಾಂಗ್ರೆಸ್ ಕೇವಲ ಘೋಷಣೆಗಳನ್ನು ಮಾತ್ರವೇ ನೀಡಿದೆ. ನಮ್ಮ ಅಂತ್ಯೋದಯ ಬಡತವನ್ನು ಶೀಘ್ರಗತಿಯಲ್ಲಿ ಕಡಿಮೆಗೊಳಿಸಿದೆ. ಅವರ ವಂಶೋದಯ ದಲ್ಲಾಳಿಗಳು, ಮಧ್ಯವರ್ತಿಗಳನ್ನು ಸೃಷ್ಟಿಸಿದೆ. ನಮ್ಮ ಅಂತ್ಯೋದಯ ಜನ್ಧನ್, ಆಧಾರ್, ಮೊಬೈಲ್ಗಳನ್ನು ಸೇರಿಸಿ ಜೆಎಂಎಂ ಆಧುನಿಕ ವ್ಯವಸ್ಥೆಯನ್ನು ರೂಪಿಸಿದೆ. ಅವರ ವಂಶೋದಯತುಷ್ಟೀಕರಣವನ್ನು ತಮ್ಮ ರಾಜನೀತಿಯ ಆಧಾರವನ್ನಾಗಿಸಿದೆ. ನಮ್ಮ ಅಂತ್ಯೋದಯ ಸರ್ವರ ಸಹಕಾರ ಸರ್ವರ ವಿಕಾಸದ ಮಾರ್ಗವನ್ನು ಆಯ್ಕೆ ಮಾಡಿದೆ. ಅವರ ವಂಶೋದಯ ತಮ್ಮ ಪರಿವಾರವನ್ನೇ ಉದ್ಧಾರವಾಗಿಸಿದೆ. ನಮ್ಮ ಅಂತ್ಯೋದಯ ಸಮಾಜದ ಅನ್ಯ ಅಪರಿಚಿತ ಮುಖವನ್ನೂ ಸಮ್ಮಾನ ನೀಡುತ್ತದೆ. ಈ ವ್ಯತ್ಯಾಸ ನಿಮಗೆ ಅರ್ಥವಾಗುತ್ತದೆಯಲ್ಲಾ ಎಂದು ತಮ್ಮ ಎಂದಿನ ಶೈಲಿಯಲ್ಲಿಯೇ ಸಭಿಕರನ್ನು ಪ್ರಶ್ನಿಸಿದರು.
ಆದಿವಾಸಿ ಇಲಾಖೆಯಲ್ಲಿ ಬಡವರ ಸೇವೆ ಮಾಡುವರಿಗೂ ನಮ್ಮ ಅವಧಿಯಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ. ಕರ್ನಾಟಕದವರಿಗೂ ಪದ್ಮಶ್ರೀ ಪ್ರಶಸ್ತಿ ಸಿಕ್ಕಿದೆ. ರಾಷ್ಟ್ರಪತಿ ಭವನದಲ್ಲಿ ಹರಿದ ಚಪ್ಪಲಿ ಹಾಕಿದ ಹಿರಿಯರು ಪದ್ಮಶ್ರೀ ಪಡೆಯುವುದನ್ನು ನೋಡಿದಾಗ ಇದುವೇ ನನ್ನ ನೈಜ ಭಾರತ ಎಂಬ ಭಾವನೆ ಮೂಡುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.
