ನಳಿನ್ ಕುಮಾರ್ ಕಟೀಲ್ ಸೋಲಿಸಿ: ದ.ಕ. ಜಿಲ್ಲಾ ಜನಪರ ಸಂಘಟನೆಗಳ ಜಂಟಿ ಮನವಿ
ಮಂಗಳೂರು, ಎ.14: ಸಾಮರಸ್ಯಕ್ಕೆ ಹೆಸರಾಗಿದ್ದ ದ.ಕ. ಜಿಲ್ಲೆಯು ಕಳೆದ ಎರಡು ದಶಕಗಳಿಂದ ಅಭಿವೃದ್ಧಿಯಲ್ಲಿ ಹಿನ್ನಡೆ ಕಾಣುತ್ತಿದೆ. ಮತೀಯ ಸಂಘರ್ಷದಿಂದ ಸಾಮರಸ್ಯಕ್ಕೆ ಧಕ್ಕೆಯಾಗಿದೆ. ಇದಕ್ಕೆ ಕಾರಣವಾಗಿರುವ ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ಸೋಲಿಸಲು ಜನಪರ ಸಂಘಟನೆಗಳು ಒತ್ತಾಯಿಸಿವೆ.
ನಗರದ ಖಾಸಗಿ ಹೋಟೆಲ್ನಲ್ಲಿ ರವಿವಾರ ಜಂಟಿಯಾಗಿ ನಡೆದ ಸುದ್ದಿಗೋಷ್ಠಿಯಲ್ಲಿ, ಜಿಲ್ಲೆಯ ಸಮಾನಮನಸ್ಕ ದಲಿತ, ರೈತ, ವಿದ್ಯಾರ್ಥಿ, ಯುವಜನ, ಕಾರ್ಮಿಕ, ಮೀನುಗಾರ ಸಂಘಟನೆಗಳು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಅವರನ್ನು ಸೋಲಿಸಲು ಪಣತೊಟ್ಟು ಜಿಲ್ಲೆಯ ಜನರಲ್ಲಿ ಮನವಿ ಮಾಡಿವೆ.
ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ, ಜಿಲ್ಲೆಯ ಇಂದಿನ ಈ ಸ್ಥಿತಿಗೆ ಕಳೆದ ಮೂರು ದಶಕಗಳಿಂದ ಬಿಜೆಪಿ ಸತತ ಗೆಲುವು ಕಾರಣ. ಜಿಲ್ಲೆಯ ಜನತೆ ಈ ಬಾರಿಯ ಚುನಾವಣೆಯಲ್ಲಿ ಇಂತಹ ತಪ್ಪು ಮರುಕಳಿಸದಂತೆ ಎಚ್ಚರ ವಹಿಸಬೇಕು. ದೇಶದ ಪಾಲಿಗೆ ನಿರ್ಣಾಯಕವಾಗಿರುವ ಈ ಚುನಾವಣೆ ಯಲ್ಲಿ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ರನ್ನು ಸೋಲಿಸುವ ಮೂಲಕ ಬದುಕಿನ ಪ್ರಶ್ನೆಗಳು ಮುಂಚೂಣಿಗೆ ಬರುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
70-80ರ ದಶಕದಲ್ಲಿ ಗೇಣಿದಾರ ರೈತರ, ಬೀಡಿ, ಹೆಂಚು, ಗೋಡಂಬಿ ಮುಂತಾದ ಕ್ಷೇತ್ರಗಳ ಕಾರ್ಮಿಕರ, ಮೀನುಗಾರರ, ಬಡವರ ವಿಷಯಗಳು ಜಿಲ್ಲೆಯ ರಾಜಕಾರಣವನ್ನು ನಿರ್ಧರಿಸುತ್ತಿದ್ದವು. ಅಂದು ಬದುಕಿನ ಪ್ರಶ್ನೆಗಳ ಆಧಾರದಲ್ಲಿ ನಡೆಯುತ್ತಿದ್ದ ರಾಜಕೀಯ ಚರ್ಚೆಗಳಿಂದಾಗಿಯೇ ಮಂಗಳೂರಿಗೆ ವಿಮಾನ ನಿಲ್ದಾಣ, ಬಂದರು, ಇಂಜಿನಿಯರಿಂಗ್ ಕಾಲೇಜುಗಳು ಬಂದವು ಎಂದು ಹೇಳಿದರು.
