ಉಡುಪಿ: ವಿಶಿಷ್ಠ ರೀತಿಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ
ಉಡುಪಿ, ಎ.14: ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಂಘಟನೆ ಗಳ ಸಹಯೋಗದಲ್ಲಿ ಮಣಿಪಾಲ ರಜತಾದ್ರಿಯಲ್ಲಿರುವ ಜಿಪಂ ಸಭಾಂಗಣದಲ್ಲಿ ಸಂವಿಧಾನ ಶಿಲ್ಪಿ, ಭಾರತರತ್ನ ಡಾ.ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನವನ್ನು ರವಿವಾರ ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದ ಪ್ರಯುಕ್ತ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಉದ್ಘಾಟನೆ ನಂತರ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ನಿರ್ದೇಶನ ದಂತೆ ‘ಹ್ಯಾಪ್ ಬರ್ತ್ ಡೇ’ ಅಂಬೇಡ್ಕರ್ ಎಂಬ ಕೇಕ್ನ್ನು ಈ ದಿನ ಜನಿಸಿದ ಉಡುಪಿ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿ ವಿಶಾಲ ಅವರಿಂದ ಕತ್ತರಿಸಲಾಯಿತು. ಈ ವೇಳೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಂಘಟನೆಗಳ ಪದಾಧಿಕಾರಿಗಳು ಹಾಜರಿದ್ದರು.
ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಮಾತನಾಡಿ, ಡಾ.ಬಿ.ಆರ್. ಅಂಬೇಡ್ಕರ್ ಎಲ್ಲಾ ಸಮುದಾಯಗಳಲ್ಲಿ ಸಮಾನತೆ ಇರಬೇಕುವ ಎನ್ನುವ ಆಶಯ ಹೊಂದಿದ್ದು, ಅವರ ಆಶಯದಂತೆ ಚುನಾವಣೆ ಎನ್ನುವುದು ಸಮಾನತೆಯ ಸಂಕೇತವಾಗಿದೆ. ಚುನಾವಣೆಯಲ್ಲಿ ಜಾತಿಬೇಧವಿಲ್ಲದೆ, ಪುರುಷ, ಮಹಿಳೆ, ಅಂಗವಿಕಲರು, ತೃತೀಯ ಲಿಂಗಿಗಳು ಎಲ್ಲರಿಗೂ ಸಮನಾದ ಅವಕಾಶ ನೀಡಲಾಗಿದೆ. ಅಂಬೇಡ್ಕರ್ ಆಶಯದಂತೆ ಜಿಲ್ಲಾಡಳಿತದಿಂದ ಜಿಲ್ಲೆಯ ಶೋಷಿತರು, ಬಲಹೀನರು, ಅವಕಾಶ ವಂಚಿತರಿಗೆ, ಸೌಲಭ್ಯ ವಂಚಿತ ಫಲಾನುಭವಿಗಳಿಗೆ ನ್ಯಾಯ ಒದಗಿಸಲು ಕ್ರಮ ಕೈಗೊ್ಳಲಾಗುವುದು ಎಂದು ಹೇಳಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರ ವ್ಯಕ್ತಿತ್ವ ಮತ್ತು ಜೀವನದ ಬಗ್ಗೆ ವಿಶೇಷ ಉಪನ್ಯಾಸ ನೀಡಿದ ಉಪನ್ಯಾಸಕ ಡಾ.ವಾಸುದೇವ ಬೆಳ್ವೆ, ಅಂಬೇಡ್ಕರ್ ಎಲ್ಲಾ ಸಮುದಾಯಗಳಿಗೆ ಸಮಾನ ಆದ್ಯತೆ ನೀಡಿದ್ದರು. ಅಧಿಕಾರ ವಿಕೇಂದ್ರಿಕರಣ, ಆದರ್ಶ ರಾಜ್ಯದ ಪರಿಕಲ್ಪನೆಯನ್ನು ಹೊಂದಿದ್ದರು. ಅಧಿಕಾರ ಎನ್ನುವುದು ಎಲ್ಲಾ ಸಮುದಾಯಗಳಿಗೆ ಸಮಾನವಾಗಿ ದೊರೆಯಬೇಕು ಮತ್ತು ಜಾತಿ ಮುಖ್ಯ ಅಲ್ಲ, ಸಮಾನತೆ ಮುಖ್ಯ ಎಂಬ ಚಿಂತನೆ ಅವರದ್ದಾಗಿತ್ತು ಎಂದರು.
ಕಾರ್ಯಕ್ರಮವನ್ನು ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕರಿ ಸಿಂಧೂ ಬಿ.ರೂಪೇಶ್ ಉದ್ಘಾಟಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಷಾ ಜೇಮ್ಸ್, ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಪೌರಾಯುಕ್ತ ಆನಂದ್ ಕಲ್ಲೋಳಿಕರ್ ಉಪಸ್ಥಿತರಿದ್ದರು. ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಭುಜಬಲಿ ಸ್ವಾಗತಿಸಿ, ವಂದಿಸಿದರು. ಬಳಿಕ ವಿವಿಧ ಇಲಾಖೆಯ ಎಲ್ಲಾ ಅಧಿಕಾರಿ, ಸಿಬ್ಬಂದಿ, ಸಾರ್ವಜನಿಕರಿಗೆ ಕೇಕ್ ವಿತರಿಸಲಾಯಿತು.