ತನ್ನ ಸಾಮರ್ಥ್ಯ, ಕನಸಿನ ಮೇಲೆ ಭರವಸೆ ಹೊಂದಿರುವ ಭಾರತವನ್ನು ಸ್ವಾತಂತ್ರ ನಂತರ ಆಳಿದ ಕಾಂಗ್ರೆಸ್ ಭಾರತಕ್ಕೆ ತನ್ನ ಹಕ್ಕಾದ ಬಹುಶಾಸನ ನೀಡಿಲ್ಲ. ಕಾಂಗ್ರೆಸ್ಗೆ ಅವಕಾಶ ನೀಡಿದ್ದರೂ ಅದನ್ನುಒಂದು ಕುಟುಂಬಕ್ಕೆ ಅದು ಸಮರ್ಪಣೆ ಮಾಡಿತ್ತು. ರಾಮನಾಥಪುರದಲ್ಲಿ ನಾವು ಅಬ್ದುಲ್ ಕಲಾಂರವರ ಸ್ಮಾರಕ ಮಾಡಿದ್ದೇವೆ. ಡಾ. ರಾಧಾಕೃಷ್ಣ ಭಾರತದ ರಾಷ್ಟ್ರಪತಿಯಾಗಿದ್ದರು. ಅವರ ಸ್ಮಾರಕವನ್ನುಮಾಡಲಾಗಿಲ್ಲ. ಬದಲಾಗಿ ತಮ್ಮ ಪರಿವಾರದವರ ಹಲವಾರು ಸ್ಮಾರಕಗಳನ್ನು ಕಾಂಗ್ರೆಸ್ ಮಾಡಿದೆ, ಆದರೆ ದೇಶದ ರಾಷ್ಟ್ರಪತಿಯೊಬ್ಬರಿಗೆ ಇಂತಹ ಸನ್ಮಾನವನ್ನು ನೀಡಿಲ್ಲ ಎಂದು ಅವರು ಕಾಂಗ್ರೆಸ್ ವಿರುದ್ಧ ವಾಗ್ಧಾಳಿ ನಡೆಸಿದರು.
ಜಲಿಯಾನಾವಾಲಾ ಬಾಗ್ನ ಹುತಾತ್ಮರ ಹೆಸರಿನಲ್ಲಿ ಹೊಸದಿಲ್ಲಿಯಲ್ಲಿ ಸ್ಮರಣೆ ನಡೆದರೆ, ಕಾಂಗ್ರೆಸ್ನವರಿಗೆ ಸಹಿಸಲಾಗುವುದಿಲ್ಲ. ದಶಕಗಳ ನಂತರ ಮಾಜಿ ಸೈನಿಕರಿಗೆ ರ್ಯಾಂಕ್ ಮೇಲೆ ಪಿಂಚಣಿಯ ಬೇಡಿಕೆಯನ್ನು ಈಡೇರಿಸಿದಾಗ ಇದರಿಂದಲೂ ಮೋದಿ ಬಗ್ಗೆ ಅವರಿಗೆ ತೊಂದರೆಯಾಗುತ್ತದೆ. ಇವರ ಈ ವರ್ತನೆ ದೇಶದ ಸೈನಿಕರ ಮೇಲಿನ ಅವರ ಕಾಳಜಿಯನ್ನು ತೋರಿಸುತ್ತದೆ. ಸರ್ಜಿಕಲ್ ದಾಳಿ ಆದಾಗ ಸಾಕ್ಷ ಕೇಳುತ್ತಾರೆ. ಈ ದೇಶದ ಸುಪುತ್ರರ ಮೇಲೆ ನಿಮಗೆ ನಂಬಿಕೆ ಇಲ್ಲವೇ, ನಮ್ಮ ಸೈನಿಕರು ಪರಾಕ್ರಮಿಗಳಲ್ಲವೇ, ಅವರು ಧೀರರಲ್ಲವೇ? ಹಾಗಿದ್ದರೆ ನಮ್ಮ ಸಪುತ್ರರಿಗೆ ಸಾಕ್ಷದ ಅಗತ್ಯವಿದೆಯೇ ? ಭಾರತ ಆತಂಕವಾದಿಗಳ ಮನೆಗೆ ನುಗ್ಗಿ ಕೊಂದಾಗ ಮಹಾ ಮೈತ್ರಿಕೂಟ ಜನರು ಸೇನೆಯ ಪರಾಕ್ರಮದ ಬಗ್ಗೆಯೂ ಸವಾಲು ಹಾಕುತ್ತಾರೆ. ಇವರಿಗೆ ನಾಚಿಕೆಯಾಗಬೇಡವೇ ? ಆದರೆ ನಾಚಿಕೆ ಪಡಲು ಅವರಿಗೆ ನಾಚಿಕೆ ಇರಬೇಕಲ್ಲವೇ ಎಂದು ಅಪಹಾಸ್ಯ ಮಾಡಿದರು.