ಬಿಜೆಪಿಯಿಂದ ಮತೀಯ ಉನ್ಮಾದ ಸೃಷ್ಟಿ: ಲ್ಪಸಂಖ್ಯಾತರು, ದಲಿತರು, ಆದಿವಾಸಿಗಳು, ಮೀನುಗಾರರು ಸೇರಿದಂತೆ ಸಣ್ಣಪುಟ್ಟ ಹಿಂದುಳಿದ ಜಾತಿಗಳು ತಮ್ಮ ರಾಜಕೀಯ ಅಸ್ಥಿತ್ವವನ್ನೇ ಕಳೆದುಕೊಳ್ಳತೊಡಗಿವೆ. ಕಳೆದ ಮೂರು ದಶಕಗಳಲ್ಲಿ ಬಿಜೆಪಿ ಮತೀಯ ಉನ್ಮಾದವನ್ನು ಸೃಷ್ಟಿಸಿ, ಹಿಂದುತ್ವದ ಆಧಾರ ದಲ್ಲಿ ಚುನಾವಣೆಯಲ್ಲಿ ಗೆಲುವು ಸಾಧಿಸತೊಡಗಿದ ನಂತರ ಜಿಲ್ಲೆ ಎಲ್ಲ ರಂಗಗಳಲ್ಲಿಯೂ ಹಿನ್ನಡೆ ಸಾಧಿಸತೊಡಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಬಡವರ, ಜನಸಾಮಾನ್ಯರ ಪ್ರಶ್ನೆಗಳು ಅಂಚಿಗೆ ಸರಿದಿವೆ. ಬೀಡಿ, ಗೋಡಂಬಿ, ಹೆಂಚು ಸಹಿತ ಸ್ಥಳೀಯ ಸಣ್ಣ ಕೈಗಾರಿಕೆಗಳು ಬಿಕ್ಕಟ್ಟಿಗೆ ಸಿಲುಕಿವೆ. ಅಲ್ಲಿ ದುಡಿಯುತ್ತಿರುವ ಕಾರ್ಮಿಕರ ಸಂಕಷ್ಟಗಳನ್ನು ಕೇಳುವವರಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಉದ್ಯೋಗಗಳನ್ನು ಹೊಸದಾಗಿ ಸೃಷ್ಟಿಸುವ ಯಾವ ಉದ್ದಿಮೆಗಳೂ ಜಿಲ್ಲೆಗೆ ಕಾಲಿಡದೆ ನಿರುದ್ಯೋಗ ಬಹುದೊಡ್ಡ ಸಮಸ್ಯೆಯಾಗಿ ಎದ್ದು ನಿಂತಿದೆ ಎಂದರು.
ವಿದ್ಯಾವಂತ ಯುವಜನತೆ ತಮ್ಮ ಅರ್ಹತೆಗೆ ತಕ್ಕ ಉದ್ಯೋಗ ದೊರಕದೆ ನಿರುದ್ಯೋಗಿಗಳಾಗಿಯೊ, ತಮ್ಮ ಅರ್ಹತೆಗೆ ತಕ್ಕುದಲ್ಲದ ಅರೆ ಉದ್ಯೋಗಗಳನ್ನು ಮಾಡುತ್ತಲೋ ಭವಿಷ್ಯದ ಬಗ್ಗೆ ಆತಂಕಿತರಾಗಿದ್ದಾರೆ. ಕರಾವಳಿಯ ಯುವಜನರ ಪಾಲಿಗೆ ಉದ್ಯೋಗದ ಬಹುದೊಡ್ಡ ಆಸರೆಯಾಗಿದ್ದ ಗಲ್ಫ್ ರಾಷ್ಟ್ರಗಳು ಸ್ವದೇಶೀಕರಣದ ನಿಯಮಗಳನ್ನು ಜಾರಿಗೆ ತಂದುದರಿಂದ ಸಾವಿರಾರು ಯುವಜನರು ಇಂದು ಬರಿಗೈಯಲ್ಲಿ ಜಿಲ್ಲೆಗೆ ವಾಪಸಾಗುತ್ತಿದ್ದಾರೆ. ಅಂತಹ ಸಂತ್ರಸ್ತರ ನೆರವಿಗೆ ಕೇಂದ್ರದ ಬಿಜೆಪಿ ಸರಕಾರವಾಗಲಿ, ಇಲ್ಲಿನ ಸಂಸದ ನಳಿನ್ಕುಮಾರ್ರಾಗಲಿ ಯಾವುದೇ ಪರಿಹಾರ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಟೀಕಿಸಿದರು.
ಜನತೆ ಯಾವುದೇ ಕಾರಣಕ್ಕೂ ಮತ ವಿಭಜನೆಗೆ ಅವಕಾಶ ನೀಡದೆ ಬಿಜೆಪಿಯನ್ನು ಸೋಲಿಸಲು ಸಾಧ್ಯತೆ ಇರುವ ಮೈತ್ರಿ ಪಕ್ಷದ ಅಭ್ಯರ್ಥಿ ಮಿಥುನ್ ರೈ ಅವರಿಗೆ ಮತ ಚಲಾಯಿಸಿ ಬಿಜೆಪಿ ಸೋಲನ್ನು ಖಾತರಿಪಡಿಸಬೇಕು ಎಂದು ವಿನಂತಿಸಿದರು.
ಆಧುನಿಕ ಮೀನುಗಾರಿಕಾ ಪದ್ಧತಿಯಿಂದ ಸ್ಥಳೀಯ ಮೀನುಗಾರ ಸಮುದಾಯ ಎದುರಿಸುತ್ತಿರುವ ಸವಾಲು, ಅವರ ಬೇಡಿಕೆಗಳು ಕನಿಷ್ಠ ಚರ್ಚೆಯೂ ಆಗುತ್ತಿಲ್ಲ. ಆದರೆ ಈ ಎಲ್ಲ ಸಮಸ್ಯೆ, ಬಿಕ್ಕಟ್ಟುಗಳನ್ನು ಹುಸಿ ಧಾರ್ಮಿಕತೆ, ಪರಧರ್ಮ ದ್ವೇಷ, ಮತೀಯ ಉನ್ಮಾದ ಗುರಾಣಿಯ ಅಡಿಯಲ್ಲಿ ಮರೆಮಾಚಿ ಬಿಜೆಪಿ ಜನರನ್ನು ದಾರಿ ತಪ್ಪಿಸಿ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಾ ಬಂದಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಡಿಎಸ್ಎಸ್ ರಾಜ್ಯ ಸಂಘಟನಾ ಸಂಚಾಲಕ ಎಂ.ದೇವದಾಸ್, ಮೀನುಗಾರ ಮುಖಂಡ ದಯಾನಂದ ಕೋಟ್ಯಾನ್, ರಾಜ್ಯ ರೈತ ಸಂಘ-ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ರವಿಕಿರಣ ಪುಣಚ, ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಾದವ ಶೆಟ್ಟಿ, ಡಿಎಸ್ಎಸ್ ಜಿಲ್ಲಾ ಸಂಚಾಲಕ ರಘು ಎಕ್ಕಾರು, ನಾಡದೋಣಿ ಮೀನುಗಾರರ ಸಂಘದ ಮುಖಂಡ ಶರತ್ ಗುಡ್ಡೆಕೊಪ್ಲ, ಭಾರತ ವಿದ್ಯಾರ್ಥಿ ಫೆಡರೇಶನ್ ಜಿಲ್ಲಾಧ್ಯಕ್ಷ ಚರಣ್ ಶೆಟ್ಟಿ, ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ರಾಜ್ಯ ರೈತ ಸಂಘದ ಬಂಟ್ವಾಳ ತಾಲೂಕು ಪ್ರಧಾನ ಕಾರ್ಯದರ್ಶಿ ಓಸ್ವಾಲ್ಡ್ ಪ್ರಕಾಶ್ ಫೆರ್ನಾಂಡೀಸ್ ಉಪಸ್ಥಿತರಿದ್ದರು.