ಶ್ರೀಕೃಷ್ಣ ಮಠದಲ್ಲಿ ಧನ್ವಂತರಿ ಚಿಕಿತ್ಸಾಲಯ ಉದ್ಘಾಟನೆ
ಉಡುಪಿ, ಎ.13: ಸಮಾಜದ ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯ ಕಲ್ಪಿಸುವ ನಿಟ್ಟಿನಲ್ಲಿ ಪರ್ಯಾಯ ಶ್ರೀಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು ಶ್ರೀಕೃಷ್ಣ ಮಠದ ಪರಿಸರದಲ್ಲಿ ನಿರ್ಮಿಸಿದ ಧನ್ವಂತರಿ ಚಿಕಿತ್ಸಾಲಯದ ಉದ್ಘಾಟನೆ ಇಂದು ಸಂಜೆ ನೆರವೇರಿತು.
ಶ್ರೀಕೃಷ್ಣ ಮಠದ ರಾಜಾಂಗಣದ ಬಳಿ ಇದ್ದ ಆನೆ ಲಾಯದ ಜಾಗದಲ್ಲಿ ಪರ್ಯಾಯ ಶ್ರೀ ವಿಶೇಷ ಆಸಕ್ತಿಯಿಂದ ಸುಸಜ್ಜಿತವಾದ ಚಿಕಿತ್ಸಾ ಕೇಂದ್ರ ನಿರ್ಮಾಣಗೊಂಡಿದು, ಇದನ್ನು ಇಂದು ಶ್ರೀರಾಮನವಮಿಯ ಪರ್ವಕಾಲದಲ್ಲಿ ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶ ತೀರ್ಥರು, ಅದಮಾರು ಕಿರಿಯ ಯತಿಗಳಾದ ಶ್ರೀಈಶಪ್ರಿಯ ತೀರ್ಥರೊಂದಿಗೆ ಉದ್ಘಾಟಿಸಿ ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪಲಿಮಾರುಶ್ರೀಗಳು ಸಮಾಜದ ಉತ್ತಮ ಸ್ವಾಸ್ಥಕ್ಕೆ ಜನರ ಆರೋಗ್ಯವೇ ಮುಖ್ಯ. ಅದಕ್ಕಾಗಿಯೇ ಹಿರಿಯರು ‘ಆರೋಗ್ಯವೇ ಭಾಗ್ಯ’ ಎಂದು ಕರೆದಿದ್ದಾರೆ ಎಂದರು.
ಅತಿಥಿಗಳಾಗಿ ಭಾಗವಹಿಸಿದ್ದ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಡಾ.ಜಿ ಶಂಕರ್ ಮಾತನಾಡಿ, ಉತ್ತಮ ಆರೋಗ್ಯ ಸೇವಾ ಕೇಂದ್ರವನ್ನು ಶ್ರೀಗಳು ಆರಂಭಿಸಿದ್ದಾರೆ. ಮುಂದಿನ ಎಲ್ಲಾ ಪರ್ಯಾಯ ಶ್ರೀಗಳು ಇದನ್ನು ಮುಂದುವರಿಸಿಕೊಂಡು ಹೋಗಬೇಕು. ಚಿಕಿತ್ಸಾಲಯಕ್ಕೆ ಬೇಕಾದ ಇಸಿಜಿ ಮಿಷಿನ್ ಮತ್ತು ಔಷಧಗಳ ವೆಚ್ಚವನ್ನು ಭರಿಸುವುದಾಗಿ ಭರವಸೆ ನೀಡಿದರು.
ಅತಿಥಿಗಳಾಗಿ ಮೈಸೂರಿನ ಡಾ.ಡಿ.ಸುಧನ್ವ, ಗುರುರಾಜ್, ಮನೋವೈದ್ಯ ಡಾ.ಪಿ.ವಿ.ಭಂಡಾರಿ, ಚ್ಯವನ ಲ್ಯಾಬ್ನ ಎ.ಪಿ.ಭಟ್, ಉದ್ಯಮಿ ಜಯ ಆಚಾರ್ಯ, ಸ್ಥಳೀಯ ಪದ್ಮರಾಜ್ ಮೊದಲಾದವರು ಭಾಗವಹಿಸಿದ್ದರು.