ದೇಶದ ಸೇನಾಧ್ಯಕ್ಷರನ್ನೇ ಸುಳ್ಳುಗಾರ ಎನ್ನುತ್ತಾರೆ. ರಾಷ್ಟ್ರ ತನ್ನ ಬಲಿದಾನ ಮಾಡಿದವರನ್ನು, ಪರಂಪರೆಯನ್ನು, ಇತಿಹಾಸವನ್ನು ಮರೆತವರನ್ನು ಇಂತಹ ಅಪೇಕ್ಷೆ ಪಡಲು ಸಾಧ್ಯವಿಲ್ಲ. ನಮ್ಮ ಭಕ್ತಿಯನ್ನು ವ್ಯಕ್ತಪಡಿಸುವುದನ್ನೂ ಅಪರಾಧವೆನ್ನಲಾಗುವ ಸ್ಥಿತಿ ಕೇರಳದಲ್ಲಿದೆ. ಅಲ್ಲಿ ಕಮ್ಯುನಿಸ್ಟ್ ಸರಕಾರವಿದೆ. ಅದು ಮಹಾ ಮೈತ್ರಿ ಸರಕಾರದ ಭಾಗವದು. ಅಲ್ಲಿ ಸಾರ್ವಜನಿಕವಾಗಿ ನಾಗರಿಕ ಭಗವಾನ್ ಅಯ್ಯಪ್ಪನ ಹೆಸರನ್ನೂ ಹೇಳುವಂತಿಲ್ಲ. ಮೊಕದ್ದಮೆ ಹಾಕಿ ಜೈಲಿಗೆ ಹಾಕುತ್ತಾರೆ. ನಾನು ನಿನ್ನೆ ಹೋದ ಕ್ಷೇತ್ರದ ಅಭ್ಯರ್ಥಿಯನ್ನು 15 ದಿನಗಳ ಜೈಲಿನಲ್ಲಿರಿಸಿ ನಿನ್ನೆಯಷ್ಟೆ ಅವರಿಗೆ ಜಾಮೀನುನೀಡಲಾಯಿತು.
ಮಹಾ ಕಲಬೆರಕೆಯ ಈ ಕಾಂಗ್ರೆಸ್ನ ಸಂಸ್ಕೃತಿಯು ನಮ್ಮ ಪರಂಪರೆ ಮಾತ್ರವಲ್ಲ ನಮ್ಮ ರಕ್ಷಣಾ ಕ್ಷೇತ್ರವನ್ನೂ ದುರ್ಬಲಗೊಳಿಸಿದೆ. ದೇಶದ ಬ್ಯಾಂಕಿಂಗ್ ಕ್ಷೇತ್ರವನ್ನು 2014ರಲ್ಲಿ ವೆಂಟಿಲೇಟರ್ನಲ್ಲಿ ಇಟ್ಟು ಹೋಗಿದ್ದರು. ಮಂಗಳೂರು ಮತ್ತು ಉಡುಪಿ ದೇಶದ ಬ್ಯಾಂಕಿಂಗ್ ಕ್ಷೇತ್ರದ ತವರೂರು. ಕಾಂಗ್ರೆಸ್ನವರಿಂದಾಗಿ ಬ್ಯಾಂಕ್ಗಳು ನಷ್ಟವಾದವು. ದೇಶದ ಬ್ಯಾಂಕ್ಗಳು ಸ್ವಾತಂತ್ರದದಿಂದ 2006 ರವರೆಗೆ ನೀಡಿದ ಸಾಲಕ್ಕಿಂತ ದುಪ್ಪಟ್ಟು ಸಾಲವನ್ನು ಕಾಂಗ್ರೆಸ್ನವರು 2006ರಿಂದ 2014ರವರೆಗೆ ನೀಡಿದರು. ಅದರಿಂದ ಅಷ್ಟು ಕಮಿಷನ್ ಸಿಕ್ಕಿದೆ ಎಂಬುದು ತನಿಖೆಯಿಂದಷ್ಟೆ ಹೊರಬರಬಹುದು. ಚೌಕೀದಾರ್ ಈ ಆಟವನ್ನು ನಿಲ್ಲಿಸಿದ. ಇದಕ್ಕಾಗಿಯೇ ಅವರಿಗೆ ಆತಂಕವಾಗಿದೆ. ಅವರೀಗ ಓಡುತ್ತಿದ್ದಾರೆ. ಆದರೆ ಎಲ್ಲಿಗೆ ಓಡುತ್ತಾರೆ. ಪ್ರಪಂಚದ ಯಾವುದೇ ಕೋಣೆಯಲ್ಲಿದ್ದರೂ ಈ ಚೌಕೀದಾರ್ ಅವರನ್ನು ಹುಡುಕಿ ತರಲಿದ್ದಾನೆ. ಮಿಶೆಲ್ ಮಾಮಾ, ಸಕ್ಸೇನಾ, ತಲವಾರ್ ಮೂವರು ಜೈಲಿನಲ್ಲಿದ್ದಾರೆ. ಮೂವರು ಬಂದಾಗಿದೆ, ಇನ್ನೂ ಬರಲಿದ್ದಾರೆ ಎಂದು ಹೇಳಿದರು.
