ಪ್ರಮೋದ್ ಮಧ್ವರಾಜ್ ಗೆಲುವು ಖಚಿತ: ವಿನಯ ಕುಮಾರ್ ಸೊರಕೆ
ಕಾಪು, ಎ.14: ಈ ಚುನಾವಣೆ ದೇಶದ ಭವಿಷ್ಯವನ್ನು ತೀರ್ಮಾನಿಸಲಿದೆ. ದೇಶದಲ್ಲಿ ಭಾವನಾತ್ಮಕವಾಗಿ ಜನರನ್ನು ದಿಕ್ಕು ತಪ್ಪಿಸುವ ಶಕ್ತಿಗಳನ್ನು ದೂರ ಇಟ್ಟು ಪ್ರಜಾಪ್ರಭುತ್ವದ ಆಶಯ ಎತ್ತಿ ಹಿಡಿಯುವವರಿಗೆ ಮತ ಚಲಾಯಿಸಬೇಕೆಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.
ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್-ಜೆ.ಡಿಎಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಪರವಾಗಿ ಇಂದು ಹೆಜಮಾಡಿ ಪೇಟೆ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಪಾದಯಾತ್ರೆ ಮೂಲಕ ಮತಯಾಚಿುತ್ತ ಅವರು ಮಾತನಾಡುತಿದ್ದರು.
ದೇಶದ ಐದು ಕೋಟಿ ಬಡ ಕುಟುಂಬಕ್ಕೆ ಮಾಸಿಕ 6000 ರೂ. ನೀಡುವ ಮೂಲಕ ಕನಿಷ್ಠ ಆದಾಯ ಕಲ್ಪಿಸಲಾಗುವುದು. ಈ ಯೋಜನೆಯಡಿ ವಾರ್ಷಿಕ 72,000 ರೂ. ನೀಡಲಾಗುವುದು. ರೈತರಿಗೆ ಸಾಲ ಮನ್ನಾ, ಸಾಲ ಮುಕ್ತಿ ಯೋಜನೆ, ಪ್ರತ್ಯೇಕ ಬಜೆಟ್ ಮಂಡನೆ, ಒಂದೇ ಸ್ಲ್ಯಾಬ್ನ ಅಡಿ ಜಿಎಸ್ಟಿ ಯನ್ನು ತಂದು ರೈತರಿಗೆ ಹಾಗೂ ಬಡ ಮಧ್ಯಮ ಜನತೆ ಸಂತೃಪ್ತಿಯ ಜೀವನ ಸಾಗಿಸುವಂತೆ ಕಾಂಗ್ರೆಸ್ ಕ್ರಮ ಕೈಗೊಳ್ಳಲಿದೆ ಎಂದರು.
ಯಾವುದೇ ಹೊಸ ಉದ್ಯಮಗಳಿಗೆ ಮೊದಲ 3 ವರ್ಷ ಅನುಮತಿ ಕಡ್ಡಾಯ ವನ್ನು ರದ್ದುಗೊಳಿಸಿ ಹೊಸ ಉದ್ಯಮಗಳಿಗೆ ಪ್ರೊತ್ಸಾಹ ನೀಡಲಾಗುವುದು. 2020ರ ಒಳಗೆ ಖಾಲಿ ಇರುವ 22 ಲಕ್ಷ ಸರಕಾರಿ ಹುದ್ದೆಗಳ ಭರ್ತಿಯೊಂದಿಗೆ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗುವುದು. ಪ್ರಮೋದ್ ಮಧ್ವರಾಜ್ ಗೆಲುವು ಖಚಿತ, ಲೋಕಸಭಾ ಕ್ಷೇತ್ರದ ಅಭಿವೃದ್ಧಿ ನಿಶ್ಚಿತ ಎಂದು ವಿನಯ ಕುಮಾರ್ ಸೊರಕೆ ತಿಳಿಸಿದರು.
ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಮಾತನಾಡಿ, ಕಳೆದ ಐದು ವರ್ಷ ಗಳಿಂದ ಜನರ ಸಂಪರ್ಕಕ್ಕೆ ಸಿಗದೇ ಇದ್ದ ಸಂಸದರನ್ನು ನೀವು ಆಯ್ಕೆ ಮಾಡು ತ್ತೀರೋ ಎಂಬ ಪ್ರಶ್ನೆ ನಿಮ್ಮ ಮುಂದೆ ಇಡುತ್ತಿದ್ದೇನೆ. ನಾನು ಸಚಿವನಾಗಿದ್ದಾಗ ಎಲ್ಲಾ ವಿಧಾನಸಭಾ ಕ್ಷೇತ್ರದ ಜನೆಯ ಸಮಸ್ಯೆಗೆ ಸ್ಪಂದಿಸಿರುತ್ತೇನೆ. ವಿಶೇಷವಾಗಿ ದಿನದ 24 ಗಂಟೆಗಳ ಅವಧಿಯೂ ವಿದ್ಯುತ್ ಪೂರೈಕೆಯಾಗುವಂತೆ ಪ್ರಯತ್ನ ಮಾಡಿದ್ದೇನೆ. ಮೀನುಗಾರರ ಸಮಸ್ಯೆ, ಮರಳುಗಾರಿಕೆ ಸಮಸ್ಯೆ, ನಿರುದ್ಯೋಗ ಸಮಸ್ಯೆ, ಅಲ್ಪಸಂಖ್ಯಾತರ ಸಮಸ್ಯೆ ಅಲ್ಲದೆ ಪ್ರಮುಖ ಸಮಸ್ಯೆಗಳನ್ನು ಸಂಸತ್ತಿನಲ್ಲಿ ನಿಮ್ಮ ಧ್ವನಿಯಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ.ಗಪೂರ್, ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಅಬ್ದುಲ್ ಅಜೀಜ್, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಅಲೆವೂರು ಹರೀಶ್ ಕಿಣಿ, ಸರಸು ಡಿ.ಬಂಗೇರ, ನವೀನ್ಚಂದ್ರ ಸುವರ್ಣ, ವಿಶ್ವಾಸ್ ವಿ.ಅಮೀನ್, ಎಂ.ಪಿ.ಮೊಯಿದಿನಬ್ಬ, ಗಣೇಶ್ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.