ಶೋಭಾರಿಂದ ನಾನು ರಾಜಕೀಯ ಕಲಿಯಬೇಕಾಗಿಲ್ಲ, ಸೋಲಿನ ಭೀತಿ ನನಗಿಲ್ಲ: ಪ್ರಮೋದ್ ಮಧ್ವರಾಜ್
ಉಡುಪಿ, ಎ.13: ಯಡಿಯೂರಪ್ಪ ಬಿಜೆಪಿ ಪಕ್ಷ ತೊರೆದು ಕೆಜೆಪಿ ಕಟ್ಟಿದಾಗ ಶೋಭಾ ಕರಂದ್ಲಾಜೆ ಕೂಡಾ ಬಿಜೆಪಿಗೆ ತ್ಯಜಿಸಿದ್ದರು. ತದನಂತರ ಕೆಜೆಪಿಯಿಂದ ರಾಜಾಜಿನಗರದಲ್ಲಿ ಸ್ಪರ್ಧಿಸಿ ಹೀನಾಯವಾಗಿ ಸೋಲು ಕಂಡಿರುವುದು ಜನತೆ ಇನ್ನೂ ಮರೆತಿಲ್ಲ. ದುರ್ಬಲರನ್ನು ಬಲಾಡ್ಯರನ್ನಾಗಿ ಮಾಡುವ ಬಲಾಡ್ಯರನ್ನು ದುರ್ಬಲರನ್ನಾಗಿ ಮಾಡುವ ಶಕ್ತಿ ಜನತೆಗಿದೆ. ಆ ಬಲಾಢ್ಯ ಶಕ್ತಿಯೇ ನನಗೆ ದೃಢತೆ ನೀಡಿದೆ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಹಾಲು ಜೇನಿನಂತೆ ಒಗ್ಗೂಡಿದ ಕಾಂಗ್ರೆಸ್ ಜೆಡಿಎಸ್ ಮೈತ್ರಿಕೂಟದಲ್ಲಿ ಸ್ಪರ್ಧಿಸುವ ನನ್ನ ಬಗ್ಗೆ ಶೋಭಾರಿಗೆ ಮಾತನಾಡುವ ಯಾವ ನೈತಿಕತೆಯೂ ಉಳಿದಿಲ್ಲ. ಕಳೆದ ಬಾರಿ ಮೋದಿ ಅಲೆಯಲ್ಲಿ ಗೆದ್ದವರು ಯಾವುದೇ ಅಭಿವೃದ್ಧಿ ಕೆಲಸ ಮಾಡದೆ ಜನರ ಸಮಸ್ಯೆಗೆ ಸ್ಪಂದಿಸದೆ ಜನತೆಗೆ ನಿರಾಸೆ ಮೂಡಿಸಿರು ವಾಗ ಈಗ ದ್ವಿತೀಯ ಬಾರಿಗೆ ಮೋದಿಗೆ ಮತ ನೀಡಿ ಎಂದು ಶೋಭಾ ಮತಯಾಚಿ ಸುತ್ತಿರುವುದು ಸೋಲಿನ ಭಯದಿಂದ ಅಲ್ಲವೇ ಎಂದು ಅವರು ಪ್ರಶ್ನಿಸಿದರು.
ಮೋದಿ ಆಡಳಿತ ಅವಧಿಯಲ್ಲಿ ದೇಶ ಕಂಡ ಆರ್ಥಿಕ ಸಂಕಷ್ಟ, ನಿರುದ್ಯೋಗ ಸಮಸ್ಯೆಯ ಉಲ್ಬಣಗಳು ಹಾಗೂ ದೇಶದ ಗಡಿ ಭಾಗಗಳಲ್ಲಿ ಉಗ್ರಗಾಮಿಗಳ ನುಸುಳುವಿಕೆ, ಸೈನಿಕರ ಸಾವು ಮತ್ತು ವಿವಿಧ ಧರ್ಮೀಯರಲ್ಲಿ ನಡೆದ ಘರ್ಷಣೆ ಗಳು ಬಲಿಷ್ಟ ಭಾರತದ ಸಂಕೇತವೇ? ಎಂದು ಶೋಭಾ ಉತ್ತರಿಸ ಬೇಕಾಗಿದೆ. ಸಶಕ್ತ ಭಾರತ ನಿರ್ಮಾಣಗೊಳ್ಳುವಲ್ಲಿ ಕಾಂಗ್ರೆಸ್ ಪಕ್ಷದ ಕೊಡುಗೆ ಅಪಾರ ಎಂದು ಅವರು ಹೇಳಿದ್ದಾರೆ.