ವೇದಿಕೆಯಲ್ಲಿ ವೇದವ್ಯಾಸ ಕಾಮತ್, ಸಿ.ಟಿ. ರವಿ, ಕೋಟ ಶ್ರೀನಿವಾಸ ಪೂಜಾರಿ, ರಾಜೇಶ್ ನಾಯ್ಕ್, ಉಮಾನಾಥ ಕೋಟ್ಯಾನ್, ಹರೀಶ್ ಪೂಂಜ, ಸುಕುಮಾರ್ ಶೆಟ್ಟಿ, ಲಾಲಾಜಿ ಮೆಂಡನ್, ಪ್ರತಾಪ್ಸಿಂಹ ನಾಯಕ್, ನಳಿನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ, ಮೋನಪ್ಪ ಭಂಡಾರಿ, ಭರತ್ ಶೆಟ್ಟಿ, ರಘುಪತಿ ಭಟ್, ಗಣೇಶ್ ಕಾರ್ಣಿಕ್, ರತ್ನಾಕರ ಹೆಗಡೆ ವೊದಲಾವದರು ಉಪಸ್ಥಿತರಿದ್ದರು.
ಸಂಜೀವ ಮಠಂದೂರು ಸ್ವಾಗತಿಸಿದರು. ಸುದರ್ಶನ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮಕ್ಕೂ ವೊದಲು ರಾಷ್ಟ್ರ ಭಕ್ತಿ ಗೀತೆಗಳನ್ನು ಹಾಡಲಾಯಿತು.
ಪಿಎಂ ಕಿಸಾನ್ ಯೋಜನೆ ಬಗ್ಗೆ ಕರ್ನಾಟಕ ಸರಕಾರ ನಿರ್ಲಕ್ಷ
ಪಿಎಂ ಕಿಸಾನ್ ಯೋಜನೆಯ ಪ್ರಥಮ ಮತ್ತು ದ್ವಿತೀಯ ಹಂತದ ಹಣ ಕೃಷಿಕ ಕುಟುಂಬಗಳಿಗೆ ದೇಶದ ಹಲವಾರು ರಾಜ್ಯಗಳಲ್ಲಿ ಸಿಗಲಾರಂಭಿಸಿದೆ. ಆದರೆ ಕರ್ನಾಟಕದ ಕಾಂಗ್ರೆಸ್ ಜೆಡಿಎಸ್ ಸರಕಾರ ಇದರಲ್ಲಿಯೂ ಆಟವಾಡುತ್ತಿದೆ. ಕೃಷಿಕರ ಪಟ್ಟಿಯನ್ನು ನೀಡುವಲ್ಲಿಯೂ ರಾಜನೀತಿ ಮಾಡುತ್ತಿದೆ. 10 ಬಾರಿ ಕೇಳಿದರೆ ಸಣ್ಣ ಪತ್ರವೊಂದನ್ನು ನೀಡುತ್ತಾರೆ. ಇದರಿಂದಾಗಿ ಇಲ್ಲಿನ ಕೃಷಿಕರಿಗೆ ಆ ಯೋಜನೆ ದೊರೆಯದಂತಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆಪಾದಿಸಿದರು.
