ಉಡುಪಿ: ವಸಂತ ಧಾರ್ಮಿಕ ಶಿಬಿರ ಉದ್ಘಾಟನೆ
ಉಡುಪಿ, ಎ.14: ಉಡುಪಿ ಪರ್ಯಾಯ ಪಲಿಮಾರು ಮಠ ಶ್ರೀಕೃಷ್ಣ ಮಠದ ಆಶ್ರಯದಲ್ಲಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಹಮ್ಮಿಕೊಳ್ಳಲಾದ ವಸಂತ ಧಾರ್ಮಿಕ ಶಿಬಿರವನ್ನು ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ ಉದ್ಘಾಟಿಸಿದರು.
ಇಂದಿನ ದಿನಗಳಲ್ಲಿ ಗಂಡು ಹೆಣ್ಣು ಬೇಧವಿಲ್ಲದೆ ಹಿರಿಯ ಕಿರಿಯರೆಲ್ಲರಿಗೂ ಅವಶ್ಯಕವಾದ ಶಾಲಾ ಪಠ್ಯದಲ್ಲಿ ಸಿಗದೇ ಇರುವ ನಮ್ಮ ಹಿಂದಿನವರ ಆಧ್ಯಾತ್ಮಿಕ ಸಂಪ್ರದಾಯ, ಇತಿಹಾಸ ಪುರಾಣಗಳನ್ನು ತಿಳಿದುಕೊಂಡು ನಮ್ಮ ಮನೆಯಲ್ಲಿ ನಡೆಯುವ ಧಾರ್ಮಿಕ ಕಾರ್ಯಗಳನ್ನು ನಾವೇ ನಡೆಸುವಂತಾಗಬೇಕೆಂದು ಇಂತಹ ಶಿಬಿರಗಳನ್ನು ನಡೆಸಲಾಗುತ್ತಿದೆ ಎಂದರು.
ಶ್ರೀಸುವಿದ್ಯೇಂದ್ರತೀರ್ಥ ಸ್ವಾಮೀಜಿ ಮಾತನಾಡಿ, ಈ ಶಿಬಿರವು ನಮ್ಮ ತೇಜಸ್ಸನ್ನು ವೃದ್ಧಿಸಿ, ಧರ್ಮಾಚರಣೆಯ ಬಗ್ಗೆ ನಮ್ಮ ಮಕ್ಕಳಿಗೆ ಸಣ್ಣ ವಯಸ್ಸಿನಲ್ಲಿ ಕಲಿಸಿದರೆ ಮುಂದಿನ ಪೀಳಿಗೆಗೆ ಸಂಪ್ರದಾಯ, ಆಚರಣೆಗಳು ಉಳಿಯುತ್ತದೆ. ಧರ್ಮಾಚರಣೆಯಿಂದ ಸಂಸ್ಕೃತಿ ಉಳಿಸಿ ದೇಶಕ್ಕೆ ಸುಭಿಕ್ಷೆ ಆಗುತ್ತದೆ ಎಂದು ಹೇಳಿದರು.
ಮಠದ ವಿದ್ವಾಂಸ ಕಲ್ಮಂಜೆ ವಾಸುದೇವ ಉಪಾಧ್ಯಾಯ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.