ಮೋದಿ ಆಡಳಿತದಲ್ಲಿ ದೇಶ ಆರ್ಥಿಕ ಸಂಕಷ್ಟದಲ್ಲಿ: ಅಶೋಕ್ ಕೊಡವೂರು
ಉಡುಪಿ, ಎ.14: ಬಿಜೆಪಿ ಜನತೆಗೆ ನೀಡಿದ ಭರವಸೆಗಳಾದ ಭಯೋತ್ಪಾನೆ ನಿಗ್ರಹ, ಸ್ವಿಸ್ ಬ್ಯಾಂಕ್ನಿಂದ ಕಪ್ಪುಹಣ, ರಾಮಮಂದಿರ, ಸಮಾನ ನಾಗರಿಕ ಸಂಹಿತೆ, ಬಡತನ ಹಾಗೂ ಭ್ರಷ್ಟಾಚಾರ ನಿರ್ಮೂಲನ ಮಾಡಲು ಸಂಪೂರ್ಣ ವಿಫಲವಾಗಿದೆ. ಬದಲಾಗಿ ಅಸಮಾನತೆ, ಆರ್ಥಿಕ ಸಂಕಷ್ಟ ಮೊದಲಾದ ಸಮಸ್ಯೆಗಳನ್ನು ದೇಶದಲ್ಲಿ ಹುಟ್ಟುಹಾಕಲಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಆರೋಪಿಸಿದ್ದಾರೆ.
ಮನಮೋಹನ್ ಸಿಂಗ್ ಸರಕಾರ ಏನು ಮಾಡಿದೆ ಎನ್ನುವ ಶೋಭಾ ಕಳೆದ ಐದು ವರ್ಷದಲ್ಲಿ ಮೋದಿ ಮಾಡಿದ ಸಾಧನೆ ಏನು ? ಹೆಸರು ಹೇಳಿ ಕರೆಯುವ ಯಾವುದಾದರೂ ಯೋಜನೆ ಇದ್ದರೆ ಹೇಳಲಿ. ಆಧಾರ್, ಐಎಫ್ಡಿ ಹೂಡಿಕೆ, ನಿರ್ಮಲ್ ಭಾರತ್, ಜಿಎಸ್ಟಿಯಂತಹ ಯುಪಿಎ ಸರಕಾರದ ಯೋಜನೆ ಗಳನ್ನು ಅಂದು ವಿರೋಧಿಸಿ ಇಂದು ಕಾರ್ಯಗತಗೊಳಿಸಿದೆ. ಬಿಜೆಪಿಯ ಈ ನಿರ್ಧಾರದಿಂದ ದೇಶದ ಅಭಿವೃದ್ಧಿ ಕುಂಠಿತಗೊಳ್ಳಲು ಬಿಜೆಪಿ ಕಾರಣಕರ್ತ ವಾಗಿದೆ. ಇದನ್ನು ಬಿಜೆಪಿ ಸಾಧನೆ ಎನ್ನೇಕೇ ಎಂದು ಅವರು ಪ್ರಶ್ನಿಸಿದರು.
ಈ ಬಾರಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಅನೇಕ ಪ್ರಗತಿಪರ ಭರವಸೆ ಗಳನ್ನು ನೀಡಿದೆ. ಬಡತನ ನಿರ್ಮೂಲನಕ್ಕಾಗಿ ಬಡವರಿಗೆ ವಾರ್ಷಿಕ 72,000 ಕನಿಷ್ಠ ಆದಾಯ ಖಾತ್ರಿ ಯೋಜನೆ, ಉದ್ಯೋಗ ಸೃಷ್ಟಿಗಾಗಿ ಔದ್ಯೋಗಿಕ ಕ್ರಾಂತಿ, ಕೃಷಿ ಮತ್ತು ಕೃಷಿ ಕಾರ್ಮಿಕರ ಕಲ್ಯಾಣಕ್ಕಾಗಿ ವಿವಿಧ ಕಾರ್ಯಕ್ರಮಗಳು, ಸಾರ್ವತ್ರಿಕ ಆರೋಗ್ಯ ಸೇವೆ, ಜನತೆಗೆ ಹೊರೆಯಾಗುತ್ತಿರುವ ಜಿಎಸ್ಟಿಯನ್ನು ಏಕರೂಪ ತೆರಿಗೆಯಾಗಿ ಸರಳೀಕರಣ, ಪ್ರತಿ ಮಗುವಿಗೂ ಗುಣಮಟ್ಟದ ಶಿಕ್ಷಣ, ಮಹಿಳೆಯರಿಗೆ ಶೇ.33 ಮೀಸಲು, ಸಾಂವಿಧಾನಿಕ ಸಂಸ್ಥೆಗಳ ರಕ್ಷಣೆ ಸೇರಿದಂತೆ ಅನೇಕ ಭರವಸೆಗಳನ್ನು ಪ್ರಣಾಳಿಕೆಯಲ್ಲಿ ನೀಡಲಾಗಿದೆ ಎಂದರು.