ಸಾಲ ಮನ್ನಾದ ಘೋಷಣೆ ಮಾಡಿ ಅದನ್ನು ನಿಭಾಯಿಸಲಿಲ್ಲ. ಇದೀಗ ಕೇಂದ್ರ ಸರಕಾರ ಮಾಡಿದರೂ ಅದಕ್ಕೂ ಅಡ್ಡಿ ಪಡಿಸುತ್ತಾರೆ. ಹಾಗಾಗಿ ಮುಂಬರುವ ಚುನಾವಣೆಯಲ್ಲಿ ಈ ಮೈತ್ರಿ ಸರಕಾರಕ್ಕೆ ಬುದ್ಧಿ ಕಲಿಸಬೇಕು ಎಂದು ಅವರು ಹೇಳಿದರು.
ಬಿಜೆಪಿ ನೇತೃತ್ವದ ಸರಕಾರ ಮೀನುಗಾರರ ಬಗ್ಗೆ ಹೆಚ್ಚಿನ ಒತ್ತು ನೀಡಿದ್ದು, ಮೇ 26ರ ಬಳಿಕ ಮತ್ತೆ ಮೋದಿ ಸರಕಾರ ಬಂದಾಗ ನಾವು ಮೀನುಗಾರರಿಗೆ ಪ್ರತ್ಯೇಕ ಮಂತ್ರಾಲಯದ ಜತೆಗೆ, ಪ್ರತ್ಯೇಕ ಸಚಿವರೂ ನೇಮಕವಾಗಲಿದ್ದಾರೆ ಎಂದು ಮೋದಿ ಹೇಳಿದರು.
ನವ ಭಾರತಕ್ಕಾಗಿ ಚೌಕೀದಾರ ಮಾಡಿರುವ ಎಲ್ಲಾ ಸಂಕಲ್ಪಗಳನ್ನು ಅವುಗಳು ಈಡೇರಿಸಲು ಸಹಕಾರ ನೀಡಬೇಕು. ಮತ್ತೊಮ್ಮೆ ಕಮಲವನ್ನು ಅರಳಿಸಿ, ಚೌಕೀದಾರನನ್ನು ಸಶಕ್ತಗೊಳಿಸಬೇಕು ಎಂದು ಮನವಿ ಮಾಡಿದರು.
ಮರದ ಮೇಲೇರಿದ್ದವರನ್ನು ಕೆಳಗಿಳಿಯುವಂತೆ ಮನವಿ ಮಾಡಿದ ಪ್ರಧಾನಿ
ಭಾರತ್ ಮಾತಾಕಿ ಜೈ ಎಂದು ಹೇಳುತ್ತಾ, ಮೈದಾನದ ಹೊರಗಿನ ಮರದ ಮೇಲೆ ಹತ್ತಿ ಕುಳಿತಿದ್ದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ನೀವು ಸುರಕ್ಷಿತರಿದ್ದೀರಾ ಎಂದು ಕೇಳಿದರು. ಮಾತ್ರವಲ್ಲದೆ ಮರದಿಂದ ಇಳಿಯುವಂತೆ ಮನವಿ ಮಾಡಿದರು. ಈ ರೀತಿಯ ಅಪಾಯವನ್ನು ಹೊಂದಬಾರದು. ನಾನು ನಿಮ್ಮವನೇ, ಮತ್ತೊಮ್ಮೆ ಬರುವೆ ಎಂದರು.
ಮಂಗಳೂರು, ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಯ ಆತ್ಮೀಯ ನಾಗರಿಕ ಬಂಧುಗಳಿಗೆ, ನಿಮ್ಮ ಚೌಕೀದಾರ್ ನರೇಂದ್ರ ಮೋದಿಯ ನಮಸ್ಕಾರಗಳು ಎಂದು ಕನ್ನಡದಲ್ಲಿ ಮಾತನಾಡಿದರು.