ಆಯುಷ್ಮಾನ್ ಭಾರತ ಯೋಜನೆಯು ಶೇ.40ರಷ್ಟು ರಾಜ್ಯದ ಅನುದಾನ ಹಾಗೂ ಶೇ.60ರಷ್ಟು ಕೇಂದ್ರದ ಅನುದಾನಗಳೊಂದಿಗೆ ಜಂಟಿ ಸಹಭಾಗಿತ್ವದಲ್ಲಿ ಪ್ರಾರಂಭಗೊಂಡಿದೆ. ಒಂದು ಕುಟುಂಬಕ್ಕೆ 5 ಲಕ್ಷವರೆಗಿನ ವೈದ್ಯಕೀಯ ವೆಚ್ಚ ಭರಿಸುವ ಅಧ್ಬುತ ಯೋಜನೆಯಾಗಿದ್ದು ಕೋಟ್ಯಾಂತರ ಜನರು ಇದರ ಫಲಾನುಭವಿಗಳಾಗಿದ್ದಾರೆ. ಆದರೆ 2011ರಲ್ಲಿ ಸ್ವಾಸ್ಥ ಭಿಮಾ ಯೋಜನೆಯ ಅನುಸಾರ ಯಾರ ಹೆಸರು ನೋಂದಾವಣೆಯಾಗಿದೆಯೋ ಅವರು ಮಾತ್ರ ಫಲಾನುಭವಿಗಳಾಗಿದ್ದಾರೆ. ಆದರೆ ಕರ್ನಾಟಕದಲ್ಲಿ ಮಾತ್ರ ಆಯುಷ್ಮಾನ್ ಹಾಗೂ ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ರಾಜ್ಯದ ಎಲ್ಲಾ ಬಿಪಿಎಲ್ ಕಾರ್ಡ್ ಹೊಂದಿದ ಕುಟಂಬದವರಿಗೆ 5 ಲಕ್ಷ ರೂ.ವರೆಗಿನ ವೈದ್ಯಕೀಯ ವೆಚ್ಚಗಳು ಉಚಿತವಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.
ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ತನ್ನ 5 ವರ್ಷದ ಶಾಸಕತ್ವದ ಅವಧಿಯಲ್ಲಿ ಸುಮಾರು 21,000 ಕುಟಂಬಗಳಿಗೆ ಬಿಪಿಎಲ್ ಕಾರ್ಡ್ ಸಿಗುವಂತೆ ಮಾಡಿ ದ್ದೇನೆ. ಅವರೆಲ್ಲರೂ ಕೂಡಾ ಆರೋಗ್ಯ ಕರ್ನಾಟಕ ಯೋಜನೆಯ ಫಲಾನು ಭವಿಗಳಾಗಿದ್ದಾರೆ. ರಾಜ್ಯದಲ್ಲಿ ಮಾತ್ರ ಎಪಿಎಲ್ ಕಾರ್ಡ್ ಹೊಂದಿದವರಿಗೆ ಶೇ.30 ಆರೋಗ್ಯ ವೆಚ್ಚವನ್ನು ಸರಕಾರ ಭರಿಸುತ್ತದೆ ಉಳಿದ ಶೇ.70 ವೆಚ್ಚವನ್ನು ಫಲಾನುಭವಿಗಳೇ ಭರಿಸಬೇಕಾಗುತ್ತದೆ. ದೇಶದ ಅಭಿವೃದ್ಧಿಗಾಗಿ ಹಾಗೂ ಭದ್ರತೆಗಾಗಿ ಕಾಂಗ್ರೆಸ್ ನೀಡಿದ ಕೊಡುಗೆಯನ್ನು ಕೇವಲ 5 ವರ್ಷಗಳ ಆಡಳಿತದಿಂದ ಮರೆಮಾಚಲು ಯಾರಿಂದಲೂ ಅಸಾಧ್ಯ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.