ನೋಟು ರದ್ದತಿ ಮೂಲಕ ಮೋದಿ ಸರಕಾರ ಬಡವರನ್ನು ಶೋಷಿಸುವ, ಹಿಂಸಿಸುವ ಕೆಲಸ ಮಾಡಿದೆ. ಜಿಎಸ್ಟಿ ಕಾರ್ಯಗತಗೊಳಿಸಿ ಐದು ರೀತಿಯ ವಿವಿಧ ತೆರಿಗೆಗಳನ್ನು ವಿಧಿಸಲಾಯಿತು. ಒಂದೆಡೆ ಪೆಟ್ರೋಲ್ ಡೀಸೆಲ್ ದರ ಏರಿಕೆಯಾಗುತ್ತಿದೆ ಮತ್ತೊಂದೆಡೆ ಆರ್ಥಿಕ ಪರಿಸ್ಥಿತಿ ಅಧೋಗತಿಗಿಳಿಸುತ್ತಿದೆ. ಬಡವರು ಹಾಗೂ ದುಡಿಯುವ ವರ್ಗದ ಪರವಾಗಿ ಮೋದಿ ಸರಕಾರ ಯಾವುದೇ ಕಾರ್ಯಕ್ರಮಗಳನ್ನು ರೂಪಿಸಿಲ್ಲ ಎಂದು ಅವರು ಟೀಕಿಸಿದರು.
ಕಳೆದ ಐದು ವರ್ಷಗಳ ಆಡಳಿತಾವಧಿಯಲ್ಲಿ ಬಿಜೆಪಿ ಒಂದೇ ಒಂದು ಗುರುತರ ಸಾಧನೆಯನ್ನು ಮಾಡದೆ ಸುಳ್ಳು ಅಂಕಿ ಅಂಶಗಳನ್ನು ಜನರ ಮುಂದಿಟ್ಟು ಪ್ರಚಾರ ನಡೆಸುತ್ತಿದೆ. ಕಳೆದ ಐದು ವರ್ಷಗಳಲ್ಲಿ ಸಾಧನೆ ಆಧಾರದ ಮೇಲೆ ಮತ ಕೇಳಲು ಸಾಧ್ಯವಿಲ್ಲದೆ ನರೇಂದ್ರ ಮೋದಿ ಭಾವನೆಯ ಮೇಲೆ ಮತ ಯಾಚಿಸುತ್ತಿದ್ದಾರೆ. ಸೋಲಿನ ಭಿತಿಯಲ್ಲಿರುವ ಬಿಜೆಪಿ ಭಾವನಾನ್ಮಕ ವಿಷಯಗಳನ್ನು ಮುನ್ನಲೆಗೆ ತಂದು ಮತ ಯಾಚಿಸುತ್ತಿದೆ. ರಾಮ ಮಂದಿರ, ಶಬರಿ ಮಲೆ ಮಹಿಳೆ ಪ್ರವೇಶ ವಿಚಾರ, ಕಾಶ್ಮೀರದ 370(ಜೆ) ವಿಧಿ ರದ್ದು ಸಹಿತ ಸೈನಿಕರ ರಕ್ಷಣೆ ಹೀಗೆ ಅನೇಕ ಭಾವನಾತ್ಮಕ ವಿಚಾರಗಳು ಬಿಜೆಪಿ ಪ್ರಣಾಳಿಕೆಯಲ್ಲಿ ಸೇರಿದೆ ಎಂದು ಅವರು ದೂರಿದರು.
ದೇಶದ ಅಭಿವೃದ್ಧಿಗೆ ಮತ ನೀಡಿ ಎಂದು ಕೇಳುವ ಬದಲು ರಾಮ ಮಂದಿರ ಹಾಗೂ ಹುತಾತ್ಮರ ಹೆಸರಲ್ಲಿ ಹಾಗೂ ಧರ್ಮದ ಹೆಸರಲ್ಲಿ ಮತ ಯಾಚಿಸುತ್ತಿದೆ. ದಿನ ಬೆಳಗಾದರೆ ಕರ್ನಾಟಕದ ಮೈತ್ರಿ ಸರಕಾರ ಪತನವಾಗುತ್ತಿದೆ ಎಂದು ಜನತೆಯ ಹಾದಿ ತಪ್ಪಿಸುವ ಷಡ್ಯಂತ್ರವನ್ನು ರೂಪಿಸುತ್ತಿದೆ. ಈ ಚುನಾವಣೆಯಲ್ಲಿ ಬಿಜೆಪಿ ಸೋಲು ಅನುಭವಿಸುವ ಮೂಲಕ ಮಗದೊಮ್ಮೆ ಪ್ರಧಾನಿಯಾಗುವ ಮೋದಿಯ ಕನಸು ಭಗ್ನವಾಗಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.