ಮಂದಿರ, ಮಠ, ಆಸ್ತಾ, ಆಧ್ಯಾತ್ಮ, ಸಂಸ್ಕೃತಿ, ಜ್ಞಾನ ಮತ್ತು ರಾಷ್ಟ್ರವಾದಿಯ ಪಾವನ ಭೂಮಿಗೆ ನಾನು ನಮನ ಸಲ್ಲಿಸುತ್ತೇನೆ ಎಂದು ಹೇಳಿದ ಅವರು, ಮಂಗಳೂರಿನ ಈ ಮೈದಾನಕ್ಕೆ ನಾನು ಹಲವು ಬಾರಿಬಂದಿದ್ದೇನೆ. ಆದರೆ ಇಂದು ಕೇಸರಿಯ ಸಮುದ್ರದ ಅಲೆಗಳು ಕಾಣುತ್ತಿದ್ದೇನೆ ಎಂದರು.
ವಿಮಾನ ನಿಲ್ದಾಣದಿಂದ ಇಲ್ಲಿಯವರೆಗೆ ಮಾನವ ಗೋಡೆಯೇ ನಿರ್ಮಾಣವಾಗಿತ್ತು. ಅದನ್ನು ನೋಡಿದಾಗ ಇಲ್ಲಿ ಯಾರು ಇರುತ್ತಾರೋ ಇಲ್ಲವೋ ಎಂಬ ಶಂಕೆಯಾಗಿತ್ತು. ಆದರೆ ಅಲ್ಲಿಯೂ ಜನಸಾಗರ ಇಲ್ಲಿಯೂ ಜನಸಾಗರ. ನಾನು ಇಲ್ಲಿಗೆ ಬಂದಾಗ ನಿಮ್ಮ ಈ ಸ್ನೇಹ ನೋಡಿ ಸಂತಸವಾಗುತ್ತದೆ. ಈ ವಿಶ್ವಾಸದಿಂದಲೇ ನಾನು ದೇಶ ಹಿತಕ್ಕಾಗಿ ಹಿರಿದಾದ ಹಾಗೂ ಕಠಿಣವಾದ ನಿರ್ಣಯಗಳನ್ನು ಕೈಗೊಳ್ಳಲು ತಾಕತ್ತು ಬರುತ್ತಿದೆ. ಈ ಮೋದಿ ಕೇವಲ ಬೆಣ್ಣೆಯಲ್ಲಿ ಗೆರೆ ಎಳೆಯುವವನಲ್ಲ. ಬದಲಿಗೆ ಕಲ್ಲಿನಲ್ಲಿಯೂ ಗೆರೆ ಹಾಕಬಲ್ಲ ಎಂದು ಮೋದಿ ಹೇಳಿಕೊಂಡರು.
ಕಳೆದ ಐದು ವರ್ಷ ನಾನು ಏನು ಮಾಡಲು ಸಾಧ್ಯವಾಯಿತೋ ಅದರಿಂದಾಗಿ ಇಂದು ಪ್ರಪಂಚದಲ್ಲಿ ಭಾರತದ ಜೈಕಾರ ಕೇಳುತ್ತಿದೆ. ಇದೆಲ್ಲಾ ಹೇಗೆ ಸಾಧ್ಯವಾಯಿತು ಎಂದಾಗ, ಸೇರಿದ್ದ ಜನತೆ ಮೋದಿ ಮೋದಿ ಎಂದು ಹೇಳಲಾರಂಭಿಸಿದರು. ಮೋದಿಯವರು ಇದು ತಪ್ಪು, ಇದು ಮೋದಿಯಿಂದ ಅಲ್ಲ. ಇದು ನಿಮ್ಮ ಒಂದು ಮತದಿಂದ ಎಂದರು.
2014ರಲ್ಲಿ ನೀವು ನನಗೆ ಆಶೀರ್ವಾದ ನೀಡಿದ್ದರಿಂದ ನನಗೆ ತಾಕತ್ತು ದೊರಕಿದೆ. ಅದರಿಂದಾಗಿ ನಾನು ಕಠಿಣ ನಿರ್ಣಯ ಕೈಗೊಳ್ಳಲು ಸಾಧ್ಯವಾಯಿತು. ಅದಕ್ಕಾಗಿ ಇಂದು ನಾನು ಮಂಗಳೂರು ಜನತೆಗೆ ತಲೆ ತಗ್ಗಿಸಿ ಧನ್ಯವಾದ ಹೇಳಲು ಬಂದಿದ್ದೇನೆ ಎಂದು ಮೋದಿ ಹೇಳಿದರು.
