ಉಡುಪಿ: ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಸಿಪಿಎಂ ಮನವಿ
ಉಡುಪಿ, ಎ.13: ದೇಶದಲ್ಲಿ ಈಗ 17ನೇ ಲೋಕಸಭೆಗಾಗಿ ನಡೆದಿರುವ ಚುನಾವಣೆ ಹಿಂದಿನಂತಲ್ಲದೇ, ಭಾರತದ ಭವಿಷ್ಯವನ್ನು ನಿರ್ಧರಿಸುವ ಮಹತ್ವದ ಚುನಾವಣೆಯಾಗಿದೆ. ಏಕೆಂದರೆ ನಮ್ಮ ಜಾತ್ಯತೀತ ಪ್ರಜಾಪ್ರಭುತ್ವ ಅಪಾಯ ದಲ್ಲಿದೆ. ಕಳೆದ ಐದು ವರ್ಷಗಳಲ್ಲಿ ನರೇಂದ್ರ ಮೋದಿ ನಾಯಕತ್ವದ ಎನ್ಡಿಎ ಸರಕಾರ ನಮ್ಮ ಸಂವಿಧಾನದ ನಾಲ್ಕು ಆಧಾರಸ್ತಂಭಗಳು ಹಾಗೂ ಸಂಸ್ಥೆಗಳನ್ನು ಬುಡಮೇಲು ಮಾಡಲು ಹೊರಟಿವೆ. ಈ ಸರಕಾರವನ್ನು ಅಧಿಕಾರದಿಂದ ಕೆಳಗಿಳಿಸಿ ನಮ್ಮ ಸಾಂವಿಧಾನಿಕ ಗಣತಂತ್ರವನ್ನು ರಕ್ಷಿಸುವುದು ನಮ್ಮ ಪ್ರಧಾನ ಆದ್ಯತೆಯಾಗಬೇಕು ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಉಡುಪಿ ಜಿಲ್ಲಾ ಸಮಿತಿ ಮತದಾರರಲ್ಲಿ ಮನವಿ ಮಾಡಿದೆ.
ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಪಿಎಂನ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಕಳೆದ ಐದು ವರ್ಷಗಳಲ್ಲಿ ಮೋದಿ ಸರಕಾರ ಸಾರ್ವಜನಿಕ ಉದ್ದಿಮೆಯನ್ನು ನಾಶ ಮಾಡಿ ಖಾಸಗಿಗೆ ಉತ್ತೇಜನ ನೀಡಲು ಪ್ರಯತ್ನ ಪಟ್ಟಿದೆ. ಅಲ್ಲದೇ ದೇಶದ ಕೋಮುಸೌಹಾರ್ದತೆಯನ್ನು ಕೆಡಿಸಲು ಸ್ವತಹ ಮೋದಿ ಸೇರಿದಂತೆ ಎಲ್ಲರೂ ಪ್ರಯತ್ನಿಸುತಿದ್ದಾರೆ ಎಂದವರು ಆರೋಪಿಸಿದರು.
ಸಂವಿಧಾನದ ನಾಲ್ಕು ಆಧಾರಸ್ತಂಭಗಳಾದ ಜಾತ್ಯತೀತ ಪ್ರಜಾಪ್ರಭುತ್ವ, ಆರ್ಥಿಕ ಸ್ವಾವಲಂಬನೆ, ಸಾಮಾಜಿಕ ನ್ಯಾಯ ಹಾಗೂ ಒಕ್ಕೂಟ ತತ್ವ ಈಗ ನಿಜವಾಗಿಯೂ ಅಪಾಯದಲ್ಲಿದ್ದು, ಅದನ್ನು ನಾವು ರಕ್ಷಿಸಬೇಕಾಗಿದೆ. ಇವುಗಳ ರಕ್ಷಣೆ ಜಾತ್ಯತೀತ ಸರಕಾರದಿಂದ ಮಾತ್ರ ಸಾಧ್ಯ. ಈ ಹಿನ್ನೆಲೆಯಲ್ಲಿ ದೇಶದ ಮತದಾರರು ಬಿಜೆಪಿ ಹಾಗೂ ಅದರ ಮೈತ್ರಿಕೂಟವನ್ನು ಸೋಲಿಸುವಂತೆ ಪಕ್ಷದ ಪರವಾಗಿ ಅವರು ಕರೆ ನೀಡಿದರು.
