ಚೌಕಿದಾರ್ ಪ್ರಾಮಾಣಿಕರಾಗಿದ್ದಲ್ಲಿ ರಫೇಲ್ ಕಡತ ಕಾಣೆಯಾಗುತ್ತಿರಲಿಲ್ಲ- ಯು.ಟಿ. ಖಾದರ್
ಪುತ್ತೂರು: ತಾನೊಬ್ಬ ಚೌಕೀದಾರ್ ಎಂದು ಹೇಳಿ ಪ್ರಚಾರ ಗಿಟ್ಟಿಸಿಕೊಂಡ ಮೋದಿಯವರು ತನ್ನ ಆ ಕೆಲಸವನ್ನು ನಿಯತ್ತಾಗಿ ಮಾಡುತ್ತಿದ್ದಲ್ಲಿ ರಫೇಲ್ ಕಡತ ಕಾಣೆಯಾಗುತ್ತಿರಲಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು ಟಿ ಖಾದರ್ ಹೇಳಿದರು.
ಅವರು ಶುಕ್ರವಾರ ರಾತ್ರಿ ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರಿನ ಗಾಳಿಮುಖದಲ್ಲಿ ನಡೆದ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಪ್ರಚಾರ ಸಭೆಯಲ್ಲಿ ಮಾತನಾಡಿ ಮೋದಿಯವರಿಗೆ ಅಧಿಕಾರಕ್ಕೆ ಬರುವ ಮೊದಲು ಹೇಳಿದ್ದ ಮಾತುಗಳು ಭರವಸೆಗಳು ಇವತ್ತು ಯಾವುದೂ ನೆನಪಿಲ್ಲ . ಈ ಚುನಾವಣಾ ಸಂದರ್ಭದಲ್ಲಿ ಹೇಳಿದ್ದು ಮುಂದೆಯೂ ನೆನಪಿರಲು ಸಾಧ್ಯವಿಲ್ಲ ಆದ್ದರಿಂದ ಮತದಾರರು ಯೋಚಿಸಿ ಮತಯಾಚನೆ ಮಾಡಬೇಕಾಗಿದೆ ಎಂದರು.
ದೇಶದ ಭದ್ರತೆಗೆ ಅಪಾಯವಿದೆ, ರೈತರ ಕಷ್ಟ ಕೇಳುವವರಿಲ್ಲ, ಕಾರ್ಮಿರ ಕಷ್ಟಗಳಿಗೆ ಸ್ಪಂದನೆಯಿಲ್ಲ, ಸರಕಾರಿ ಉದ್ಯೋಗಿಗಳಿಗೆ ಬೆಲೆ ಸಿಗುತ್ತಿಲ್ಲ, ಸಾಮಾನ್ಯ ಜನರ ಬದುಕು ದುಸ್ತರವಾಗಿದೆ. ಇದಕ್ಕೆಲ್ಲ ಪರಿಹಾರ ಸಿಗಬೇಕಾದರೆ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿ ಮಿಥುನ್ ರೈ ನಮ್ಮ ಸಂಸದರಾಗಬೇಕು ಆಮೂಲಕ ರಾಹುಲ್ ಗಾಂಧಿಯವರು ಪ್ರಧಾನಿಯಾಗಬೇಕು ಎಂದು ಹೇಳಿದರು.
ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ.ಬಿ. ಸದಾಶಿವ ಮಾತನಾಡಿ ಅಡಿಕೆ ಬೆಳೆಗಾರರ ಸಂಕಷ್ಠಕ್ಕೆ ಕೇಂದ್ರ ಸರಕಾರ ಸ್ಪಂದಿಸಿಲ್ಲ. ಬರ್ಮಾ ,ಮಲೇಷ್ಯಾ ಶ್ರೀ ಲಂಕಾದಿಂದ ಅಡಿಕೆ ಭಾರತ ಪ್ರವೇಶಿಸುತ್ತಿದೆ. ಅದನ್ನು ತರಿಸುವ ದೊಡ್ಡ ಡೀಲರ್ ಬಿಜೆಪಿ ನಾಯಕ ಅಮಿತ್ ಷಾ ರವರ ಮಗ ಅದರಿಂದಾಗಿ ನಮ್ಮ ಅಡಿಕೆಗೆ ಬೆಲೆಯಿಲ್ಲದಾಗಿದೆ. ಇದರಿಂದಾಗಿ ನಮ್ಮ ಜಿಲ್ಲೆಯಲ್ಲಿ ವ್ಯವಹಾರಗಳು ಕಡಿಮೆಯಾಗಿದೆ , ವ್ಯಾಪಾರಿಗಳು ನಷ್ಟ ಅನುಭವಿಸುವಂತಾಗಿದೆ. ರಬ್ಬರ್ , ಕಾಳುಮೆಣಸು ಸೇರಿದಂತೆ ಎಲ್ಲಾ ಉತ್ಪನ್ನಗಳ ಪರಿಸ್ಥಿತಿ ಯೂ ಅದೇ ಆಗಿದೆ. ಇದರ ಬಗ್ಗೆ ಸಂಸತ್ ನಲ್ಲಿ ಮಾತನಾಡಲು ಸಮರ್ಥ ಸಂಸದರಿಲ್ಲ. ನಾವು ನಮ್ಮ ಜಿಲ್ಲೆಯ ಅಭಿವೃದ್ಧಿ ಬಯಸುವವರಾದರೆ ಮಿಥುನ್ ರೈಯನ್ನು ಸಂಸದರನ್ನಾಗಿ ಆಯ್ಕೆ ಮಾಡಿ ಕಳುಹಿಸಿಕೊಡಬೇಕು ಹಾಗಾದಾಗ ನಮ್ಮ ಜಿಲ್ಲೆ ಅಭಿವೃದ್ಧಿ ಯಾಗುತ್ತದೆ ಎಂದರು.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ , ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷ ಯು ಲೋಕೇಶ್ ಹೆಗ್ಡೆ ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ಸ್ಥಳೀಯ ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀ ಮತಿ ಅನಿತಾ ಹೇಮನಾಥ್ ಶೆಟ್ಟಿ ಮಾತನಾಡಿದರು.
ವೇದಿಕೆಯಲ್ಲಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಕಣಚ್ಚೂರು ಮೋನು, ಪುತ್ತೂರು ಬ್ಲಾಕ್ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷ ಫಝ್ಲುಲ್ ರಹೀಂ, ಮೂರ್ತೆ ದಾರರ ಸಹಕಾರಿ ಸಂಘದ ಅಧ್ಯಕ್ಷ ವೇದನಾಥ ಸುವರ್ಣ, ನಗರ ಕಾಂಗ್ರೆಸ್ ಮಾಜಿ ಅಧ್ಯಕ್ಷ ಲ್ಯಾನ್ಸಿ ಮಸ್ಕರೇನಸ್, ನಗರಸಭಾ ಮಾಜಿ ಸದಸ್ಯ ಮಹಮ್ಮದ್ ಅಲಿ, ಮಹಿಳಾನಾಥ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ನೆಟ್ಟಣಿಗೆ ಮುಡ್ನೂರು ಗ್ರಾ.ಪಂ ಉಪಾಧ್ಯಕ್ಷ ಶ್ರೀರಾಮ್ ಪಕ್ಕಳ ಸ್ವಾಗತಿಸಿ ವಂದಿಸಿದರು.