ಮಿಥುನ್ ರೈ ಗರಿಷ್ಠ ಅಂತರಗಳ ಗೆಲುವಿಗೆ ಕಾರ್ಯಕರ್ತರು ಶ್ರಮಿಸಬೇಕು: ಕೆ.ಸಂಜೀವ ಪೂಜಾರಿ
ಬಂಟ್ವಾಳ, ಎ. 13: ದ.ಕ.ಜಿಲ್ಲಾ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಅವರನ್ನು ಗರಿಷ್ಟ ಅಂತರಗಳ ಮತದಿಂದ ಗೆಲ್ಲಿಸುವಂತೆ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಪ್ರಚಾರ ಸಮಿತಿ ಮತ್ತು ದ.ಕ.ಜಿಲ್ಲಾ ಮೂರ್ತೆದಾರರ ಮಹಾಮಂಡಲ ಅಧ್ಯಕ್ಷ ಕೆ.ಸಂಜೀವ ಪೂಜಾರಿ ಮನವಿ ಮಾಡಿದ್ದಾರೆ.
ಅವರು ಶನಿವಾರ ಕರಿಯಂಗಳ ಗ್ರಾಮದ ಪುಂಚಮೆಯಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಉದ್ದೇಶಿಸಿ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ಗೆಲ್ಲದಿದ್ದರೆ ಕುದ್ರೋಳಿ ದೇವಸ್ಥಾನ, ಮಸೀದಿ ಮತ್ತು ಚರ್ಚ್ಗೆ ಹೋಗುವುದಿಲ್ಲ ಎಂದು ಕೇಂದ್ರ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಅವರು ಶಪಥ ಮಾಡಿದ್ದಾರೆ. ಹಾಗಾಗಿರುವಾಗ ಪೂಜಾರಿ ಅವರ ಪ್ರತಿಜ್ಞೆ ಪೂರೈಸುವುದು ನಮ್ಮೆಲ್ಲರ ಕರ್ತವ್ಯ. ಕಾಂಗ್ರೆಸ್ ಅಭ್ಯರ್ಥಿಯನ್ನು ಶತಾಯಗತಾಯ ಗೆಲ್ಲಿಸಬೇಕು ಎಂದು ಅವರು ಹೇಳಿದ್ದಾರೆ.
ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಬಿ.ರಮಾನಾಥ ಅವರು ಸುದೀರ್ಘ ಅವಧಿಯಲ್ಲಿ ಶಾಸಕರಾಗಿ, ಸಚಿವರಾಗಿ, ಜನ ನಾಯಕನಾಗಿ ಮಾಡಿದ ಅಭಿವೃದ್ಧಿ ಕೆಲಸಗಳು ಒಂದೆರಡಲ್ಲ. ಅವರ ಅಭಿವೃದ್ಧಿ ಕೆಲಸಗಳನ್ನು ಮತದಾರರರು ಗಮನಿಸಿದ್ದು, ಮುಂದಕ್ಕೆ ಇನ್ನಷ್ಟು ಅಭಿವೃದ್ಧಿಗಾಗಿ ಕಾಂಗ್ರೆಸ್ಅನ್ನು ಗೆಲ್ಲಿಸುವ ವಿಶ್ವಾಸವಿದೆ ಎಂದರು.
ಬ್ರಹ್ಮಶ್ರೀ ನಾರಾಯಣಗುರು ಜಯಂತಿಯನ್ನು ಸರಕಾರದ ಮಟ್ಟದಲ್ಲಿ ಆಚರಣೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರಣವಾಗಿದ್ದು, ಇದರಲ್ಲಿ ರಮಾನಾಥ ರೈ ಅವರ ಪ್ರಯತ್ನವನ್ನು ಮರೆಯಲಾಗದು. ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ಒಬ್ಬ ಪ್ರಚಾರ ಸಮಿತಿ ಅಧ್ಯಕ್ಷನಾಗಿ ನಿತ್ಯವೂ ಸಂಚರಿಸಿದ್ದು, ಮತದಾರರಲ್ಲಿ ಇರುವಂತಹ ಉತ್ಸಾಹ, ಬದಲಾವಣೆ ಬಯಸುತ್ತಿರುವ ವಿಚಾರ ಮನದಟ್ಟಾಗಿದೆ. ಇನ್ನಷ್ಟು ದೊಡ್ಡ ಸಂಖ್ಯೆಯಲ್ಲಿ ಕಾಂಗ್ರೆಸನ್ನು ಬೆಂಬಲಿಸುವ ಮೂಲಕ ರಾಜ್ಯದಲ್ಲಿ ರಾಷ್ಟ್ರದಲ್ಲಿ ಸಮರ್ಥ ಸರಕಾರಕ್ಕೆ ಬೆಂಬಲಿಸಬೇಕು ಎಂದು ಅವರು ವಿನಂತಿಸಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತರು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಇನ್ನುಳಿದ ಬೆರಳೆಣಿಕೆಯ ದಿನಗಳಲ್ಲಿ ಮತದಾರರ ಮನೆ, ಮನೆಯನ್ನು ಮುಟ್ಟುವ ಮೂಲಕ ಅಭ್ಯರ್ಥಿಯನ್ನು ಗೆಲ್ಲಿಸುವಲ್ಲಿ ಪಣತೊಡಬೇಕು. ಕಾಂಗ್ರೆಸ್ ಗೆಲುವು ಜನ ಸಾಮಾನ್ಯರ ಗೆಲುವು ಎಂದು ಅಭಿಪ್ರಾಯಪಟ್ಟರು.
ವೇದಿಕೆಯಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ, ವಲಯ ಅಧ್ಯಕ್ಷ ರಾಜು ಕೋಟ್ಯಾನ್, ಬೂತ್ ಅಧ್ಯಕ್ಷ ಅಬ್ದುಲ್ ಖಾದರ್ ಕಲ್ಕುಟ, ಜಗದೀಶ ದೇವಾಡಿಗ, ಲಕ್ಷ್ಮೀಶ ಶೆಟ್ಟಿ, ಚಂದ್ರಶೇಖರ ಪೊಳಲಿ, ಪಾಣೆಮಂಗಳೂರು ಬ್ಲಾಕ್ ಕಾರ್ಯದರ್ಶಿ ಚಂದ್ರಹಾಸ್, ಪಕ್ಷ ಪ್ರಮುಖರಾದ ಚೇತನ್ ಸಾಲ್ಯಾನ್, ಜಗದೀಶ ಕುಲಾಲ್, ಅಬ್ದುಲ್ ಬಶೀರ್, ಮುಹಮ್ಮದ್, ಗ್ರಾಪಂ ಸದಸ್ಯೆ ವೀಣಾ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.