ಇಂದು ದೇಶದ ಜಾತ್ಯತೀತ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಗೋರಕ್ಷಣೆ, ನೈತಿಕ ಪೊಲೀಸ್ಗಿರಿ ಮತ್ತು ಧರ್ಮ ರಕ್ಷಣೆಗಳ ಹೆಸರಿನಲ್ಲಿ ಖಾಸಗಿ ಸೇನೆಗಳು ಯಾವುದೇ ಎಗ್ಗಿಲ್ಲದೇ ದಲಿತರು, ಮುಸ್ಲಿಮರು, ಮಹಿಳೆಯರ ಮೇಲೆ ಹಿಂಸಾತ್ಮಕ ದಾಳಿ, ದೌರ್ಜನ್ಯಗಳನ್ನು ನಡೆಸುತ್ತಿವೆ. ಕೋಮುವಾದೀಕರಣ ಹಾಗೂ ಮನುವಾದೀಕರಣ ವಿಷದಂತೆ ಹರಡುತಿದ್ದು, ಸಾಮಾಜಿಕ ಸೌಹಾರ್ದತೆ ಸಂಪೂರ್ಣ ಕದಡಿದೆ. ಉಚ್ಛ ಶಿಕ್ಷಣ ಸಂಸ್ಥೆಗಳನ್ನು ನಾಶಪಡಿಸುವ ಅಥವಾ ಅವುಗಳನ್ನು ಕೋಮುವಾದೀಕರಣಗೊಳಿಸುವ ಉದ್ದೇಶದಿಂದ ದಾಳಿ ನಡೆಯುತ್ತಿದೆ. ಕಾರ್ಮಿಕರು, ರೈತರು ಮತ್ತಿತರರ ಹಕ್ಕುಗಳನ್ನು ಧಮನಿಸಲಾ ಗುತ್ತಿದೆ. ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ ಅಭಿವ್ಯಕ್ತ ಸ್ವಾತಂತ್ರವನ್ನು ಹತ್ತಿಕ್ಕ ಲಾಗುತ್ತಿದೆ ಎಂದವರು ಆರೋಪಿಸಿದರು.
ರಾಜ್ಯ ಸಮಿತಿ ಸದಸ್ಯ ಕೆ.ಶಂಕರ್ ಮಾತನಾಡಿ, ಸುಳ್ಳು ಹೇಳುವುದೇ ಕೇಂದ್ರ ಸರಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆಯಾಗಿದೆ. ಪ್ರಣಾಳಿಕೆಯಲ್ಲಿ ನೀಡಿದ ಯಾವೊಂದು ಭರವಸೆಯನ್ನು ಈಡೇರಿಸದ ಈ ಸರಕಾರ, ಆಶ್ವಾಸನೆ ನೀಡಿದಂತೆ ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುವ ಬದಲು ಒಂದು ಕೋಟಿಗೂ ಅಧಿಕ ಮಂದಿಯ ಉದ್ಯೋಗವನ್ನು ಕಸಿದುಕೊಂಡಿದೆ. ಆದುದರಿಂದ ಈ ಬಾರಿ ಮತದಾರರು ಈ ಸರಕಾರದ ಬದಲಾವಣೆಗೆ ಮತ ನೀಡುತ್ತಾರೆಂಬ ವಿಶ್ವಾಸ ನಮಗಿದೆ ಎಂದರು.
ಈ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸುತ್ತಿರುವ ಸಿಪಿಎಂನ ಅಭ್ಯರ್ಥಿ ಎಸ್.ವರಲಕ್ಷ್ಮಿ ಹಾಗೂ ಬೆಂಗಳೂರು ಕೇಂದ್ರದಿಂದ ಪಕ್ಷೇತರರಾಗಿ ಸ್ಪರ್ಧಿಸುತ್ತಿರುವ ಪ್ರಕಾಶ್ ರೈಯವರನ್ನು ಹೊರತು ಪಡಿಸಿ ರಾಜ್ಯದ ಉಳಿದೆಲ್ಲಾ ಕಡೆ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಬಲ್ಲ ಅಭ್ಯರ್ಥಿಯನ್ನು ಬೆಂಬಲಿಸಲು ನಿರ್ಧರಿಸಲಾಗಿದೆ ಎಂದರು.
ಇದರಂತೆ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ರನ್ನು ಬೆಂಬಲಿಸಲಾ ಗುವುದು ಎಂದು ಬಾಲಕೃಷ್ಣ ಶೆಟ್ಟಿ ತಿಳಿಸಿದರು. ಬೈಂದೂರು ಮತ್ತು ಕುಂದಾಪುರ ತಾಲೂಕುಗಳಲ್ಲಿ ರಾಜಕೀಯ ಸಮಾವೇಶಗಳನ್ನು ನಡೆಸಿ ಮೈತ್ರಿ ಅಭ್ಯರ್ಥಿ ಪರವಾಗಿ ಮತಯಾಚನೆ ಮಾಡಲಾಗಿದೆ ಎಂದೂ ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುರೇಶ ಕಲ್ಲಾಗರ ಹಾಗೂ ವೆಂಕಟೇಶ ಕೋಣಿ ಉಪಸ್ಥಿತರಿದ್ದರು.