ಮಂಗಳೂರು: ಅಗ್ನಿಶಾಮಕ ಇಲಾಖೆಯಿಂದ ಸೇವಾ ಸಪ್ತಾಹ
ಮಂಗಳೂರು, ಎ.14: ಮುಂಬೈ ಬಂದರಿನಲ್ಲಿ 1944ರ ಎಪ್ರಿಲ್ 14ರಂದು ಮದ್ದು ಗುಂಡುಗಳನ್ನು ಸಾಗಿಸುತ್ತಿದ್ದ ಪೋರ್ಟ್ಸ್ಟ್ರಿಕಾನ್ ಎಂಬ ಹಡಗು ಘೋರ ಅಗ್ನಿ ಅನಾಹುತಕ್ಕೆ ಒಳಗಾಗಿದ್ದು, ಆ ಬೆಂಕಿಯನ್ನು ನಂದಿಸಲು ಮುಂಬೈ ಫೈರ್ ಬ್ರಿಗೇಡ್ನ ಅಧಿಕಾರಿ/ಸಿಬ್ಬಂದಿ ವರ್ಗ ಕಾರ್ಯನಿರತರಾಗಿದ್ದಾಗ ಹಡಗು ಸ್ಫೋಟಗೊಂಡು 66 ಮಂದಿ ಅಧಿಕಾರಿ ಮತ್ತು ಸಿಬ್ಬಂದಿಗಳು ವೀರ ಮರಣ ಹೊಂದಿದರು. ಈ ಹುತಾತ್ಮರ ನೆನಪಿಗಾಗಿ ಪ್ರತೀ ವರ್ಷ ಎ.14ರಿಂದ 20ರವರೆಗೆ ದೇಶಾದ್ಯಂತ ಸಪ್ತಾಹ ಆಚರಿಸಲಾಗುತ್ತಿದೆ.
ರವಿವಾರ ನಗರದ ಕದ್ರಿ ಅಗ್ನಿಶಾಮಕ ಠಾಣಾ ಆವರಣದಲ್ಲಿ ಪಾಂಡೇಶ್ವರ ಮತ್ತು ಕದ್ರಿ ಅಗ್ನಿಶಾಮಕ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗವು ಮಂಗಳೂರು ಪ್ರಾಂತ ಮುಖ್ಯ ಅಗ್ನಿಶಾಮಕ ಅಧಿಕಾರಿಯ ನೇತೃತ್ವದಲ್ಲಿ ಹುತಾತ್ಮರಾದ ಅಧಿಕಾರಿ ಹಾಗೂ ಸಿಬ್ಬಂದಿಗೆ ಗೌರವ ನಮನ ಸಲ್ಲಿಸಿತು.
ಕಾರ್ಯಕ್ರಮದಲ್ಲಿ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯ ನಿವೃತ್ತ ಅಧಿಕಾರಿ ಮತ್ತು ಸಿಬ್ಬಂದಿ ಹಾಗೂ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ, ಮಂಗಳೂರು ವಲಯ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ, ಪಾಂಡೇಶ್ವರ ಮತ್ತು ಕದ್ರಿ ಅಗ್ನಿಶಾಮಕ ಠಾಣಾಧಿಕಾರಿ, ಕದ್ರಿ ಮತ್ತು ಪಾಂಡೇಶ್ವರ ಠಾಣೆಯ ಸಹಾಯಕ ಅಗ್ನಿಶಾಮಕ ಅಧಿಕಾರಿ ಪಾಲ್ಗೊಂಡಿದ್ದರು.
ಅಗ್ನಿಶಾಮಕ ಸೇವಾ ಸಪ್ತಾಹದ ಅವಧಿಯಲ್ಲಿ ಅಗ್ನಿ ಸುರಕ್ಷತೆಯ ಬಗ್ಗೆ ತಿಳುವಳಿಕೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ವಿವಿಧ ಸಂಘಸಂಸ್ಥೆಗಳು, ಕೈಗಾರಿಕಾ ಕೇಂದ್ರಗಳು, ವಿದ್ಯಾ ಸಂಸ್ಥೆಗಳು, ಮಾಲ್, ಬಹುಮಹಡಿ ಕಟ್ಟಡ, ವಾಣಿಜ್ಯ ಸಂಕೀರ್ಣಗಳಲ್ಲಿ ಅಗ್ನಿ ಸುರಕ್ಷತೆ ಬಗ್ಗೆ ಉಪನ್ಯಾಸ, ಪ್ರಾತ್ಯಕ್ಷಿಕೆ, ಅಣುಕು ಪ್ರದರ್ಶನ ಆಯೋಜಿಸಿ ಸಾರ್ವಜನಿಕರಲ್ಲಿ ಅಗ್ನಿ ಸುರಕ್ಷತೆ ಬಗ್ಗೆ ತಿಳುವಳಿಕೆ ನೀಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.