ಈ ಚುನಾವಣೆ ಕೇವಲ ಸರಕಾರ ಆಯ್ಕೆ ಮಾಡುವುದಕ್ಕಾಗಿ ಮಾತ್ರ ಅಲ್ಲ, 21ನೆ ಶತಮಾನದ ಭಾರತ ನವ ಭಾರತ ಹೇಗೆ ಬೇಕು ಎಂಬುದನ್ನು ನಾವೆಲ್ಲಾ ನಿರ್ಧರಿಸಬೇಕಿದೆ. ಅದಕ್ಕಾಗಿ ಚುನಾವಣೆಯಲ್ಲಿನಿರ್ಣಯ ಮಾಡಬೇಕಿದೆ. ನವ ಭಾರತದ ಸಂಸ್ಕಾರ ಮತ್ತು ಪ್ರೇರಣೆಯನ್ನು ನೀವೆಲ್ಲಾ ನಿರ್ಧರಿಸಬೇಕು. ಮಾಡುವಿರಲ್ಲಾ ಎಂದರು.
ನಾಯಕರು ನೆರಳಿನಲ್ಲಿ.... ಅಭಿಮಾನಿಗಳು ಬಿಸಿಲಿನಲ್ಲಿ....
ಸಭಾ ಕಾರ್ಯಕ್ರಮಕ್ಕಾಗಿ ಬೃಹತ್ ವೇದಿಕೆಯನ್ನು ರಚಿಸಲಾಗಿತ್ತು. ಸಭಾ ಕಾರ್ಯಕ್ರಮಕ್ಕೂ ಮುನ್ನ ಜಗದೀಶ್ ಪುತ್ತೂರು ಅವರಿಂದ ದೇಶಭಕ್ತಿ ಗೀತೆಗಳ ಕಾರ್ಯಕ್ರಮ ನಡೆಯಿತು. ಇದಕ್ಕಾಗಿ ಪ್ರತ್ಯೇಕ ವೇದಿಕೆಯನ್ನು ಹಾಕಲಾಗಿತ್ತು. 2 ಗಂಟೆಯ ಹೊತ್ತಿಗಾಗಲೇ ಉರಿ ಬಿಸಿಲಿನ ನಡುವೆಯೇ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ನಾಯಕರ ಆಗಮನವಾಗಿತ್ತು.
ಸಂಸದರು, ಶಾಸಕರು, ನಾಯಕರು ಮಧ್ಯಾಹ್ನದ ಉರಿಬಿಸಿಲಿನ ನಡುವೆಯೂ ವೇದಿಕೆಯ ಚಪ್ಪರದಡಿ ಆರಾಮವಾಗಿ ಆಸೀನರಾಗಿದ್ದರು. ಜತೆಗೆ ಕೂಲರ್ನ ವ್ಯವಸ್ಥೆ ಬೇರೆ. ಆದರೆ, ವೇದಿಕೆಯ ಎದುರು ಮೈದಾನದಲ್ಲಿ ಆಸನಗಳಲ್ಲಿ ಉರಿಬಿಸಿಲಿನ ನಡುವೆ, ನೀರಿನಂತೆ ಹರಿಯುತ್ತಿದ್ದ ಹರಿಯುವ ಬೆವರನ್ನು ಒರೆಸಿಕೊಳ್ಳುತ್ತಾ ಕುಳಿತುಕೊಳ್ಳಬೇಕಾದ ಪರಿಸ್ಥಿತಿ. ಸಂಜೆ 4.39ರ ಹೊತ್ತಿಗೆ ಪ್ರಧಾನಿ ನರೇಂದ್ರ ಮೋದಿ ನೆಹರೂ ಮೈದಾನ ಪ್ರವೇಶಿಸಿದ್ದು, 4.49ಕ್ಕೆ ವೇದಿಕೆಯನ್ನೇರಿದ್ದರು. ಅಷ್ಟು ಹೊತ್ತಿಗೆ ಬಿಸಿಲ ವಾತಾವರಣ ಬಹುತೇಕ ತಣಿಯಲಾರಂಭಿಸಿತ್ತು.